ಹುಬ್ಬಳ್ಳಿಯಲ್ಲಿ 'ಚೌಕ' ಚಿತ್ರತಂಡದ ವಿಜಯೋತ್ಸವ
ಹುಬ್ಬಳ್ಳಿ, ಫೆಬ್ರವರಿ, 17 : ಹುಬ್ಬಳ್ಳಿಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಚೌಕ' ಕನ್ನಡ ಚಲನಚಿತ್ರ ತಂಡ ತನ್ನ ವಿಜಯೋತ್ಸವವನ್ನು ನಗರದಲ್ಲಿ ಗುರುವಾರ ಆಯೋಜಿಸಿತ್ತು. ಪ್ರೇಕ್ಷಕ ಮತ್ತು ವಿಮರ್ಶಕರಿಂದ ಹೊಗಳಿಸಿಕೊಂಡಿರುವ ಚೌಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ.
ಈ ಅಂಗವಾಗಿ ನಗರದ ಪತ್ರಕರ್ತರ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ತರುಣ ಸುಧೀರ್, ಸಿನಿಮಾ ಬಿಡುಗಡೆ ಆಗುವುದಕ್ಕಿಂತಲೂ ಮೊದಲು ಪ್ರಚಾರ ಎಲ್ಲರೂ ಮಾಡುತ್ತಾರೆ. ಆದರೆ ನಾವು ಚಿತ್ರ ನೋಡುವ ಪ್ರೇಕ್ಷಕರ ಅಭಿಪ್ರಾಯ ನೇರವಾಗಿ ತಿಳಿದುಕೊಳ್ಳುತ್ತಿದ್ದೇವೆ ಎಂದರು.

ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡುವುದು ಒಂದು ಒಳ್ಳೆಯ ಅನುಭವ ಎಂದ ತರುಣ ಸುಧೀರ್, ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿ, ನಮ್ಮ ವಿಜಯೋತ್ಸವ ಇಡೀ ರಾಜ್ಯದಾದ್ಯಂತ ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಒನ್ಇಂಡಿಯೊಂದಿಗೆ ಮಾತನಾಡಿದ ಚಿತ್ರನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಚೌಕ ಸಿನಿಮಾ ಇಡೀ ರಾಜ್ಯದಾದ್ಯಂತ ಮನೆಮಾತಾಗಿದೆ. ಕೇವಲ ಎರಡು ವಾರಗಳಲ್ಲಿಯೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.
ಚಿತ್ರದ ಮತ್ತೊಬ್ಬ ನಾಯಕ ದಿಗಂತ್, ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿ ಬರುತ್ತಿದೆ. ಚಿತ್ರ ಶತದಿನೋತ್ಸವ ಆಚರಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ತಮ್ಮ ಗುಳಿಕೆನ್ನೆಯಲ್ಲಿ ಮುಗುಳ್ನಕ್ಕರು.
ಚೌಕ ಚಿತ್ರ ನಿರ್ಮಾಪಕ ಯೋಗೀಶ್ ದ್ವಾರಕೀಶ್, ಈ ಚಿತ್ರದ ಕಥೆ ಹೆಣೆಯಲು ನಾಲ್ಕು ವರ್ಷದ ಪ್ರಯತ್ನವಿದೆ, ಜನರು ಚಿತ್ರ ನೋಡುತ್ತಿರುವುದು ನೆಮ್ಮದಿ ನೀಡಿದೆ. ಮುಂದಿನ ದಿನಗಳಲ್ಲಿ ಇದೇ ತಂಡದೊಂದಿಗೆ ಮತ್ತು ಇದೇ ಬ್ಯಾನರ್ ನಡಿ ಇನ್ನೊಂದು ಹೊಸ ಸಿನಿಮಾ ಮಾಡುವ ಉದ್ದೇಶವಿದೆ ಎಂದರು.
ದ್ವಾರಕೀಶ್ ಪುತ್ರ ಲೋಕೇಶ್ ದ್ವಾರಕೀಶ್, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಸಂತಸಗೊಳ್ಳುತ್ತಿರುವುದು ನಮಗೆ ಹೆಮ್ಮೆ ಎಂದು ಆನಂದತುಂದಿಲರಾದರು. ಇದು ಪ್ರಚಾರವಲ್ಲ ಕೇವಲ ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಳ್ಳುವ ಉದ್ದೇಶವಷ್ಟೇ ಎಂದು ಚಿತ್ರತಂಡ ಒನ್ಇಂಡಿಯಾಗೆ ತಿಳಿಸಿತು.












Click it and Unblock the Notifications