ಗೌರಿ ಹತ್ಯೆಯಲ್ಲಿ ಮಗನ ಪಾತ್ರ ಇಲ್ಲ: ಆರೋಪಿ ತಾಯಿ ಕಣ್ಣೀರು
ಹುಬ್ಬಳ್ಳಿ, ಆಗಸ್ಟ್ 23: ಗೌರಿ ಲಂಕೇಶ್ ಅವರ ಹತ್ಯೆಯ ಪ್ರಕರಣದಲ್ಲಿ ಬಂಧಿತನಾಗಿರುವ ಹುಬ್ಬಳ್ಳಿಯ ಅಮಿತ್ ಬದ್ದಿ ಅವರ ತಾಯಿ ಇಂದು ಸುದ್ದಿಗೋಷ್ಠಿ ನಡೆಸಿದರು.
'ಗೌರಿ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ, ಸುಮ್ಮನೆ ನನ್ನ ಮಗನಿಗೆ ಪೊಲೀಸಿನವರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡುತ್ತಿದ್ದಾರೆ' ಎಂದು ಆರೋಪಿಸಿದರು.
'ಮಗನ ಬಂಧನವಾದಾಗಿನಿಂದ ಮನೆಯ ಎಲ್ಲರ ನೆಮ್ಮದಿ ಹಾರಿಹೋಗಿದೆ, ತಲೆ ಎತ್ತಿ ಓಡಾಡಲು ಆಗುತ್ತಿಲ್ಲ' ಎಂದು ಹೇಳಿ ಬಿಕ್ಕಳಿಸಿ ಅತ್ತರು.

ಮಗನ ಬಿಡುಗಡೆಗೆ ಸಹಾಯ ಮಾಡುವಂತೆ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಹಾಗೂ ಸಹೋದರ ಇಂದ್ರಜಿತ್ ಲಂಕೇಶ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಮಿತ್ ಬದ್ದಿ ಪತ್ನಿ ಸಹ ಹಾಜರಿದ್ದರು ಅವರೂ ಸಹ ಪತಿ ಅಮಾಯಕರಾಗಿದ್ದು, ಸುಮ್ಮನೆ ಹತ್ಯೆ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ಅವರು ಕಣ್ಣೀರು ಹಾಕಿದರು.
ಹುಬ್ಬಳ್ಳಿಯಲ್ಲಿ ಅಮಿತ್ ಬದ್ದಿ ಮತ್ತು ಗಣೇಶ ವಿಸ್ಕಿನ್ ಅವರನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಪೊಲೀಸರು ಜುಲೈ 23 ರಂದು ಬಂಧಿಸಿದ್ದರು. ಗೌರಿ ಹತ್ಯೆಗೆ ಇವರಿಬ್ಬರೂ ಸಹಕರಿಸಿದ್ದರು ಎಂದು ಎಸ್ಐಟಿ ಆರೋಪಿಸಿದೆ.
ಎಂ.ಎಂ.ಕಲಬುರ್ಗಿ ಅವರಿಗೆ ಗುಂಡು ಹಾರಿಸಿದ್ದು ಹುಬ್ಬಳ್ಳಿಯ ಗಣೇಶ್ ವಿಸ್ಕಿನ್ ಆದರೆ ಅಂದು ವಾಹನ ಚಲಾಯಿಸಿದ್ದು ಅಮಿತ್ ಬದ್ದಿ ಎಂಬ ಅಂಶವೂ ಎಸ್ಐಟಿ ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications