ಹುಬ್ಬಳ್ಳಿಯಲ್ಲಿ ಮುಖಾಮುಖಿಯಾದ ಡಿಕೆಶಿ, ಶ್ರೀರಾಮುಲು!
Recommended Video
ಹುಬ್ಬಳ್ಳಿ, ಮೇ 12 : ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ಮುಖಾಮುಖಿಯಾಗಿದ್ದಾರೆ. ಬಳ್ಳಾರಿ ಲೋಕಸಭಾ ಉಪ ಚುನಾವಣೆ ಸಮಯದಿಂದಲೂ ಇಬ್ಬರು ರಾಜಕೀಯ ವೈರಿಗಳು.
ಶನಿವಾರ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉಭಯ ನಾಯಕರು ಮುಖಾಮುಖಿಯಾಗಿದ್ದಾರೆ. ಅಕ್ಕಪಕ್ಕ ಕುಳಿತು ಕೆಲವು ಕಾಲ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್, ಬಿ.ಶ್ರೀರಾಮುಲು ಅವರು ಒಟ್ಟಿಗೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿ.ಶ್ರೀರಾಮುಲು ಮತ್ತು ಡಿ.ಕೆ.ಶಿವಕುಮಾರ್ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಶನಿವಾರ ಇಬ್ಬರೂ ಪ್ರಚಾರ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುವಾಗ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾಲದಿಂದಲೂ ಡಿ.ಕೆ.ಶಿವಕುಮಾರ್ ಮತ್ತು ಬಿ.ಶ್ರೀರಾಮುಲು ರಾಜಕೀಯ ವೈರಿಗಳು. ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತ ಅವರನ್ನು ಬಳ್ಳಾರಿ ಉಪ ಚುನಾವಣೆಯಲ್ಲಿ ವಿ.ಎಸ್.ಉಗ್ರಪ್ಪ ಅವರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸುವಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ದೊಡ್ಡದು.....

ಉಭಯ ನಾಯಕರ ಮಾತುಕತೆ
ಡಿ.ಕೆ.ಶಿವಕುಮಾರ್ ಮತ್ತು ಬಿ.ಶ್ರೀರಾಮುಲು ಅವರು ಕೆಲವು ಹೊತ್ತು ವಿಮಾನ ನಿಲ್ದಾಣದಲ್ಲಿ ಮಾತುಕತೆ ನಡೆಸಿದರು. ಬಿ.ಶ್ರೀರಾಮುಲು ಅವರನ್ನು ಕಂಡು ಅಣ್ಣಾ ಎಂದು ಡಿ.ಕೆ.ಶಿವಕುಮಾರ್ ಮಾತನಾಡಿದರೆ, ಸ್ವಲ್ಪ ಮುಜುಗರಕ್ಕೆ ಒಳಗಾದ ಶ್ರೀರಾಮುಲು ಅವರು ಟ್ರಬಲ್ ಶೂಟರ್ ಎಂದು ಕರೆದು ಡಿ.ಕೆ.ಶಿವಕುಮಾರ್ರತ್ತ ನಗು ಬೀರಿದರು.

ವಿವಾದಾತ್ಮಕ ಹೇಳಿಕೆ
ಕುಂದಗೋಳ ವಿಧಾನಸಭಾ ಉಪ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ಬಿ.ಶ್ರೀರಾಮುಲು ಅವರು, 'ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರದ ತೀವ್ರ ಒತ್ತಡವೇ ಕಾರಣ. ಆ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ' ಎಂದು ಹೇಳಿದ್ದರು. ಈ ಹೇಳಿಕೆ ಬಾರಿ ವಿವಾದಕ್ಕೆ ಕಾರಣವಾಗಿತ್ತು.

ಡಿ.ಕೆ.ಶಿವಕುಮಾರ್ ಹೇಳಿಕೆ
ಬಿ.ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್ ಅವರು, 'ಶಿವಳ್ಳಿ ಸಾವಿನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಶ್ರೀರಾಮುಲು ಅವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲಿ. ಇಂತಹ ಮಾತುಗಳನ್ನಾಡಿ ರಾಜಕೀಯದ ಗೌರವ ಹಾಳು ಮಾಡಬಾರದು. ನಮ್ಮ ಶ್ರೀರಾಮುಲು ಅಣ್ಣಾ ಸೇಡಿನ ರಾಜಕೀಯ ಮಾಡಲಿ, ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ' ಎಂದು ಹೇಳಿದ್ದರು.

ಶ್ರೀರಾಮುಲು ಅಣ್ಣಾ
2018ರಲ್ಲಿ ನಡೆದ ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ಅಂದಿನಿಂದಲೂ ಅವರು ಶ್ರೀರಾಮುಲು ಅವರನ್ನು ಅಣ್ಣಾ ಎಂದೇ ಕರೆಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿಯೂ ಹೀಗೆ ಕರೆದರು.












Click it and Unblock the Notifications