ಕಪ್ಪತಗುಡ್ಡ ರಕ್ಷಣೆಗೆ ಫೆ. 13 ರಿಂದ ಅಹೋರಾತ್ರಿ ಧರಣಿ: ಎಸ್ ಆರ್. ಹಿರೇಮಠ್
ಗದಗ ಬಳಿ ಇರುವ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಫೆ. 13 ರಿಂದ ಫೆ. 15 ರವರೆಗೆ ಗದುಗಿನ ಗಾಂಧಿ ಪ್ರತಿಮೆ ಬಳಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ಧೇವೆ ಎಂದು ಹಿರೇಮಠ ಹೇಳಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ, 9: ಗದಗ ಬಳಿ ಇರುವ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಫೆ. 13 ರಿಂದ ಫೆ. 15 ರವರೆಗೆ ಗದುಗಿನ ಗಾಂಧಿ ಪ್ರತಿಮೆ ಬಳಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ಧೇವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಹೇಳಿದ್ದಾರೆ.
ಹುಬ್ಬಳ್ಳಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕಪ್ಪತಗುಡ್ಡ ಉಳಿಸಿ ಹೋರಾಟ ಸಮಿತಿಯಿಂದ ಹಲವಾರು ಕಡೆಗಳಲ್ಲಿ ಜನಾಂದೋಲನ ಏರ್ಪಡಿಸಲಾಗಿದೆ. ಈಗ ಎರಡನೇ ಹಂತದ ಜನಾಂದೋಲನ ಮಾಡಲಾಗುತ್ತಿದೆ. ಗದಗನ ತೋಂಟದಾರ್ಯ ಮಠದ ಮಹಾಸ್ವಾಮೀಜಿಯವರು ಕಪ್ಪತಗುಡ್ಡ ಉಳಿಸಿ ಕೊಡಿ ಎಂದು ಸರಕಾರದ ಮೇಲೆ ಒತ್ತಡ ಹೇರಲು ಡಂಬಳ ಗ್ರಾಮದಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದರು.[ಗದಗದಲ್ಲಿನ ಕಪ್ಪತ್ತಗುಡ್ಡ ವನ್ಯಧಾಮವೆಂದು ಘೋಷಣೆ]
ಸರಕಾರ ಬಲ್ದೋಟಾ ಕಂಪನಿಗೆ ಬಂಗಾರದ ಗಣಿಗಾರಿಕೆಗೆ ಅವಕಾಶ ಕೊಟ್ಟಲ್ಲಿ ಇಡೀ ಕಪ್ಪತಗುಡ್ಡದ ಪರಿಸರ ನಾಶವಾಗಲಿದೆ. ಸೋಡಿಯಂ ಸೈನೇಡ್ ನಂತಹ ರಾಸಾಯನಿಕ ದ್ರಾವಣವನ್ನು ಗಣಿಗಾರಿಕೆಗೆ ಬಳಸುವುದರಿಂದ ಭೋಪಾಲ್ ನಲ್ಲಿ ನಡೆದ ದುರಂತ ಇಲ್ಲಿಯೂ ಆಗಬಹುದು. ಜನರಿಗೆ ರೋಗ ಪೀಡಿತರಾಗುವ ಭಯ ಮೂಡಿದ್ದು, ಕೂಡಲೇ ಸರಕಾರ ತನ್ನ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.[ವಿದ್ಯಾರ್ಥಿಯ ತಲೆ ಬೋಳಿಸಿ ಕ್ರೌರ್ಯ ಮೆರೆದ ಹುಬ್ಬಳ್ಳಿ ಮುಖ್ಯ ಶಿಕ್ಷಕಿ]
ಅಹೋರಾತ್ರಿ ಧರಣಿಯಲ್ಲಿ ಎಚ್.ಎಸ್.ದೊರೆಸ್ವಾಮಿ, ದೇವನೂರು ಮಹಾದೇವ, ಕೆ.ಎಸ್. ಪುಟ್ಟಣ್ಣಯ್ಯ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸಚಿವ ಎಚ್. ಕೆ. ಪಾಟೀಲ್ ಧರಣಿ ನಿರತ ಸ್ಥಳಕ್ಕೆ ಫೆ. 15 ರೊಳಗಾಗಿ 'ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ'ವೆಂದು ಘೋಷಿಸಿರುವ ಆದೇಶದ ಪ್ರತಿಯೊಂದಿಗೆ ಬರಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ, ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹಿರೇಮಠ ಎಚ್ಚರಿಸಿದ್ದಾರೆ.