ಒಳ ಮತ್ತು ಹೊರ ಹೊಡೆತ ಭಾರೀ ಕೆಲಸ ಮಾಡಲಿದೆ, ಇದರ ಪರಿಣಾಮ ಬಿಜೆಪಿಗೆ ಮುಂದೆ ಗೊತ್ತಾಗಲಿದೆ; ಶೆಟ್ಟರ್
ಹುಬ್ಬಳ್ಳಿ, ಮೇ, 10: ರಾಜ್ಯದ ಎಲ್ಲೆ ವಿಧಾನಸಭಾ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಹುಬ್ಬಳ್ಳಿಯ ಕೇಶ್ವಾಪುರದ ಎಸ್ಬಿಐ ಶಾಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕುಟುಂಬ ಸಮೇತರಾಗಿ ಮತ ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ಶೆಟ್ಟರ್, ಈ ಚುನಾವಣೆಯಲ್ಲಿ ಒಳ ಹೊಡೆತ ಮತ್ತು ಹೊರ ಹೊಡೆತ ಭಾರೀ ಕೆಲಸ ಮಾಡಲಿದೆ. ಫಲಿತಾಂಶದ ದಿನ ಅದರ ಪರಿಣಾಮ ಬಿಜೆಪಿಗೆ ಮುಂದೆ ಗೊತ್ತಾಗಲಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಕುಟುಂಬಸ್ಥರ ಜೊತೆ ಆಗಮಮಿಸಿದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಶೆಟ್ಟರ್ ಅವರು, ಹುಬ್ಬಳ್ಳಿಯ ಕೇಶ್ವಾಪುರದ ಎಸ್.ಬಿ.ಐ ಶಾಲೆ ಮತಗಟ್ಟೆ ಸಂಖ್ಯೆ 125 ರಲ್ಲಿ ಮತದಾನ ಮಾಡಿದರು.

ನಂತರ ಮಾತನಾಡಿದ ಶೆಟ್ಟರ್, ಎಲ್ಲಾ ಕಡೆ ದೊಡ್ಡ ಪ್ರಮಾಣದಲ್ಲಿ ಮತದಾನ ಜರುಗುತ್ತಿದೆ. ನಾನು ಕಾಂಗ್ರೆಸ್ನಿಂದ ಸ್ಪರ್ಧಿಸಿದ ಬಳಿಕ ಜನರಿಂದ ಹಿಂದಿಗಿಂತಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರ ಉತ್ಸಾಹ ಗಮನಿಸಿದರೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಮನೆಮನೆಗೆ ಭೇಟಿ ನೀಡಿ ಮಂಗಳವಾರ ಪ್ರಚಾರ ನಡೆಸಿದಾಗ, ಜನರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ. ಮತದಾರರಿಗೆ ಬಿಜೆಪಿ ಅಭ್ಯರ್ಥಿಯ ಮುಖ ಪರಿಚಯವೇ ಇಲ್ಲ. ಹಾಗಾಗಿ, ನನ್ನ ಗೆಲುವು ನಿಶ್ಚಿತ ಎಂದರು.
ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಚುನಾವಣೆಯೇ ಹೊರತು, ಶೆಟ್ಟರ್ ಮತ್ತು ಕೇಂದ್ರದ ನಡುವಣ ಚುನಾವಣೆ ಅಲ್ಲ. ಬಿಜೆಪಿಯವರು ಪಕ್ಷ ಮುಖ್ಯ ಎನ್ನುತ್ತಾರೆ. ಆದರೆ, ಪಕ್ಷಕ್ಕೆ ವ್ಯಕ್ತಿಯೂ ಅಷ್ಟೇ ಮುಖ್ಯ. ಹಾಗಾದರೆ, ಪ್ರಧಾನಿ ಮೋದಿ ಅವರ ಭಾವಚಿತ್ರ ಇಟ್ಟುಕೊಂಡು ಯಾಕೆ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.












Click it and Unblock the Notifications