ಹುಬ್ಬಳ್ಳಿಯಲ್ಲಿ ಜಿಎಸ್ಟಿ ನೇರ ಪ್ರಸಾರ ವೀಕ್ಷಣೆಗೆ ಬೃಹತ್ ಪರದೆ
ಹುಬ್ಬಳ್ಳಿ, ಜೂನ್ 30: ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಸ್ವಾಗತಿಸಲು ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗಿದೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಗೆ ಚಾಲನೆ ನೀಡಲಿದ್ದು, ಈ ಕ್ಷಣವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಹುಬ್ಬಳ್ಳಿಯ ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಸಭಾಂಗಣದಲ್ಲಿ ಬೃಹತ್ ಪರದೆ ಅಳವಡಿಸಲಾಗಿದೆ.

ಈ ಪರದೆಯಲ್ಲಿ ರಾಷ್ಟ್ರಪತಿಗಳಿಂದ ಜಿಎಸ್ಟಿ ಉದ್ಘಾಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಭಾಷಣದ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಸಭಾಂಗಣದಲ್ಲಿ ಅಂದಾಜು 200 ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದ್ದು, ಎರಡು ಬೃಹತ್ ಪರದೆ ಮೇಲೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.
ಕೆಸಿಸಿಐ ಪದಾಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಿಗೂ ಮುಕ್ತ ಅವಕಾಶ ಇದೆ ಎಂದು ಅಧ್ಯಕ್ಷ ರಮೇಶ್ ಪಾಟೀಲ ತಿಳಿಸಿದ್ದಾರೆ. 'ಸಾಮಾನ್ಯವಾಗಿ ಮನೆಯಲ್ಲಿಯೇ ಕುಳಿತು ಟಿವಿ ಪರದೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದು.
ಆದರೆ, ಕೆಸಿಸಿಐ ಸಭಾಂಗಣದಲ್ಲಿ ಈ ಕುರಿತು ಚರ್ಚೆ, ವಿಷಯ ವಿನಿಮಯ ಮತ್ತಿತರ ಚಟುವಟಿಕೆಗಳಿಗೆ ಅವಕಾಶವಿದೆ. ಈ ಕಾರಣದಿಂದ ಜಿಎಸ್ಟಿ ಉದ್ಘಾಟನಾ ಸಮಾರಂಭದ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ' ಎಂದು ಅವರು ತಿಳಿಸಿದರು.












Click it and Unblock the Notifications