ಹುಬ್ಬಳ್ಳಿ ಕಳ್ಳರು ನವಗ್ರಹ ಮೂರ್ತಿಯನ್ನೂ ಬಿಡಲಿಲ್ಲ
ಹುಬ್ಬಳ್ಳಿ, ನವೆಂಬರ್ 23: ನಗರದ ಕಮರಿಪೇಟೆಯ 3ನೇ ಕ್ರಾಸ್ ಬಳಿ ಭೂತೆ ಸರ್ಕಲ್ ಬಳಿಯಿರುವ ಅಂಗಡಿಯೊಂದನ್ನು ಕಳ್ಳತನ ಮಾಡಲಾಗಿರುವ ಪ್ರಕರಣ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಮರಿಪೇಟೆ ನಿವಾಸಿ ಸುರೇಶ ಅರ್ಜುನಸಾ ಮೈತ್ರಾಣಿ ಎಂಬುವವರ ಲೇಖನಿಯ ಅಂಗಡಿಯ ಕೀಲಿ ಮುರಿದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯಲ್ಲಿ 91,281 ರೂ. ನಗದು, ಒಂದು ಬಂಗಾರದ ಉಂಗುರ ಹಾಗೂ ನವಗ್ರಹ ಮೂರ್ತಿಗಳನ್ನು ಕಳ್ಳತನ ಮಾಡಿದ್ದಾರೆ.
ಮನೆಗಳ್ಳತನ
ಕಳೆದ ಹಲವಾರು ದಿನಗಳಿಂದ ಹು-ಧಾ ಅವಳಿ ನಗರಗಳಲ್ಲಿ ಮನೆಗಳ್ಳರ ಮತ್ತು ಸರಗಳ್ಳರ ಹಾವಳಿ ವಿಪರೀತಗೊಂಡಿದ್ದು ನ.22 ರಂದು ಹುಬ್ಬಳ್ಳಿಯಲ್ಲಿ ಮತ್ತೊಂದು ಮನೆಯನ್ನು ಕಳ್ಳತನ ಮಾಡಲಾಗಿದೆ.
ಸ್ಥಳೀಯ ಲಿಂಗರಾಜನಗರದ ಉತ್ತರಾದಿಮಠದಲ್ಲಿನ ಆಶಾಬಾಯಿ ಪ್ರಹ್ಲಾದರಾವ್ ದೇಶಪಾಂಡೆ ಎಂಬುವರ ಮನೆ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ.

ಮಧ್ಯಾಹ್ನ ಆಶಾಬಾಯಿ ಕೆಲಸದ ನಿಮಿತ್ತ ವಿದ್ಯಾನಗರದ ಶುಶ್ರೂತಾ ಆಸ್ಪತ್ರೆಗೆ ಹೋದಾಗ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಬಂಗಾರ, ಬೆಳ್ಳಿ ಸೇರಿದಂತೆ 50 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಿಕರಲ್ಲಿ ಆತಂಕ:
ಅವಳಿ ನಗರದಲ್ಲಿ ಪ್ರತಿನಿತ್ಯ ಮನೆಗಳ್ಳತನ, ಸರಗಳ್ಳತನ ವಿಪರೀತ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಕೆಲವೆಡೆ ಮಟ್ಕಾ ದಂಧೆ ಜೋರಾಗಿಯೇ ನಡೆದಿದೆ. ಈ ಬಗ್ಗೆ ಪೊಲೀಸರನ್ನು ವಿಚಾರಿಸಿದರೆ ರೈಡ್ ಮಾಡ್ತೇವೆ ಅಂತಾ ಹೇಳುತ್ತಾರೆ. ಆದರೆ ಕೆಲ ಪೊಲೀಸ್ ಸಿಬ್ಬಂದಿಯೇ ಮಟ್ಕಾ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ನಾಗರಿಕರ ಆರೋಪವಾಗಿದೆ. ಕೆಲವೆಡೆ ಪಾನ್ ಬೀಡಾ ಅಂಗಡಿಗಳಲ್ಲಿ, ಇನ್ನು ಕೆಲವೊಂದು ಕಡೆ ಸೈಕಲ್ ರಿಪೇರಿ ಅಂಗಡಿಗಳಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಪೊಲೀಸರು ಮಾಮೂಲಿ ತೆಗೆದುಕೊಂಡು ದಂಧೆಗೆ ಅವಕಾಶ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಶಾಲಾ ಕಾಲೇಜ್ ಬಳಿಯೇ ಈ ಮಟ್ಕಾ ದಂಧೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಸಹ ಮಟ್ಕಾ ಆಡಲು ಶುರು ಮಾಡಿದ್ದಾರೆ ಎನ್ನುತ್ತಾರೆ ದೇಶಪಾಂಡೆ ಎಂಬುವವರು. ಈ ಹಿಂದೆ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆದಿತ್ತು. ಕ್ರಿಕೆಟ್ ಬೆಟ್ಟಿಂಗ್ ನಿಂದ ಸಾಲ ಮಾಡಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ವಿದ್ಯಾರ್ಥಿಗಳು ಕೂಡ ಆತ್ಮಹತ್ಯೆಗೆ ಶರಣರಾಗಿದ್ದರು.
ವ್ಯಕ್ತಿ ಕಾಣೆ:
ಹರಿಯಾಣ ರಾಜ್ಯದ ಸದ್ಯ ನಗರದ ಗೋಕುಲ ರಸ್ತೆಯ ಶ್ರೇಯಾನಗರ ನಿವಾಸಿ ಮುಖೇಶ ಸುರೇಶ ಅಗರವಾಲ (39) ಅ.29 ರಿಂದ ಕಾಣೆಯಾಗಿದ್ದಾರೆ ಎಂದು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹರಿಯಾಣದ ಮಿಶ್ರವಾಡದಿಂದ ತಾವು ಕರೆ ಮಾಡಿದಾಗ ಮುಖೇಶ ಮೊಬೈಲ್ ಸ್ವಿಚ್ ಆಫ್ ಆಗಿತ್ತೆಂದು ಅತುಲ್ ಕಿಶನ್ ಲಾಲ್ ಪೂಜಾರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದಾರೆ.
ದಂಡ:
ಹುಬ್ಬಳ್ಳಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ 492 ಕೇಸ ದಾಖಲಿಸಿ 63,200 ರೂ. ದಂಡ ವಸೂಲಿ ಮಾಡಲಾಗಿದೆ












Click it and Unblock the Notifications