Holi 2023: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ತೆಗೆದುಕೊಂಡ ಸೂಕ್ತ ನಿರ್ಧಾರಗಳಿವು, ಇಲ್ಲಿದೆ ವಿವರ
ಹೋಳಿ ಹಬ್ಬದಂದು ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಸಭೆ ನಡೆಸಿದ್ದಾರೆ. ಹಾಗಾದರೆ ಸಭೆಯಲ್ಲೆ ತೆಗೆದುಕೊಂಡ ನಿರ್ಧಾರಗಳೇನು ಎಂದು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಮಾರ್ಚ್, 06: ವಾಣಿಜ್ಯನಗರಿ ಹುಬ್ಬಳ್ಳಿಯ ಹೋಳಿ ಅಂದರೆ ನಿಜಕ್ಕೂ ಅದೊಂದು ಬಹುದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗುವ ಹಬ್ಬವಾಗಿರುತ್ತದೆ. ಈ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆಯನ್ನು ಆಯೋಜಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆ ನಿರ್ಧಾರ ಏನು ಎಂದು ಇಲ್ಲಿ ತಿಳಿಯಿರಿ.
ಸಭೆ ನಡೆಸಿದ ಹಿರಿಯರು
ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳಾದ ತಾಜುದ್ದೀನ್ ಖಾದ್ರ, ಸಿಖ್ ಧರ್ಮದ ಗುರುಗಳು ಗ್ಯಾನಿ ಜಲಸಿಂಗ್, ಕ್ರೈಸ್ತ ಧರ್ಮದ ಗುರುಗಳಾದ ಅಲ್ವಿನ್ ಉಪಸ್ಥಿತರಿದ್ದರು. ಹಾಗೆಯೇ ಸಾರ್ವಜನಿಕರು ಅಣ್ಣ ತಮ್ಮಂದಿರಂತೆ ಹಬ್ಬವನ್ನು ಆಚರಣೆ ಮಾಡುವಂತೆ ಸಲಹೆ ನೀಡಿದರು. ಶಾಂತಿ ಸಭೆಯಲ್ಲಿ ಕಮಿಷನರ್ ರಮಣ ಗುಪ್ತಾ, ಡಿಸಿಪಿ ಗೋಪಾಲ ಬ್ಯಾಕೋಡ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸೇರಿದಂತೆ ಇನ್ನಿತರರು ಭಾಗವಹಿ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವಂತೆ ಸೂಚನೆ ನೀಡಿದರು.

ಇನ್ನು ಹುಬ್ಬಳ್ಳಿಯ ವಿವಿಧ ಸಂಘಟನೆಯ ಮುಖಂಡರು ಹಾಗೂ ಎಲ್ಲ ಸಮುದಾಯ ಮುಖಂಡರು ಆಗಮಿಸುವ ಮೂಲಕ ಸೌಹಾರ್ದತೆಯಿಂದ ಸಾಂಪ್ರದಾಯಿಕ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.
ಒಟ್ಟಿನಲ್ಲಿ ಹುಬ್ಬಳ್ಳಿಯ ಹೋಳಿ ಹಬ್ಬದ ಸಂಭ್ರಮ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸಾರ್ವಜನಿಕರು ಕೂಡ ಯಾವುದೇ ಕೋಮುವಾದ ಸೃಷ್ಟಿಸದೇ ಸೌಹಾರ್ದತೆಯಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಿ ಸಂಭ್ರಮಿಸಬೇಕು ಎಂಬುದು ಎಲ್ಲರ ಆಶಯವಾಗಿದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸರು
ಹೋಳಿಹಬ್ಬ ಮಾಡಲು ರಾಜ್ಯದ್ಯಂತ ಯುವಸಮೂಹ ತುದಿಗಾಲಲ್ಲಿ ಕಾಯುತ್ತಿದೆ. ಹಾಗೆಯೇ ಹುಬ್ಬಳ್ಳಿಯಲ್ಲೂ ಸಹ ಹೋಳಿ ಆಚರಣೆಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಬ್ಬ ಅಂದಮೇಲೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತವೆ. ಆದರೆ ಕೆಲವೊಂದು ಕಡೆ ಇದನ್ನೇ ಬಂಡವಾಳ ಮಾಡಿಕೊಂಡು ಚಿಕ್ಕ ಗಲಾಟೆ ದೊಡ್ಡ ಮಟ್ಟಕ್ಕೂ ತಿರುಗಬಹುದು. ಆದ್ದರಿಂದ ನಗರದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications