ಖರ್ಗೆಯವರು ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಬಾರದು ಅನ್ನೋದು ನನ್ನ ಆಸೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಅಕ್ಟೋಬರ್, 03: ನಕಲಿ ಗಾಂಧಿ ಪರಿವಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಹುಲ್ ಗಾಂಧಿ ವಿರುದ್ಧ ಹುಬ್ಬಳ್ಳಿಯಲ್ಲಿ ಹರಿಹಾಯ್ದರು.
ಈಗಾಗಲೇ ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಡಿಪಾಸಿಟ್ ಕಳೆದುಕೊಂಡಿದೆ. "ಇದೀಗ ರಾಹುಲ್ ಗಾಂಧಿ ಇನ್ನೊಬ್ಬರು ಬರೆದು ಕೊಟ್ಟಿದ್ದನ್ನು ಓದಿ ನಾಚಿಕೆ ಮಾನ ಮರ್ಯಾದೆ ಇಲ್ಲದೇ ಓದುತ್ತಾರೆ. ಚೀಟಿ ವಾಪಾಸ್ ಪಡೆದ ನಂತರ ಅದರಲ್ಲಿನ ವಿಷಯ ಗೊತ್ತಿರಲ್ಲ," ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.
ರಾಹುಲ್ ಗಾಂಧಿ ವಿರುದ್ಧ ಜೋಶಿ ವಾಗ್ದಾಳಿ
ನಗರದ ಕಿಮ್ಸ್ ಆವರಣ ಮುಂಭಾಗದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಮಾತನ್ನು ಸಿರಿಯಸ್ ಆಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು "ಭಾರತ್ ಜೋಡೋ" ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ ಜನರು ಯಾರು ಯಾರ ಪರ ಇದ್ದಾರೆ ಎಂಬುದನ್ನು ತಮ್ಮ ತೀರ್ಮಾನವನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೇಂದ್ರದಲ್ಲಿ 10 ವರ್ಷ ನಿರಂತರವಾಗಿ ಭ್ರಷ್ಟಾಚಾರ ಹಗರಣದ್ದೇ ಸುದ್ದಿ ಇತ್ತು ಎಂದು ವಾಗ್ದಾಳಿ ನಡೆಸಿದರು.

ಇನ್ನು ಮೋದಿ ಆಡಳಿತದಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂಬ ರಾಹುಲ್ ಗಾಂಧಿ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರ ಕಾಲದಲ್ಲಿ ಹೆಚ್ಚು ಸಾಲ ಆಗಿದೆ ಎಂಬುದನ್ನು ಅಂಕಿ ಅಂಶಗಳಿವೆ. ಕೊರೊನಾ ಸಮಯದಂತಹ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಆಗಿದೆ. ಹೀಗಾಗಿ ಭಾರತದ ಹಿರಿಮೆ ಗರಿಮೆ ಬಗ್ಗೆ ಸುಳ್ಳು, ಅಪಪ್ರಚಾರ ಮಾಡಬಾರದು ಎಂದರು.
"ಕಾಂಗ್ರೆಸ್ ಫ್ಯಾಮಿಲಿ ರನ್ ಪಾರ್ಟಿ"
ಇನ್ನು ಕರ್ನಾಟಕವು ಭಾರತ ಹಾಗೂ ಭಾರತ ಮಾತೆಯನ್ನು ಪ್ರೀತಿಸುತ್ತದೆ. ರಾಹುಲ್ ಗಾಂಧಿ ಕನಿಷ್ಟ ಕರ್ನಾಟಕದಲ್ಲಿ ಭಾರತ ಮಾತೆಗೆ ಗೌರವ ಕೊಡುವ ಜನರನ್ನು ಭೇಟಿ ಆಗಲಿ. ಪ್ರಥಮ ಬಾರಿಗೆ ಕಾಂಗ್ರೆಸ್ ಪಾರ್ಟಿ ಚಟುವಟಿಕೆ ಮಾಡುತ್ತಿದ್ದಾರೆ. ಇದು ನನಗೆ ಸಂತೋಷ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇಷ್ಟು ದಿನ ಅವರ ಚಟುವಟಿಕೆ ದೆಹಲಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಕರ್ನಾಟಕಕ್ಕೆ ಬಂದಿದೆ. ಭಾರತ್ ತೋಡೋದವರ ಜೊತೆಗೆ ಕೂಡಬೇಡಿ, ಜೋಡೋದವರ ಜೊತೆ ಕೂಡಿ. ಭಾರತ್ ಜೋಡೋಗೆ ಯಾರದ್ದು ತಕರಾರಿಲ್ಲ. ಭಾರತ್ ಜೋಡೋ ಹೆಸರಿನಲ್ಲಿ ತೋಡೋದವರ ಜೊತೆ ಕೂಡಬೇಡಿ ಎಂದು ವ್ಯಂಗ್ಯವಾಡಿದರು.

ಯಾವತ್ತಿನಿಂದ ಆರ್ಎಸ್ಎಸ್ ಶುರುವಾಗಿದೆಯೋ ಅವತ್ತಿನಿಂದ ಆರ್ಎಸ್ಎಸ್ ಟಾರ್ಗೆಟ್ ಮಾಡಲಾಗುತ್ತಿದೆ. ಯಾರೇ ಟಾರ್ಗೆಟ್ ಮಾಡಿದರೂ ತನ್ನ ಧ್ಯೇಯದೊಂದಿಗೆ ಮುಂದೆ ಹೋಗುತ್ತದೆ. ಆರ್ಎಸ್ಎಸ್ ದೇಶದ ಮೌಲ್ಯಗಳು, ದೇಶದ ಹಿತದ ಬಗ್ಗೆ ನಂಬಿಕೆ ಇಟ್ಟ ಸಂಘ. ಮಲ್ಲಿಕಾರ್ಜುನ ಖರ್ಗೆ ಹಿರಿಯರು, ವೈಯಕ್ತಿಕವಾಗಿ ನಾನು ಅವರು ಕಳೆದ ಹದಿನೈದು ವರ್ಷಗಳಿಂದ ಪಾರ್ಲಿಮೆಂಟ್ನಲ್ಲಿದ್ದೀವಿ. ಕಾಂಗ್ರೆಸ್ ಫ್ಯಾಮಿಲಿ ರನ್ ಪಾರ್ಟಿ. ಖರ್ಗೆಯವರು ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗಬಾರದು ಅನ್ನೋದು ನನ್ನ ಆಸೆ ಎಂದು ಜೋಶಿ ಲೇವಡಿ ಮಾಡಿದರು.












Click it and Unblock the Notifications