ಹಿಂದೂಗಳು ನಾಲ್ಕೈದು ಮಕ್ಕಳನ್ನು ಹೆರಬೇಕು: ಸಚ್ಚಿದಾನಂದ ಸ್ವಾಮೀಜಿ
ಹಿಂದೂ ಧರ್ಮ ಬೆಳೆಯಬೇಕಾದರೆ ಹಿಂದೂಗಳು ನಾಲ್ಕೈದು ಮಕ್ಕಳನ್ನು ಹೇರಬೇಕು ಎಂದು ಹುಬ್ಬಳ್ಳಿಯಲ್ಲಿ ನಡೆದ ಹನುಮಾನ್ ಚಾಲೀಸ್ ಶೋಭಾ ಯಾತ್ರೆಯಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಿಂದೂ ಹೆಣ್ಣು ಮಕ್ಕಳಿಗೆ ಕರೆ ನೀಡಿದರು.
ಹುಬ್ಬಳ್ಳಿ, ನವೆಂಬರ್, 18 : ಹಿಂದೂಗಳು ಒಂದೇ ಮಕ್ಕಳನ್ನು ಪಡೆಯುವುದನ್ನು ಬಿಟ್ಟು ಹೆಚ್ಚು ಮಕ್ಕಳನ್ನು ಹೇರಬೇಕು ಎಂದು ಮೈಸೂರಿನ ಅವಧೂತ ದತ್ತ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಗುರುವಾರ ರಾತ್ರಿ ನಗರದ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ ಹನುಮಾನ್ ಚಾಲೀಸಾ ಶೋಭಾ ಯಾತ್ರೆಯಲ್ಲಿ ಮಾತನಾಡಿದ ಅವರು, ಒಂದೇ ಮಗು ಪಡೆಯುವುದು ಹಿಂದೂಗಳಿಗೆ ನಾಚಿಕೆಯ ವಿಷಯ. ಬೇರೆಯವರನ್ನು ನೋಡಿ ನಮ್ಮ ಹಿಂದೂಗಳು ಕಲಿಯಬೇಕು. ನಮ್ಮ ಹಿಂದೂ ಸಮಾಜದ ಜನಸಂಖ್ಯೆಯನ್ನು ಹೆಚ್ಚಿಸಲು ಪಣ ತೊಡಬೇಕು ಎಂದರು.
ನಮ್ಮ ಹಿಂದೂಗಳು ಒಂದು ಅಥವಾ ಎರಡು ಮಕ್ಕಳನ್ನು ಪಡೆದು ಅವನ್ನು ಓದಿಸಿ ಪರದೇಶಕ್ಕೆ ಕಳಿಸುವ ಸಂಪ್ರದಾಯ ಹೆಚ್ಚುತ್ತಿದೆ. ಅದರ ಬದಲು 5-6 ಮಕ್ಕಳನ್ನು ಪಡೆದು ಇಬ್ಬರನ್ನು ವಿದೇಶಕ್ಕೆ ಕಳಿಸಿ ಉಳಿದವರನ್ನು ತಮ್ಮ ವೃಧ್ಯಾಪ್ಯ ಸಮಯದಲ್ಲಿ ತಮ್ಮ ಸೇವೆಗೆ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹನುಮ ಕುರಿತು ಓಂ ಹನುಮತೇ ನಮಃ ಎಂದು ಪ್ರತಿನಿತ್ಯ ಪ್ರಾರ್ಥನೆ ಮಾಡುವುದರಿಂದ ಜೀವನದಲ್ಲಿದ್ದ ಭಯ, ಸೋಮಾರಿತನ, ದೂರವಾಗಿ ಶಾಂತಿ, ನೆಮ್ಮದಿ ದೊರಕುತ್ತದೆ.
ಜಗತ್ತಿನ 65 ದೇಶಗಳಲ್ಲಿ ಮುಸ್ಲಿಂ, ಕ್ರಿಸ್ತರು, ಸಿಖ್ಖರು ಸೇರಿ ಎಲ್ಲರೂ ಹನುಮನನ್ನು ಆರಾಧಿಸುತ್ತಿದ್ದಾರೆ. ಕರ್ನಾಟಕದ ಹಂಪಿ ಬಳಿ ಇರುವ ಕಿಷ್ಕಿಂದೆಯಲ್ಲಿ ಹನುಮನ ಜನ್ಮಸ್ಥಾನವೆಂದು ಕರೆಯಲಾಗುತ್ತಿದೆ ಹೀಗಾಗಿ ಕರ್ನಾಟಕವನ್ನು ಹನುಮನ ನಾಡು ಎಂದು ಕರೆಯಲಾಗುತ್ತದೆ.
2 ಕೋಟಿ ಹನುಮಾನ್ ಚಾಲೀಸ್ ಮುದ್ರಣ
ಹನುಮಾನ ಚಾಲೀಸಾ ಪಾರಾಯಣವನ್ನು ಮುದ್ರಿಸಿ ಅದನ್ನು ಇಂಟರನೆಟ್ ನಲ್ಲಿ ಅಳವಡಿಸಲು ಚಿಂತನೆ ಮಾಡಲಾಗುತ್ತಿದೆ. ಅಲ್ಲದೇ ಈಗಾಗಲೇ ಸುಮಾರು 2 ಕೋಟಿಯಷ್ಟು ಹನುಮಾನ ಚಾಲಿಸಾವನ್ನು ಮುದ್ರಿಸಿ ಅದನ್ನು ಇಂಟರನೆಟ್ ಮೂಲಕ ಅಂತರಿಕ್ಷಕ್ಕೆ ರವಾನಿಸಲಾಗುತ್ತಿದೆ. ಇದರಿಂದ ಹನುಮಾನ ಚಾಲೀಸಾ ಪಠಣವು ಅಂತರಿಕ್ಷದಿಂದ ತರಂಗಾಂತರದ ಮೂಲಕ ವಿಷ್ಣುವಿಗೆ ತಲುಪುತ್ತದೆ ಎಂದರು.
ಹನುಮಾನ್ ಚಾಲೀಸ್ ಶೋಭಾಯಾತ್ರೆ
ನಗರದ ನೆಹರು ಮೈದಾನದಿಂದಹನುಮಾನ್ ಚಾಲೀಸ್ ಶೋಭಾಯಾತ್ರೆಯು ಕೊಪ್ಪೀಕರ ರೋಡ್, ತುಳಜಾಭವಾನಿ ಸರ್ಕಲ್, ದಾಜೀಬಾನ ಪೇಟೆ, ಚೆನ್ನಮ್ಮ ವೃತ್ತ ಮಾರ್ಗವಾಗಿ ಮರಳಿ ನೆಹರು ಮೈದಾನಕ್ಕೆ ತೆರಳಿತು.
ನ.18ರಿಂದ 20 ರವರೆಗೆ ಪುರ ಪ್ರವೇಶ
ಸುರಪುರ ತಾಲೂಕ ಹುಣಸಿಹೊಳೆ ವೀರಘಟ್ಟ ಕಣ್ವಮಠದ 1008 ವಿದ್ಯಾವಾರತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಹಾಗೂ ಶಿವಚಿದಂಬರೇಶ್ವರ 258 ನೇ ಜನ್ಮದಿನಾಚರಣೆ ನ.18ರಿಂದ 20 ರವರೆಗೆ ನಗರದ ಗೋಕುಲ ರಸ್ತೆಯ ಕೆ.ಎಸ್.ಶರ್ಮಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಪುರಪ್ರವೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಶುಕ್ಲ ಯಜುರ್ವೇದಿಯ ಸಂಘಗಳ ಮಂಡಳ, ಚಿದಂಬರ ಚೈತನ್ಯ ಸೇವಾ ಸಮಿತಿ ಹಮ್ಮಿಕೊಂಡಿರುವ ಈಪುರಪ್ರವೇಶ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.