ಹುಬ್ಬಳ್ಳಿ-ಧಾರವಾಡ: ಸ್ತಬ್ಧಗೊಂಡ ಸಾರಿಗೆ ಸಂಚಾರ
ಹುಬ್ಬಳ್ಳಿ, ಜುಲೈ, 25: ವೇತನ ಪರಿಷ್ಕರಣೆ ಸೇರಿದಂತೆ ಇತರೆ 42 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ಇಲಾಖಾ ಸಿಬ್ಬಂದಿಯ ಮುಷ್ಕರ ನಗರದಲ್ಲಿ ರವಿವಾರ ಸಂಜೆಯಿಂದ ಆರಂಭವಾಗಿತ್ತು. ಸೋಮವಾರ ಕೂಡಾ ಕೆಎಸ್ಸಾರ್ಟಿಸಿ, ನಗರ ಸಾರಿಗೆ ಇಲ್ಲದೆ ಜನ ಪರದಾಡಿದ್ದಾರೆ.
ನಗರ ಸಾರಿಗೆ ಬಸ್ ಗಳನ್ನು ಡಿಪೋಗಳಲ್ಲಿ ಬಿಟ್ಟು ಚಾಲಕರು ಮತ್ತು ನಿರ್ವಾಹಕರು ತಮ್ಮ ಮನೆಗೆ ಮರಳಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಹೋಗುವ ಬಸ್ ಗಳನ್ನೂ ಕೂಡ ಡಿಪೋದಲ್ಲಿ ನಿಲ್ಲಿಸಲಾಗಿದೆ.
ನಗರದ ಹೊಸ ಬಸ್ ನಿಲ್ದಾಣ ಮತ್ತು ಹಳೇ ಬಸ್ ನಿಲ್ದಾಣಗಳಲ್ಲಿ ಬಸ್ ಗಳು ನಿಂತಿವೆ. ಚಾಲಕರು ಮತ್ತು ನಿರ್ವಾಹಕರೊಂದಿಗೆ ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿರುವುದರಿಂದ ನಗರದ ವಾಯವ್ಯ ಸಾರಿಗೆ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಂಡು ಬಂದಿದೆ.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

ಡಿಪೋದಲ್ಲಿನ ನೌಕರರು ಕೂಡ ಮುಷ್ಕರಕ್ಕೆ ಯೂನಿಯನ್ ಕರೆ ಕೊಟ್ಟಿರುವುದರಿಂದ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಾಗಿದೆ ಎನ್ನುತ್ತಾರೆ.
ಹಣ ವಾಪಸ್ : ಪ್ರಯಾಣಿಸಲು ಮೊದಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣ ವಾಪಸ್ ಕೊಡಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆ ಚೀಪ್ ಟ್ರಾಫಿಕ್ ಕಂಟ್ರೋಲರ್ ಎಸ್.ವಿ. ಹುಲ್ಯಾಳಕರ ಹೇಳಿದ್ದಾರೆ. ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡುವುದಿಲ್ಲ ಎಂದು ಒನ್ ಇಂಡಿಯಾಕ್ಕೆ ತಿಳಿಸಿರುವ ಹುಲ್ಯಾಳಕರ, ಸ್ವಇಚ್ಛೆಯಿಂದ ಸಿಬ್ಬಂದಿ ಕಾರ್ಯ ನಿರ್ವಹಿಸುವವರು ಬರಬಹುದು ಎಂದು ಹೇಳಿದ್ದಾರೆ.
ಮುಷ್ಕರದಿಂದ ನಷ್ಟ : 23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳು ಕೆಲಸಕ್ಕೆ ಹಾಜರಾಗಲೇಬೇಕೆಂದು ಧಮ್ಕಿ ಹಾಕುತ್ತಿದ್ದಾರೆಂದು ಯೂನಿಯನ್ ಉಪಾಧ್ಯಕ್ಷ ಆರ್.ಎಫ್.ಕವಳಿಕಾಯಿ ಹೇಳಿದ್ದಾರೆ.
8 ವಿಭಾಗಗಳ 48 ಡಿಪೋಗಳಲ್ಲಿನ 4750 ಬಸ್ ಗಳು ಸ್ಥಗಿತಗೊಳ್ಳಲಿವೆ.
ವೇತನ ಹೆಚ್ಚಳ ಮಾಡಿದಲ್ಲಿ 280 ಕೋ. ರೂ. ಹೊರೆ ಬೀಳುತ್ತದೆ, ವೇತನ ಹೆಚ್ಚಳ ಮಾಡಿದಲ್ಲಿ ಸಂಸ್ಥೆಯ ಉತ್ಪನ್ನವನ್ನು ಸಿಬ್ಬಂದಿಯ ವೇತನಕ್ಕೆ ಮೀಸಲಿಡಬೇಕಾಗುತ್ತದೆ ಎಂದು ಸಂಸ್ಥೆಯ ಎಂ.ಡಿ. ವಿನೂತ್ ಪ್ರಿಯ ಹೇಳಿದ್ದಾರೆ.
ಮುಷ್ಕರದಿಂದ ದಿನಕ್ಕೆ 4.50 ಲಕ್ಷ ರೂ.ನಷ್ಟು ನಷ್ಟವಾಗಲಿದೆ ಎಂದಿರುವ ವಿನೂತ್, ಸೂಕ್ತ ರಕ್ಷಣೆಗೆ ಕೋರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.












Click it and Unblock the Notifications