ರಾಜ್ಯದ ಸಂಸದರು ಗಂಡಸರೋ ಅಥವಾ ಹೆಂಗಸರೋ :ಸಿ.ಎಂ ಇಬ್ರಾಹಿಂ ಆಕ್ರೋಶ
ಹುಬ್ಬಳ್ಳಿ, ಸೆಪ್ಟೆಂಬರ್ 06: ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿಯೇ ಸರ್ಕಾರ, ಪ್ರತಿಪಕ್ಷಗಳು ಕಾಲಹರಣ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಆರೋಪ ಹಾಗೂ ಪ್ರತ್ಯಾರೋಪದಲ್ಲಿಯೇ ಕಾಲಹರಣ ಹಾಕಲಾಗುತ್ತಿದ್ದು, ಸರಿಯಾಗಿ ನಮ್ಮ ವಿರೋಧ ಪಕ್ಷ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ನಿರುದ್ಯೋಗ, ಅತಿವೃಷ್ಟಿ, ಅನಾವೃಷ್ಟಿ ಕಾಡುತ್ತಿದೆ. ಲೋಕೋಪಯೋಗಿ ನೀರಾವರಿ ಸೇರಿದಂತೆ ಅನೇಕ ಇಲಾಖೆಯಲ್ಲಿ ಬಿಲ್ ಆಗುತ್ತಿಲ್ಲ. ಇನ್ನಷ್ಟು ದಿನ ಹೋದರೆ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳು ಪರಿಸ್ಥಿತಿ ಬರುತ್ತದೆ ಎಂದರು.

ಬಿಜೆಪಿಯವರು ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಆದರೆ ನೀವು ಏನು ಮಾಡಿದಿರಿ ಮೊದಲು ಹೇಳಿ. ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ. 27 ಸಂಸದರು ಗಂಡಸರೋ ಅಥವಾ ಹೆಂಗಸರೋ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಹದಾಯಿ, ನೀರಾವರಿ ಯೋಜನೆ ಜಾರಿ ಮಾಡಲು ಆಗಲಿಲ್ಲ. ರಾಜ್ಯದ ಸಂಸದರು ಕೇಂದ್ರಕ್ಕೆ ಹೋಗಿ ಒತ್ತಾಯ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಎದುರಿಗೆ ಏನು ಮಾತನಾಡುತ್ತಿಲ್ಲ. ರಾಜ್ಯದ ಸಂಪತ್ತು ಎಲ್ಲಿ ಹೋಗುತ್ತಿದೆ. ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ರಾಜ್ಯದ ಹಕ್ಕನ್ನು ರಾಜ್ಯಕ್ಕೆ ಕೊಡಬೇಕು ಕೇಂದ್ರದಿಂದ ಸಿಗುವ ಪಾಲು ಸಿಗಬೇಕು ಎಂದು ಆಗ್ರಹಿಸಿದರು.












Click it and Unblock the Notifications