RSS ನಿಷೇಧ ಮಾಡಿ ಎಂದು ಹೇಳುವುದೇ ದುರ್ದೈವದ ಸಂಗತಿ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಸೆಪ್ಟೆಂಬರ್ 30 : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ದೇಶಪ್ರೇಮಿ ಸಂಘಟನೆಯಾಗಿದ್ದು ದೀನ ದಲಿತರಿಗೆ, ಬಡ ಮಕ್ಕಳಿಗೆ ಹಲವಾರು ಸಂಸ್ಥೆ ಕಟ್ಟಿದ್ದಾರೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರ್ಎಸ್ಎಸ್ ನಿಷೇಧ ಮಾಡಿ ಎಂದು ಹೇಳುವುದೇ ದುರ್ದೈವದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆರ್ಎಸ್ಎಸ್ ಸಂಘಟನೆ ಬಿಟ್ಟು ಬೇರೆ ಏನು ಮಾತನಾಡಲಿಕ್ಕೆ ಕಾಂಗ್ರೆಸನವರ ಬಳಿ ಏನೂ ಇಲ್ಲ. ಇನ್ನು ಪಿಎಫ್ಐ ಸಂಘಟನೆಯನ್ನು ಏಕೆ ನಿಷೇಧಿಸಿದ್ದೀರಿ ಎಂದು ಕೇಳಲು ಕಾಂಗ್ರೆಸ್ಗೆ ಯಾವ ಆಧಾರಗಳಿಲ್ಲ. ಏಕೆಂದರೆ ಅವರೇ ಪಿಎಫ್ಐ ಪ್ರಕರಣಗಳನ್ನು ಹಿಂಪಡೆದಿದ್ದರು. ಈಗ ಅದನ್ನು ಮರೆಮಾಚಲು ಆರ್ಎಸ್ಎಸ್ ನಿಷೇಧಿಸಲು ಹೇಳುತ್ತಾರೆ ಎಂದರು.
ಆದರೆ ಅದನ್ನು ಯಾವ ಕಾರಣಕ್ಕೆ ನಿಷೇಧಿಸಬೇಕೆಂದು ಹೇಳುವುದಿಲ್ಲ. ದೀನದಲಿತರು, ಅನಾಥರಿಗೆ ಹಲವಾರು ಸಂಸ್ಥೆಗಳನ್ನು ಕಟ್ಟಿದ್ದಾರೆ. ಪ್ರವಾಹ ಮುಂತಾದ ಸಂಕಷ್ಟದ ಸಂದರ್ಭದಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಾರೆ. ಆರ್ಎಸ್ಎಸ್ ದೇಶಪ್ರೇಮದ ಜಾಗೃತಿ ಮೂಡಿಸುತ್ತಿರುವ ಸಂಘಟನೆ. ಈ ಮಟ್ಟಕ್ಕೆ ಸಿದ್ದರಾಮಯ್ಯ ಅವರು ಇಳಿಯಬಾರದಿತ್ತು ಎಂದರು.
ಕಾಂಗ್ರೆಸ್ನಿಂದ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮುಖ್ಯಮಂತ್ರಿ ಮಾತನಾಡಿದ್ದು ಈ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ ಆದ್ದರಿಂದ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ . ಅಖಿಲ್ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ವಿಚಾರ ಅದು ಅವರ ಪಕ್ಷದ ವಿಚಾರವಾಗಿದೆ. ಅದು ಅವರ ಪಕ್ಷದ ಆಂತರಿಕ ವಿಚಾರ ಆ ಕುರಿತು ನಾನು ಏನು ಮಾತನಾಡಲ್ಲ. ಅದರ ಬಗ್ಗೆ ಯಾವ ವ್ಯಾಖ್ಯಾನ ಮಾಡಲ್ಲ ಇದು ಸರಿಯಲ್ಲ. ಆದರೆ ಈ ಬಾರಿ ಚುನಾವಣೆ ನಡೆಯುತ್ತಿರುವುದರಿಂದ ಈ ರೀತಿ ಗೊಂದಲ ಉಂಟಾಗುತ್ತಿರಬಹುದು ಎಂದರು.

ಫ್ಲೆಕ್ಸ್ ಹರಿದಿಲ್ಲ
ಭಾರತ್ ಜೋಡೋ ಫ್ಲೆಕ್ಸ್ ಗಳನ್ನು ಕಾಂಗ್ರೆಸ್ ಪಕ್ಷದವರೆ ಹರಿದು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ನಮ್ಮ ಶಾಸಕರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಯಾರು ಭಾರತವನ್ನು ಎರಡು ದೇಶಗಳನ್ನಾಗಿ ಮಾಡಿ ಭಾರತ್ ತೋಡೋ ಮಾಡಿದ್ದರೋ ಅವರು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ ಮಾಡಿಲಿ ಎಂದರು
ದಿ.ಉಮೇಶ್ ಕತ್ತಿ ನೆನಪು ಸದಾ ಹಸಿರು
ದಿವಂಗತ ಉಮೇಶ್ ಕತ್ತಿ ಅವರು ಮೂರೂವರೆ ದಶಕಗಳಿಂದ ಆತ್ಮೀಯ ಸ್ನೇಹಿತರು. ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ್ದೇನೆ. ಅವರ ನೆನಪು ನಮ್ಮ ಹೃದಯಂಗಳದಲ್ಲಿ ಸದಾ ಹಸಿರಾಗುತ್ತದೆ. ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಅಭಿವೃದ್ಧಿ ಕುರಿತು ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ಸರ್ವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.ಅವರ ಸ್ಮರಣಾರ್ಥ ಮೌನಾಚಾರಣೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಮ್ಮ ಜಂಟಿ ರಾಜ್ಯ ಪ್ರವಾಸವನ್ನು ದಸರಾ ಮುಗಿದ ಕೂಡಲೇ ಕೈಗೊಳ್ಳಲಾಗುವುದು ಎಂದರು.












Click it and Unblock the Notifications