ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಬಾಕ್ಸ್ ಬಂದಿದ್ದು ಎಲ್ಲಿಂದ?
ಹುಬ್ಬಳ್ಳಿ, ಅಕ್ಟೋಬರ್ 22: ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಿದೆ.
ಬಾಂಬ್ ನಿಷ್ಕ್ರಿಯ ದಳ ಅನುಮಾನಾಸ್ಪದ ಬಾಕ್ಸ್ ಗಳನ್ನು ರೈಲ್ವೆ ನಿಲ್ದಾಣದ ಹೊರಗೆ ಇರಿಸಿದ್ದು, ರೈಲ್ವೆ ನಿಲ್ದಾಣದ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಮರಳಿನ ಚೀಲಗಳ ರಾಶಿಯಲ್ಲಿ ಹತ್ತಕ್ಕೂ ಹೆಚ್ಚು ಬಾಕ್ಸ್ ಗಳನ್ನ ಇಡಲಾಗಿದ್ದು, ಅವುಗಳನ್ನು ಕೊಲ್ಹಾಪುರದ ಎಸ್ಪಿ, ಎಸ್ಪಿ ಬೋರಲಿಂಗಯ್ಯ ಒಳಗೊಂಡ ತಂಡ ತನಿಖೆ ನಡೆಸುತ್ತಿದೆ.
ಬೆಂಗಳೂರಿನಿಂದ ಎಫ್ ಎಸ್ ಎಲ್ ತಂಡ ಆಗಮಿಸಿ ಸ್ಫೋಟಕ್ಕೆ ಬಳಸಿದ ಬಾಂಬ್ ಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿದೆ.

ಜೊತೆಗೆ ಘಟನೆಯ ತನಿಖೆಗಾಗಿ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ವಿಜಯವಾಡದಿಂದ ಹುಬ್ಬಳ್ಳಿವರೆಗೆ ಬಾಕ್ಸ್ ಬಂದಿರುವ ಬಗ್ಗೆ ಮಾಹಿತಿ ಇದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿರುವುದಾಗಿ ರೈಲ್ವೆ ಎಸ್ ಪಿ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ. ಇದೇ ರೀತಿಯಲ್ಲಿ ಕೊಲ್ಲಾಪುರದಲ್ಲೂ ಘಟನೆ ನಡೆದಿದ್ದು ಅಲ್ಲಿನ ಅಧಿಕಾರಿಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
"ಬಾಂಬ್ ಬ್ಲಾಸ್ಟ್ ಕುರಿತು ತನಿಖೆ ನಡೆಯುತ್ತಿದೆ. ಬಾಕ್ಸ್ ಎಲ್ಲಿಂದ ಎಲ್ಲಿಗೆ ಬಂದಿದೆ ಎಂಬುದರ ಕುರಿತು ತನಿಖೆ ಮಾಡಲಾಗುತ್ತಿದೆ, ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ತನಿಖೆ ಮುಗಿಯುವವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಕೊಲ್ಲಾಪುರ ಎಸ್ಪಿ ಹುಬ್ಬಳ್ಳಿಗೆ ಬಂದಿದ್ದಾರೆ, ಅವರು ಸಹ ತನಿಖೆ ಮಾಡುತ್ತಿದ್ದಾರೆ. ಬಾಂಬ್ ಬಾಕ್ಸ್ ಮೇಲೆ ಬರೆದಿರುವ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಾಂಬ್ ನ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿ ನಂತರ ಮಾಹಿತಿ ನೀಡಲಾಗುವುದು" ಎಂದು ಮಾಹಿತಿ ನೀಡಿದ್ದಾರೆ ಆರ್ ಪಿಎಫ್ ಡಿಜಿ ಅರುಣಕುಮಾರ್.












Click it and Unblock the Notifications