ಗಂಗೂಬಾಯಿ ಸಂಗೀತ ಪರಿಕರ ವಸ್ತು ಸಂಗ್ರಹಾಲಯಕ್ಕೆ ಜಾಗದ ಕೊರತೆ
ಹುಬ್ಬಳ್ಳಿ, ಜೂನ್ 24: ಭಾರತದ ಮೊಟ್ಟ ಮೊದಲ ಸಂಗೀತ ವಸ್ತು ಸಂಗ್ರಾಲಯ ಎಂದೇ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿಯ ಪದ್ಮ ವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಶಾಸ್ತ್ರೀಯ ಸಂಗೀತ ವಸ್ತು ಸಂಗ್ರಹಾಲಯ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದು, ಸಂಗೀತ, ಜಾನಪದ, ಬುಡಕಟ್ಟು ವಾದ್ಯಗಳ ಸಂಗ್ರಹಕ್ಕೆ ಮುಂದಾಗಿದ್ದು, ಸಂಪೂರ್ಣ ಸಂಗೀತ ಪರಿಕರಗಳ ಒಂದೇ ಸೂರಿನಡಿ ದೊರೆಯುಂತೆ ವ್ಯವಸ್ಥೆ ಮಾಡಿದೆ.
೨೦೦೫ರಲ್ಲಿ ಕೇವಲ ೩೦ ಪರಿಕರಗಳೊಂದಿಗೆ ಆರಂಭವಾದ ಸಂಗ್ರಹಾಲಯ ಇಂದು ಮದ್ರಾಸ್, ಕೊಲ್ಕತ್ತಾ, ಉತ್ತರ ಪ್ರದೇಶ, ದೆಹಲಿ, ಮುಂಬೈ, ಪೂನಾ, ಹೈದ್ರಾಬಾದ್ ಹಾಗೂ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ೧೨೦ಕ್ಕೂ ಹೆಚ್ಚಿನ ಪರಿಕರಗಳನ್ನು ಒಳಗೊಂಡಿದೆ. ಆದರೆ, ಇದಕ್ಕೆ ಜಾಗೆ ಕೊರತೆ ಎದುರಾಗಿದ್ದು, ಅಗತ್ಯ ಸ್ಥಳ ಸಿಕ್ಕರೆ ವ್ಯವಸ್ಥಿತವಾಗಿ ಸಂಗೀತ ಪರಿಕರಗಳ ಸಂಗ್ರಹಕ್ಕೆ ಸಹಕಾರಿಯಾಗಲಿದೆ.
ಬುಡಕಟ್ಟು ಸಂಸ್ಕೃತಿ ವಾದ್ಯಗಳು
ಭಾರತೀಯ ಶಾಸ್ತ್ರೀಯ ಸಂಗೀತ, ಜಾನಪದ, ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ತಂತಿವಾದ್ಯ, ಚರ್ಮವಾದ್ಯ, ಗಾಳಿವಾದ್ಯ, ಗಾಜಿನ ವಾದ್ಯ, ಮಣ್ಣಿನ ವಾದ್ಯ, ಲೋಹ ವಾದ್ಯ, ಬಿದಿರು ವಾದ್ಯಗಳ ಅಪರೂಪದ ವಾದ್ಯ ಪರಿಕರಗಳು ಈ ಶಾಸ್ತ್ರೀಯ ಸಂಗೀತ ವಸ್ತು ಸಂಗ್ರಹಾಲಯದಲ್ಲಿವೆ.
ಗೌರವಗಳು, ಫಲಕಗಳ ಸಾಲು
ಗಂಗಜ್ಜಿಗೆ ದೊರೆತ 52 ರಾಷ್ಟ್ರೀಯ ಹಾಗೂ ರಾಜ್ಯ ಪುರಸ್ಕಾರಗಳು, 1000 ಸವಿನೆನಪಿನ ಕಾಣಿಕೆ ಇವೆ. 300ಕ್ಕೂ ಅಧಿಕ ದೇಶದ ಮಹಾನ್ ಸಂಗೀತ ಸಾಧಕರ ಭಾವಚಿತ್ರಗಳು, 100ಕ್ಕೂ ಹೆಚ್ಚು ಶ್ರೀಗಂಧದ ವಸ್ತುಗಳನ್ನೂ ಈ ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ.
ವಿಷ್ಣು ಜೀ ಯಿಂದ ಮೀರಾ ಕುಮಾರ್ ವರೆಗೆ
ಡಾ.ವಿಷ್ಣುವರ್ಧನ್, ಭೀಮಸೇನ್ ಜೋಶಿ, ಉಸ್ತಾದ್ ಜಾಕೀರ್ ಹುಸೇನ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಎಸ್.ಎಲ್. ಭೈರಪ್ಪ, ನಾನಾ ಪಟೇಕರ್, ರಮೇಶ ಅರವಿಂದ್, ಎಚ್.ಡಿ. ದೇವೆಗೌಡ, ಎಲ್.ಕೆ. ಅಡ್ವಾಣಿ, ಮೀರಾ ಕುಮಾರ್ ಸೇರಿದಂತೆ ಅನೇಕ ದಿಗ್ಗಜರು ಇಲ್ಲಿಗೆ ಭೇಟಿ ನೀಡಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ಪ್ರತಿ ವರ್ಷ ಸಾವಿರಾರು ಸಂಗೀತ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಜಾಗದ ಕೊರತೆ
ಜಾಗದ ಕೊರತೆ ಗಂಗಜ್ಜಿ ಕ್ಯಾನ್ಸ್ರ್ ರೋಗಕ್ಕೆ ತುತ್ತಾದಾಗ ಅವರು ಕೊನೆಯ ದಿನಗದಲ್ಲಿ ತಾವು ಮಾಡಿದ ಸಾಧನೆಯನ್ನು ಸಂಗ್ರಹಾಲಯ ರೂಪದಲ್ಲಿ ನೋಡಲಿ ಎಂಬ ಉದ್ದೇಶದಿಂದ ಈ ಸಂಗ್ರಹಾಲಯ ಸ್ಥಾಪನೆ ಮಾಡಲಾಯಿತು. ಸದ್ಯಕ್ಕೆ ಸಂಗ್ರಹಾಲಯಕ್ಕೆ ಜಾಗದ ಕೊರತೆ ಇದೆ.
ಗಂಗಜ್ಜಿ ಮನೆಯನ್ನೇ ವಸ್ತು ಸಂಗ್ರಹಾಲಯವಾಗಿಸುವ ಆಲೋಚನೆ
''ಡಾ.ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಖಾಲಿ ಇರುವ ಕಟ್ಟಡ ನೀಡಿದರೆ ಅಲ್ಲಿಗೆ ಸಂಗೀತ ವಸ್ತು ಸಂಗ್ರಹಾಲಯ ಸ್ಥಳಾಂತರಿಸುತ್ತೇವೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿವಿ ನಗರದಲ್ಲಿ ಜಾಗ ನೀಡಿದರೆ ಅಲ್ಲಿಗೆ ಸ್ಥಳಾಂತರಿಸುತ್ತೇವೆ. ಇಲ್ಲವಾದರೆ ಗಂಗಜ್ಜಿಯ ಮನೆಯನ್ನೇ ಸಂಪೂರ್ಣ ವಸ್ತು ಸಂಗ್ರಹಾಲಯ ಮಾಡುವ ಯೋಜನೆ ಇದೆ'' ಎನ್ನುತ್ತಾರೆ ಗಂಗಜ್ಜಿ ಮೊಮ್ಮಗ ಮನೋಜ್ ಹಾನಗಲ್.