'ಪ್ರತ್ಯೇಕ ಧರ್ಮ ಅಭಿಪ್ರಾಯ ಸಂಗ್ರಹಕ್ಕೆ ಮಂತ್ರಿಗಳನ್ನ ನೇಮಿಸಿಲ್ಲ'
ಹುಬ್ಬಳ್ಳಿ, ಜುಲೈ 27 : ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಯಾವ ಸಚಿವರನ್ನೂ ನೇಮಕ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರತ್ಯೇಕ ಧರ್ಮದ ವಿಷಯವಾಗಿ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಧಾರವಾಡ ಹಾಗೂ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೀರಶೈವ ಮುಖಂಡರು ಪ್ರತ್ಯೇಕ ಧರ್ಮದ ಕುರಿತು ಮನವಿ ಮಾಡಿದ್ದರು. ಅದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದೆ" ಎಂದು ಹೇಳಿದರು.

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಹಾಗೂ ವಿರೋಧ ಮನವಿಯನ್ನೂ ಆಲಿಸುವುದಾಗಿಯೂ ಸಿದ್ದರಾಮಯ್ಯ ತಿಳಿಸಿದರು.
ಹು-ಧಾ ಮೆಯರ್ ಗೆ ಅವಮಾನ?: ಹುಬ್ಬಳ್ಳಿ-ಧಾರವಾಡದ ಪ್ರಥಮ ಪ್ರಜೆ ಡಿ.ಕೆ.ಚೌವ್ಹಾಣ್ ಅವರಿಗೆ ಮತ್ತೆ ಅವಮಾನವಾಗಿದೆ. ಮುಖ್ಯಮಂತ್ರಿ ಬರುವಿಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ತೆರಳಿದ್ದ ಮೆಯರ್ ಚೌವ್ಹಾಣ್ ಅವರನ್ನು ವಿಮಾನ ನಿಲ್ದಾಣದ ಒಳಗೆ ಬಿಡದೆ ಭದ್ರತಾ ಸಿಬ್ಬಂದಿ ಅವಮಾನ ಮಾಡಿದ್ದಾರೆ ಎಂದು ಚೌವ್ಹಾಣ್ ಆರೊಪಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ಹುಬ್ಬಳ್ಳಿ-ಧಾರವಾಡದ ಪ್ರಥಮ ಪ್ರಜೆ ಮುಖ್ಯಮಂತ್ರಿಗಳನ್ನು ಸ್ವಾಗತಿಸಬೇಕು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಕೈಗೊಂಬೆಯಾಗಿರುವ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣ ಒಳಗೆ ಪ್ರವೇಶಿಸಲು ಬಿಡಲಿಲ್ಲ.
ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಇದು ಮೊದಲಲ್ಲ. ಹಲವು ಬಾರಿ ಇದೇ ರೀತಿಯಾಗಿದೆ ಎಂದೂ ಅವರು ದೂರಿದರು.












Click it and Unblock the Notifications