ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಆರಂಭಕ್ಕೆ ಸಿದ್ದರಾಮಯ್ಯ ಮನವಿ
ಹುಬ್ಬಳ್ಳಿ, ಅ.17 : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿದರು. ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆಯೂ ಒಪ್ಪಿಗೆ ನೀಡಿದೆ.
ಯಾದಗಿರಿ:ಆ.18ರಂದು ರೈಲ್ವೆ ಬೋಗಿ ತಯಾರಿಕಾ ಘಟಕ ಲೋಕಾರ್ಪಣೆ
ನವದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಸಚಿವರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, 'ದಶಕಗಳಿಂದ ಈ ರೈಲು ಮಾರ್ಗ ಯೋಜನೆ ನೆನೆಗುದಿಗೆ ಬಿದ್ದಿದೆ. ಈಗ ಯೋಜನೆಗೆ ಪರಿಸರ ಇಲಾಖೆಯ ಅನುಮತಿಯೂ ಸಿಕ್ಕಿದೆ. ಆದ್ದರಿಂದ, ರೈಲು ಮಾರ್ಗ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಲಾಗಿದೆ ಎಂದರು.
1998ರಲ್ಲಿಯೇ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆ ಸಿದ್ಧವಾಗಿತ್ತು. ಆದರೆ, ಅರಣ್ಯ ಭೂಮಿಯನ್ನು ರೈಲು ಮಾರ್ಗ ನಿರ್ಮಾಣಕ್ಕೆ ಬಳಸಬಾರದು ಎಂಬ ವಿವಾದದ ಹಿನ್ನಲೆಯಲ್ಲಿ ಯೋಜನೆ ಜಾರಿಯಾಗಿಲ್ಲ. ಈ ಯೋಜನೆ ಕುರಿತ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
168 ಕಿ.ಮೀ. ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ನೀಡಲು ಸುಪ್ರೀಂಕೋರ್ಟ್ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನಿರಾಕರಿಸಿತ್ತು. ಈ ಮಾರ್ಗ ನಿರ್ಮಾಣವಾದರೆ ಪಶ್ಚಿಮ ಘಟ್ಟದ ಅರಣ್ಯ ನಾಶವಾಗುತ್ತದೆ ಎಂದು ಸಿಇಸಿ ಹೇಳಿತ್ತು. ನಂತರ ಹಸಿರು ನ್ಯಾಯಮಂಡಳಿ ಯೋಜನೆಗೆ ಒಪ್ಪಿಗೆ ನೀಡಿತ್ತು.
ಹುಬ್ಬಳ್ಳಿ-ಕಲಘಟಗಿ-ಕಿರವತ್ತಿ-ಯಲ್ಲಾಪುರ-ಇಡಗುಂದಿ ಮೂಲಕ ಈ ರೈಲು ಮಾರ್ಗ ಅಂಕೋಲಾ ತಲುಪಲಿದೆ. ಅರಣ್ಯ ಭೂಮಿಯ ವಿಚಾರವಾಗಿದ್ದ ಕಾರಣ ಸುಪ್ರೀಂಕೋರ್ಟ್ ಎಲ್ಲಾ ಕಡತಗಳನ್ನು ಹಸಿರು ನ್ಯಾಯಮಂಡಳಿಗೆ ಸಲ್ಲಿಸಿತ್ತು. ಹಸಿರು ನ್ಯಾಯಮಂಡಳಿ ಮತ್ತು ಕೇಂದ್ರ ಪರಿಸರ ಇಲಾಖೆ ಯೋಜನೆಗೆ ಈಗಾಗಲೇ ಒಪ್ಪಿಗೆ ನೀಡಿವೆ.