ಕಲಘಟಗಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ನಾಗರಾಜ ಛಬ್ಬಿಗೆ ಟಿಕೆಟ್
ಹುಬ್ಬಳ್ಳಿ, ಏಪ್ರಿಲ್ 13: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದ್ದು, ಈ ಬಾರಿ ಶತಾಯಗತಾಯ ಮತ್ತೆ ಅಧಿಕಾರ ಬರಲು ಪಣ ತೊಟ್ಟಿರುವ ಬಿಜೆಪಿ ಬುಧವಾರ ತಡರಾತ್ರಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಬಾರಿ ಬಿಜೆಪಿ ಹೈಮಾಂಡ್ ಅನೇಕ ಹಾಲಿ ಶಾಸಕರಿಗೆ ಕೋಕ್ ಕೊಟ್ಟಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದವರಿಗೆ ಸ್ಪರ್ಧೆಗೆ ಅವಕಾಶ ನೀಡಿದೆ.
ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಛಬ್ಬಿಗೆ ಬಿಜೆಪಿ ಮಣೆ ಹಾಕಿದ್ದು, ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಬಿಜೆಪಿ ನಾಯಕರು ಅವಕಾಶ ಕಲ್ಪಿಸಿದ್ದಾರೆ. ಈಗಾಗಲೇ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಅವರಿಗೆ ಟಿಕೆಟ್ ತಪ್ಪಿಸಿ ನಾಗರಾಜ ಛಬ್ಬಿಗೆ ಟಿಕೆಟ್ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಿ.ಎಂ.ನಿಂಬಣ್ಣವರ ಕಲಘಟಗಿ ಬಿಜೆಪಿ ಟಿಕೆಟ್ ತಮಗೇ ಸಿಗುವ ನಿರೀಕ್ಷೆಯಲ್ಲಿದ್ದರು. ಈ ಹಿಂದೆಯೇ ತಮ್ಮನ್ನು ಹೊರತುಪಡಿಸಿ ಬಿಜೆಪಿ ಬೇರೆ ಯಾರಿಗಾದರೂ ಟಿಕೆಟ್ ನೀಡಿದೆ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಬಿಜೆಪಿ ಹೈ ಕಮಾಂಡ್ ಕಾಂಗ್ರೆಸ್ ಪಕ್ಷದಿಂದ ಬಂದಿರುವ ನಾಗರಾಜ ಛಬ್ಬಿಗೆ ಟಿಕೆಟ್ ನೀಡಿದ್ದು, ಸಿ.ಎಂ.ನಿಂಬಣ್ಣವರ ಮುಂದಿನ ನಿರ್ಧಾರದ ಬಗ್ಗೆ ಕಾದು ನೋಡಬೇಕಿದೆ.
ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಿಜೆಪಿ ಆಕಾಂಕ್ಷಿಗಳು
ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ.ಎಸ್. ಪಾಟೀಲ, ಸದಾನಂದ ಚಿಂತಾಮಣಿ, ಪಿ.ಪಿ. ಹೊನ್ನಳ್ಳಿ, ಕಲ್ಮೇಶ ಹಾವೇರಿ ಪೇಟ, ಶಂಕರ್ ಬಸವರೆಡ್ಡಿ ಹಾಗೂ ಮಾಜಿ ಮೇಯರ್ ಶಿವು ಹಿರೇಮಠ ಕೂಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಂಗ್ರೆಸ್ ಟಿಕೆಟ್ ಗಾಗಿ ಸಂತೋಷ್ ಲಾಡ್ ಮತ್ತು ನಾಗರಾಜ ಛಬ್ಬಿ ನಡುವೆ ಭಾರೀ ಟಿಕೆಟ್ ಫೈಟ್ ಆರಂಭಗೊಂಡಿತ್ತು. ಇವರಿಬ್ಬರ ನಡುವಿನ ಟಿಕೆಟ್ ವಾರ್ ಕಾಂಗ್ರೆಸ್ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿತ್ತು. ಒಂದೇ ಪಕ್ಷದಲ್ಲಿದ್ದ ಇಬ್ಬರ ನಡುವೆ ವಾದ-ಪ್ರತಿವಾದರ ತಾರಕ್ಕೇರಿತ್ತು. ಹೀಗಾಗಿ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕಲಘಟಗಿ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ.
ಕಲಘಟಗಿ: ಕಾಂಗ್ರೆಸ್ನಿಂದ ಸಂತೋಷ್ ಲಾಡ್ಗೆ ಸ್ಪರ್ಧೆಗೆ ಅವಕಾಶ
ಕೊನೆಗೂ ಅಳೆದು ತೂಗಿ ಎರಡನೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಲಘಟಗಿಯಿಂದ ಸಂತೋಷ್ ಲಾಡ್ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ನಾಗರಾಜ ಛಬ್ಬಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ದೃಢ ನಿರ್ಧಾರ ತೆಗೆದುಕೊಂಡ ನಾಗರಾಜ ಛಬ್ಬಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ್ ಛಬ್ಬಿ ಏಪ್ರಿಲ್ 9ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ನಾಗರಾಜ್ ಛಬ್ಬಿಗೆ ಬಿಜೆಪಿ ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಾಗರಾಜ್ ಛಬ್ಬಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಸದ್ಯ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನಾಗರಾಜ್ ಛಬ್ಬಿ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.












Click it and Unblock the Notifications