ಮಹದಾಯಿ ಹೋರಾಟ: ಜಗದೀಶ್ ಶೆಟ್ಟರ್ ಮನೆ ಮುಂದೆ ಅನಿರ್ದಿಷ್ಟಾವಧಿ ಧರಣಿ
ಹುಬ್ಬಳ್ಳಿ, ನವೆಂಬರ್ 14: ಕಳಸಾ-ಬಂಡೂರಿ ಮಹಾದಾಯಿ ಯೋಜನೆ ಜಾರಿ ಆಗ್ರಹಿಸಿ ನವಲಗುಂದ ಹಾಗೂ ನರಗುಂದ ಭಾಗದ ರೈತ ಮಹಿಳೆಯರು ಹಾಗೂ ಕಳಸಾ ಬಂಡೂರಿ ಹೋರಾಟಗಾರರು, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮನೆ ಎದುರು ನಡೆಸಿತ್ತಿರುವ ಅನಿರ್ದಿಷ್ಟವಾಧಿ ಧರಣಿ ಮುಂದುವರೆದಿದೆ.
ಹುಬ್ಬಳ್ಳಿಯ ಮಧುರಾ ಎಸ್ಟೇಟ್ ನಲ್ಲಿರುವ ಜಗದೀಶ್ ಶೆಟ್ಟರ್ ನಿವಾಸದೆದುರು ಸುಮಾರು 100 ಕ್ಕೂ ಹೆಚ್ಚು ರೈತ ಮಹಿಳೆಯರು ಹಾಗೂ ಕಳಸಾ ಬಂಡೂರಿ ಹೋರಾಟಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜಗದೀಶ್ ಶೆಟ್ಟರ್ ನಿವಾಸದ ಎದುರು ಅಡುಗೆ ಮಾಡಿ ರಾತ್ರಿಯೀಡಿ ಕೊರೆಯುವ ಚಳಿಯ ನಡುವೆಯೇ ರೈತ ಮಹಿಳೆಯರು ಧರಣಿ ನಡೆಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಬಂದು ಕಳಸಾ ಬಂಡೂರಿ ಯೋಜನೆ ಬಗ್ಗೆ ತಮ್ಮ ಪಕ್ಷ ಹಾಗೂ ತಾವು ತೆಗೆದುಕೊಂಡ ನಿರ್ಧಾರವನ್ನು ಸ್ಪಷ್ಟಪಡಿಸುವವರೆಗೂ ಧರಣಿಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಜಗದೀಶ್ ಶೆಟ್ಟರ್ ಅವರು ಅಧಿವೇಶನದ ಒಳಗಾಗಿ ಸಿಹಿಸುದ್ದಿ ಕೊಡೋದಾಗಿ ಹೇಳಿದ್ದರು.
ಆಗ ಕಳಸಾ ಬಂಡೂರಿ ಹೋರಾಟಗಾರರು 15 ದಿನಗಳ ಗಡುವು ನೀಡಿದ್ದರು. ಆದರೆ ಗಡುವು ಮುಗಿದಿದೆ. ಜಗದೀಶ್ ಶೆಟ್ಟರ್ ನೀಡಿದ ಭರವಸೆ ಈಡೇರಿಲ್ಲ. ಹೀಗಾಗಿ ನಿನ್ನೆ(ನ.13) ಬೆಳಗ್ಗೆಯಿಂದ ರೈತರು ಅನಿರ್ಧಿಷ್ಟವಾಧಿ ಧರಣಿ ನಡೆಸುತ್ತಿದ್ದಾರೆ. ಬಿಜೆಪಿ ಮಹದಾಯಿ ಬಗ್ಗೆ ತನ್ನ ನಿಲುವು ತಿಳಿಸೋವರೆಗೂ ಜಾಗ ಬಿಟ್ಟು ಕದಲದಿರಲು ನಿರ್ಧಾರಿಸಿದ್ದಾರೆ.