ವಿದ್ಯುತ್ ಸಂಪರ್ಕವೇ ಇಲ್ಲ, ಆದ್ರೂ ಮನೆಗೆ ಬಂತು ಕರೆಂಟ್ ಬಿಲ್!
ಹುಬ್ಬಳ್ಳಿ, ಅಕ್ಟೋಬರ್ 17: ಇಷ್ಟು ದಿನ ನೀರಿನ ಬಿಲ್, ಕರೆಂಟ್ ಬಿಲ್ ಮೊತ್ತದಲ್ಲಿ ವ್ಯತ್ಯಾಸವಾಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ವಿದ್ಯುತ್ ಸಂಪರ್ಕವೇ ಇಲ್ಲದಿದ್ದರೂ ಇಲ್ಲೊಬ್ಬರಿಗೆ ವಿದ್ಯುತ್ ಬಿಲ್ ಬಂದಿದೆ.
ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಬಸಪ್ಪ ತುಳಸಪ್ಪ ತಳವಾರ ಎಂಬುವವರಿಗೆ ಸೌಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ತಂತಿಯನ್ನು ಅವರ ಮನೆಗೆ ಎಳೆಯಲಾಗಿದೆ. ಆದರೆ ಇದುವರೆಗೂ ಅವರಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಯಾವುದೇ ವಿದ್ಯುತ್ ಸಂಪರ್ಕ ನೀಡದೆ ಇದ್ದರೂ ಬಸಪ್ಪ ತಳವಾರ ಅವರಿಗೆ ಹೆಸ್ಕಾಂ ಸಿಬ್ಬಂದಿ 211 ರೂಪಾಯಿ ವಿದ್ಯುತ್ ಬಿಲ್ ನೀಡಿದ್ದಾರೆ. ವಿದ್ಯುತ್ ಬಿಲ್ ಕಂಡ ಬಸಪ್ಪ ತಳವಾರ ಕುಟುಂಬದವರು ಆಶ್ಚರ್ಯಚಕಿತರಾಗಿದ್ದಾರೆ.
ನಮ್ಮ ಮನೆಗೆ ಕರೆಂಟೇ ಇಲ್ಲ, ಅದು ಹೇಗೆ ಬಿಲ್ ಕೊಟ್ಟರು ಎಂದು ತಬ್ಬಿಬ್ಬಾಗಿದ್ದಾರೆ. ಈ ಬಗ್ಗೆ ಹೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಆದರೆ ಯಾರೂ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಸೌಭಾಗ್ಯ ಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 40 ಯೂನಿಟ್ ಉಚಿತವಾಗಿ ವಿದ್ಯುತ್ ನೀಡಬೇಕು. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸದೆಯೇ ಬಿಲ್ ನೀಡಿದ್ದಾರೆ. ಇನ್ನು ಸಂಪರ್ಕ ಕೊಟ್ಟ ಮೇಲಿನ ಕಥೆ ಏನೋ ಎನ್ನುತ್ತಿದ್ದಾರೆ ಕುಟುಂಬದವರು.












Click it and Unblock the Notifications