ಮನೆ ಪಾಠ ಹೇಳುವವನ ಕೈಯಲ್ಲಿ ಬಿಜೆಪಿ ಸರಕಾರ ಪಠ್ಯ ಪರಿಷ್ಕರಣೆ ಮಾಡಿಸಿದೆ: ಈಶ್ವರ ಖಂಡ್ರೆ
ಹುಬ್ಬಳ್ಳಿ, ಜೂನ್ 9: ಬಿಜೆಪಿ ಸರ್ಕಾರ ಪಠ್ಯಪುಸ್ತಕದಲ್ಲಿ ಅನೇಕ ಮಹನೀಯರ ಇತಿಹಾಸವನ್ನು ತಿರುಚಿ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದೆ. ಕೂಡಲೇ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಅನಾಹುತ ಮಾಡಿದ್ದಾರೆ. ರೋಹಿತ್ ಚಕ್ರತೀರ್ತ ಒಬ್ಬ ಮನೆ ಪಾಠ ಹೇಳುವವ, ಅವನನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಮಾಡಿ ಇತಿಹಾಸ ತಿರುಚುವ ಕೆಲಸ ಮಾಡಿದೆ. ಸದ್ಯ ಎಲ್ಲೆಡೆ ನೈತಿಕ ಮೌಲ್ಯ, ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದೆ. ಈ ದಿಸೆಯಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಪಠ್ಯದಲ್ಲಿ ಸೇರಿಸಬೇಕಿತ್ತು. ಆದರೆ ಬಿಜೆಪಿ ಪಠ್ಯದಲ್ಲಿ ಧಾರ್ಮಿಕತೆ, ಜಾತಿಯ ವಿಷಬೀಜ ಬಿತ್ತುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಒಬ್ಬ ಅಜ್ಞಾನಿಗೆ ಪಠ್ಯ ಪುರಷ್ಕರಣೆ ಮಾಡುವ ಜವಾಬ್ದಾರಿ ನೀಡಿ 7 ಕೋಟಿ ಜನರಿಗೆ ಮೋಸ ಮಾಡಿದ್ದಾರೆ. ಇಂತಹ ನಡೆಯನ್ನು ಕಾಂಗ್ರೆಸ್ ಸರಕಾರ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತದೆ ಎಂದು ಖಂಡ್ರೆ ತಿಳಿಸಿದರು.

ಇತಿಹಾಸ ತಿರುಚು ಕೆಲಸ
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ರೋಹಿತ್ ಚಕ್ರತೀರ್ಥರನ್ನ ಸಮಿತಿ ಮಾಡಿ ಏನೇನು ಅನಾಹುತ ಮಾಡಿದ್ದಾರೆ ಎನ್ನುವುದನ್ನು ನೋಡಿದ್ದೇವೆ. ರಾಜ್ಯದಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು ಇದ್ದರೂ, ಮನೆ ಪಾಠ ಮಾಡುವ ರೋಹಿತ್ನನ್ನು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ ಉದ್ದೇಶವೇನು. ಈ ಮೂಲಕ 1ರಿಂದ 10ನೇ ತರಗತಿಯ ರಾಜ್ಯದ 1 ಕೋಟಿ 30 ಲಕ್ಷ ಮಕ್ಕಳ ಭವಿಷ್ಯ ನಾಶ ಮಾಡಲು ಹೊರಟ್ಟಿದ್ದಾರೆ. ವಿಶ್ವಗುರು ಬಸವಣ್ಣನವರ ಚರಿತ್ರಯನ್ನು ಬದಲಾವಣೆ ಮಾಡಲು ಪ್ರಯತ್ನಿಸಿದ್ದಾರೆ. ಕುವೆಂಪು, ಭಗತ್ ಸಿಂಗ್ ಸೇರಿದಂತೆ ನಾನಾ ನಾಯಕರ ಇತಿಹಾಸ ತಿರುಚುವ ಕೆಲಸ ಅಕ್ಷಮ್ಯ ಅಪರಾಧ. ಇವರ ದುರಾಲೋಚನೆಯಿಂದ ಈವರೆಗೆ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಲ್ಲಾ. ಇದು ಸರಕಾರದ ಅಸಮರ್ಥತೆಯಾಗಿದೆ. ಭವಿಷ್ಯದ ನಾಗರಿಕರಾದ ಮಕ್ಕಳ ಭವಿಷ್ಯ ಹಾಳು ಮಾಡುವ ಪ್ರಯತ್ನ ಮಾಡಿದ್ದಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಜವಾಬ್ದಾರಿ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ನಾಲ್ಕು ಕ್ಷೇತ್ರಗಳಲ್ಲೂ ಕಾಗ್ರೆಸ್ಗೆ ಗೆಲುವು
ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಎಲ್ಲಾಕಡೆ ಕಾಂಗ್ರೆಸ್ ಅಲೆಯಿದೆ. ಪದವೀದರರು ಮತ್ತು ಶಿಕ್ಷಕರು ಸುಶಿಕ್ಷಿತರಾಗಿದ್ದಾರೆ. ಬಿಜೆಪಿ ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇನ್ನೂ ಕೋವಿಡ್ ಸಂದರ್ಭದಲ್ಲಿ ಶಿಕ್ಷಕರ ನಿರ್ಲಕ್ಷ್ಯ ಮಾಡಿ ವ್ಯವಸ್ಥೆಯನ್ನೇ ಹಾಳು ಮಾಡಲಾಗಿದೆ. ಇದೆಲ್ಲಾ ಜನರಿಗೆ ಅರ್ಥವಾಗಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ತಪ್ಪು ಮಾಡಿರುವುದು ತಿಳಿದಿದೆ. ಹಾಗಾಗಿ ವಿಧಾನ ಪರಿಷತ್ನ ನಾಲ್ಕು ಕ್ಷೇತ್ರದಲ್ಲೂ ಕಾಂಗ್ರೆಸ್ ಜಯ ಸಾಧಿಸುತ್ತದೆ ಎಂದು ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಕೋಮುಗಲಬೆ ಸೃಷ್ಟಿಸುವವರಿಗೆ ಶಿಕ್ಷಯಾಗಬೇಕು
ಈ ಸರ್ಕಾರ ಮಾಡಿದ ತಪ್ಪುಗಳನ್ನ ಮುಚ್ಚಿಡಲು ಜಾತಿ, ಧರ್ಮ ಎಂದು ಹೇಳಿ ಜನರ ಗಮನವನ್ನ ಬೇರೆ ಕಡೆ ಸೆಳೆಯುವಂತ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರಿಗೊಂದು ಕಾನೂನು, ಜನ ಸಾಮನ್ಯರಿಗೆ ಇನ್ನೊಂದು ಕಾನೂನು ಇದೆ ಎಂದು ತಿಳಿದುಕೊಂಡಿದ್ದಾರೆ. ಪಿಎಸ್ಐ ನೇಮಕಾತಿ ಹಗರಣ ಸಾಕ್ಷಿ. ಮನೆ ಮಠ ಮಾರಿ ದುಡ್ಡು ಕೊಟ್ಟವರೂ ಜೈಲಿನಲ್ಲಿದ್ದಾರೆ. ದುಡ್ಡು ತೆಗದುಕೊಂಡ ಅಧಿಕಾರಿಗಳು, ರಾಜಕಾರಿಕಾರಣಿಗಳು ಆರಾಮವಾಗಿದ್ದಾರೆ. ಅದರ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇನ್ನು ಧರ್ಮಗಳ ನಡುವೆ ಜಗಳ ಹಚ್ಚುತ್ತಾರೆವವರ ಹೆಡೆಮೂರಿ ಕಟ್ಟುವಂತ ಕೆಲಸಕ್ಕೆ ಈ ಸರ್ಕಾರ ಕೈ ಹಾಕಬೇಕಿದೆ, ಆದರೆ ಈ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ ಎಂದರು.

ಜನವಿರೋಧಿ ಸರಕಾರ
ರೈತರಿಗೆ ಬೆಳೆವಿಮೆ ಬಂದಿದೆ, ರಾಜ್ಯ ಸರಕಾರ, ಕೇಂದ್ರ ಸರಕಾರದಿಂದ ಕಂತುಗಳು ಬಂದಿವೆ, ಆದರೆ ರೈತರಿಗೆ ಸಿಕ್ಕಿದ್ದು 5000 ಸಾವಿರ ಕೋಟಿ ರೂ, ಆದರೆ ಅದಾನಿ, ಅಂಬಾನಿ ಸೇರಿದಂತೆ 5 ಕಂಪನಿಗಳಿಗೆ ಕೂತಲ್ಲೇ 2000 ಕೋಟಿ ಲಾಭ ತಂದುಕೊಟ್ಟಿದೆ. ಇನ್ನು ಭೀಜ ಖರೀದಿಯಲ್ಲೂ ರೈತರಿಗೆ ಮೋಸವಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ 40% ಹೆಚ್ಚು ಬೆಲೆ ನೀಡಿ ಬೀಜ ಖರೀದಿಸಬೇಕಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿದರೆ ಹೇಗೆ ರೈತ ಬದುಕುತ್ತಾನೆ. ಇಷ್ಟೇ ಅಲ್ಲ, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮನ್ಯರ ಜೀವನವನ್ನು ದುಸ್ತರ ಮಾಡಿದ್ದಾರೆ. ರೆಪೋ ದರ ಹೆಚ್ಚು ಮಾಡಿದ್ದಾರೆ, ಇದರಿಂದ ಮನೆ ಕಟ್ಟುವವರಿಗೆ ಬಹಳ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications