ಸಿಎಂ ಕುರ್ಚಿ ಬಗ್ಗೆ ಕನಸಿನ ಮಾತು ಹೇಳಿದ ಜಗದೀಶ್ ಶೆಟ್ಟರ್!
ಹುಬ್ಬಳ್ಳಿ, ಡಿಸೆಂಬರ್.08: ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶಕ್ಕೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದೆ. ರಾಜಕೀಯ ನಾಯಕರು ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿಗಳು ಮತ್ತೊಂದು ಸಿಎಂ ಕುರ್ಚಿ ಮೇಲೆ ಕೂರುವ ಕನಸು ಕಾಣಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಅನರ್ಹರ ಪರ ಜನರ ಒಲವು? ಸಮೀಕ್ಷೆಗಳು ಹೇಳುವುದೇನು?
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ. ಉಪ ಚುನಾವಣಾ ಫಲಿತಾಂಶ ಬರುವ ಮುಂಚಿಯೇ ಕಾಂಗ್ರೆಸ್ ಅಧಿಕಾರದ ಕನಸು ಕಾಣುತ್ತಿದ್ದು, ಸಿದ್ಧರಾಮಯ್ಯ ಅವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಯಾರಪ್ಪಾ ಮುಂದಿನ ಮುಖ್ಯಮಂತ್ರಿ?
ಉಪ ಚುನಾವಣಾ ಫಲಿತಾಂಶ ಬರುವ ಮೊದಲೆ ಯಾರು ಸಿಎಂ ಎನ್ನುವ ಚರ್ಚೆ ನಡೆಸಿದ್ದರು. ಸಿದ್ದರಾಮಯ್ಯ ಆಗಬೇಕಾ ಅಥವಾ ಮಲ್ಲಿಕಾರ್ಜುನ ಖರ್ಗೆ ಆಗಬೇಕು ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಮೇಲೆ ನಾಯಕರು ಕಣ್ಣು ಇಟ್ಟಿದ್ದು, ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲೆಸುವ ಕೆಲಸ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಯೂಟರ್ನ್
ವಿಧಾನಸಭೆ ಉಪ ಚುನಾವಣೆ ಫಲಿತಾಂಶದ ಕುರಿತು ಸಿ ವೋಟರ್ ಸಮೀಕ್ಷೆ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ರಾಗ ಬದಲಿಸಿದ್ದಾರೆ. ಸಮೀಕ್ಷೆಗಳಲ್ಲಿ ಫಲಿತಾಂಶ ಬಿಜೆಪಿ ಪರವಾಗಿ ಬಂದಿತೋ, ಆಗ ಸಿದ್ದರಾಮಯ್ಯ ಯೂ ಟರ್ನ್ ಹೊಡಿದಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂದು ಹೇಳೇ ಇಲ್ಲ ಅಂತಾ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಗುಡುಗಿದ್ದಾರೆ.
ಜನರ ನಾಡಿಮಿಡಿತ ತಿಳಿಸಿಲ್ಲ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ಧರಾಮಯ್ಯಗೆ ಜನರ ನಾಡಿಮಿಡಿತವೇ ಗೊತ್ತಿಲ್ಲ. ಅಹಂಕಾರ, ಹಮ್ಮುನಿಂದ ಮಾತನಾಡುತ್ತಾರೆ. ಅವರ ನಾಯಕತ್ವ ಅಂತ್ಯಕಾಲಕ್ಕೆ ಬಂದಿದ್ದು, ಮೊದಲು ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ. ಫಲಿತಾಂಶದ ಬಳಿಕ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನವನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಸ್ಥಿತಿ ಬಂದಿದೆ ಎಂದರು.
ಸಿದ್ದು ಕೊಟ್ಟ ಭಾಗ್ಯ ಜನರಿಗೆ ದೌರ್ಭಾಗ್ಯ
ಇನ್ನು, ಸಿದ್ದರಾಮಯ್ಯ ಸಿಎಂ ಆದಾಗ ಹಲವಾರು ಭಾಗ್ಯಗಳನ್ನು ನೀಡಿದ್ದರು. ಆದರೆ ಆ ಭಾಗ್ಯಗಳು ಜನರಿಗೆ ತಲುಪಿಲ್ಲ ಎಂಬುವುದೇ ದೌರ್ಭಾಗ್ಯ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಜಾರಿಗೊಳಿಸಿದ ಸರ್ಕಾರದ ಎಲ್ಲ ಭಾಗ್ಯಗಳನ್ನು ಯಾರೋ ಲೂಟಿ ಮಾಡಿಕೊಂಡು ಹೋಗಿದ್ದಾರೆ ಎಂದು ಜಗದೀಶ್ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.