ಬಿಆರ್ಟಿಎಸ್ ಮಾರ್ಗದಲ್ಲಿ ಪಾಲಿಕೆ ಸದಸ್ಯ ವಾಹನಕ್ಕೆ ಅನುಮತಿ: ಹಿರಿಯ ಅಧಿಕಾರಿಗಳ ಜೊತೆಗೆ ಸಭೆ
ಹುಬ್ಬಳ್ಳಿ, ಆಗಸ್ಟ್ 31: ಬಿಆರ್ಟಿಎಸ್ (ತ್ವರಿತ ಬಸ್ ಸಂಚಾರ ವ್ಯವಸ್ಥೆ) ಮಾರ್ಗದಲ್ಲಿ ಪಾಲಿಕೆ ಸದಸ್ಯರ ವಾಹನಗಳ ಸಂಚಾರಕ್ಕೆ ಅನುಮತಿ ಪಡೆಯುವ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲು ಬಿಆರ್ಟಿಎಸ್ ಕಂಪನಿಯ ಹಿರಿಯ ಅಧಿಕಾರಿಗಳ ಜೊತೆ 15 ದಿನಗಳೊಳಗೆ ಸಭೆ ನಡೆಸಲು ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪಾಲಿಕೆಯ ಸಭಾಭವನದಲ್ಲಿ ಈ ಬಗ್ಗೆ ಸಭೆ ನಡೆಸಲಾಯಿತು. ಸಭೆಗೆ ಬಿಆರ್ಟಿಎಸ್ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಎಸ್.ಎಂ. ಬಿಜಾಪುರ ಹಾಜರಾಗಿದ್ದರು. ಸಭೆಗೆ ಎಇಇ ಅವರನ್ನು ಕಳುಹಿಸಿರುವುದರಿಂದ ದೃಢ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಇವರ ಮುಂದೆ ಏನು ಮಾತನಾಡಿದರೂ ಪ್ರಯೋಜನವಿಲ್ಲ. ಬಿಆರ್ಟಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕೆಂದು ಸದಸ್ಯರು ಆಗ್ರಹಿಸಿದರು.

ಹು-ಧಾ ನಡುವಿನ ಅರ್ಧಭಾಗವನ್ನು ಪಡೆದಿರುವ ಬಿಆರ್ ಟಿಎಸ್ ಯೋಜನೆಯಿಂದ ಮಿಕ್ಸಡ್ ಟ್ರಾಫಿಕ್ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರವು ಕಷ್ಟಕರವಾಗಿದೆ ಎಂದು ಬಿಜೆಪಿ ಸದಸ್ಯ ಉಮೇಶಗೌಡ ಕೌಜಗೇರಿ ದೂರಿದರು.
ಬಿಆರ್ಟಿಎಸ್ ಮಾರ್ಗದಲ್ಲಿ ಪಾಲಿಕೆ ಸದಸ್ಯರ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ಹಾಗೂ ಮಾರ್ಗದಲ್ಲಿ ನಾಲ್ಕು ಕಡೆ ನೀರು ನಿಲ್ಲುವ ಬಗ್ಗೆ ಇತ್ತೀಚೆಗೆ ಬಿಆರ್ಟಿಎಸ್ ಕಂಪನಿಯ ಬೋರ್ಡ್ ಮೀಟಿಂಗ್ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ಸಾರಿಗೆ ಆಯುಕ್ತರ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕಂಪನಿಯವರು ಹೇಳಿದ್ದಾರೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸಭೆಯ ಗಮನಕ್ಕೆ ತಂದರು.
ಬಿಆರ್ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದರೆ ಅದರ ಉದ್ದೇಶ ಈಡೇರುತ್ತದೆ. ಬೇರೆ ಯಾವ ವಾಹನವು ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಬಾರದು ಎಂದು ಬಿಜೆಪಿಯ ತಿಪ್ಪಣ್ಣ ಮಜ್ಜಗಿ ತಿಳಿಸಿದರು. ನವನಗರ ಬಳಿ ಬಿಆರ್ಟಿಎಸ್ನವರು ಗಟಾರ ನಿರ್ಮಿಸಿದ್ದಾರೆ. ಅದರಲ್ಲಿ ಹೂಳು ತುಂಬಿದ್ದು, ಯಾವಾಗ ಹೂಳು ಎತ್ತುತ್ತಾರೆ ಎಂದು ಬಿಜೆಪಿ ಸದಸ್ಯೆ ಸುನೀತಾ ಮಾಳವದಕರ ಪ್ರಶ್ನಿಸಿದರು.
ಕಾಂಗ್ರೆಸ್ನ ಮಯೂರ ಮೋರೆ ಮಾತನಾಡಿ, ಬಿಆರ್ಟಿಎಸ್ನಿಂದ ಬಹಳ ಜನರಿಗೆ ತೊಂದರೆ ಆಗುತ್ತಿದೆ. ಇವುಗಳ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕವಾದ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು. 15 ದಿನಗಳೊಳಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಮೇಯರ್ ರಾಮಪ್ಪ ಬಡಿಗೇರ ರೂಲಿಂಗ್ ನೀಡಿದರು.












Click it and Unblock the Notifications