ಹುಬ್ಬಳ್ಳಿಯಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣ: ತನಿಖೆ ಚುರುಕುಗೊಳಿಸುವಂತೆ ಆಗ್ರಹ
ಹುಬ್ಬಳ್ಳಿ, ಡಿಸೆಂಬರ್ 16: ಚಿಲುಮೆ ಸಂಸ್ಥೆ ಬೆಂಗಳೂರಿನಲ್ಲಿ ನಡೆಸಿದೆ ಎನ್ನಲಾದ ವೋಟರ್ಗೇಟ್ ಹಗರಣದ ಮಾದರಿಯಲ್ಲಿಯೇ ಪ್ರಕರಣ ಹುಬ್ಬಳ್ಳಿಯಲ್ಲೂ ನಡೆಯುತ್ತಿದೆ ಎನ್ನಲಾಗಿದೆ.
ಖಾಸಗಿ ಸಂಸ್ಥೆಯು ಮತದಾರರ ಮಾಹಿತಿ ಕದಿಯುತ್ತಿದೆ ಮತ್ತು ಮತ ಪಟ್ಟಿಯಲ್ಲಿನ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ ಎಂಬ ಶಂಕೆ ಬಲು ಜೋರಾಗಿದೆ. ಇದು ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಬಹುಚರ್ಚಿತ ವಿಷಯವಾಗಿದೆ. ರಾಜಕೀಯದಲ್ಲೂ ತೀವ್ರ ಸಂಚಲನವನ್ನುಂಟು ಮಾಡಿದ್ದು, ಈ ಪ್ರಕರಣದ ತನಿಖೆ ಇದೀಗ ಚುರುಕಾಗಿದೆ.
ಆರ್ಟಿಐ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ಭೂಮಿ ಕಳೆದುಕೊಂಡ ರೈತರು
ಎಎಸ್ಆರ್ ಸಂಸ್ಥೆಯ ಸಮೀಕ್ಷೆಯೇ ಇದೀಗ ಬಲು ಚರ್ಚಿತ ವಿಷಯವಾಗಿದೆ. ಆದರೆ ಧಾರವಾಡ ಜಿಲ್ಲಾಡಳಿತ ವೋಟರ್ಗೇಟ್ ನಡೆದಿಲ್ಲ ಎನ್ನುತ್ತಿದೆ . ಆದರೆ ರಾಜಕೀಯದಲ್ಲಿ ಈ ವಿಚಾರ ತೀವ್ರ ಸಂಚಲನ ಮೂಡಿಸಿದೆ.
1.40 ಲಕ್ಷ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆರೋಪ
ಕಳೆದ ಆರೇಳು ತಿಂಗಳಿನಿಂದ ಬೇರೆ ಬೇರೆ ಖಾಸಗಿ ಕಂಪನಿಗಳು ಮತದಾರರ ಮಾಹಿತಿ ಕದಿಯುವ ಕೆಲಸ ಮಾಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ 1.40 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಕಾಂಗ್ರೆಸ್ ಮಾಡುತ್ತಿದೆ. ಅನಧಿಕೃತ ಡಿಲಿಟ್ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಜಿಲ್ಲಾಡಳಿತ 1.46 ಲಕ್ಷಕ್ಕೂ ಅಧಿಕ ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಷ್ಟಪಡಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮತಗಳು ಡಿಲಿಟ್ ಆಗುತ್ತಿರುವುದು ನಿಜ ಎಂದಿರುವುದು ಪ್ರತಿಪಕ್ಷಗಳ ಶಂಕೆಯನ್ನು ಬಲಗೊಳಿಸಿದೆ.
1,46,316 ಜನರನ್ನು ಡಿಲಿಟ್ ಮಾಡಲಾಗಿದೆ ಎಂದ ಜಿಲ್ಲಾಡಳಿತ
ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬರೋಬ್ಬರಿ 14,67,658 ಮತದಾರರಿದ್ದಾರೆ. ಆದರೆ 2018ರ ಚುನಾವಣೆ ವೇಳೆ ಮತದಾರರ ಸಂಖ್ಯೆ 14,48,748 ಇತ್ತು. ಅಂದರೆ ಈಗ 18,910 ಜನರ ಹೆಸರು ಡಿಲಿಟ್ ಆಗಿದ್ದು ಕಂಡು ಬರುತ್ತದೆ. ಇದಕ್ಕೆ ಜಿಲ್ಲಾಡಳಿತ, ಜನವರಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಕೇವಲ 18,910 ಜನರ ಹೆಸರು ಮಾತ್ರ ಡಿಲಿಟ್ ಆಗಿಲ್ಲ. ಬರೋಬ್ಬರಿ 1,43,316 ಜನರನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಮೃತಪಟ್ಟವರು 22,344 ಜನರಿದ್ದರೆ, ಸ್ಥಳಾಂತರಗೊಂಡವರೇ 30,466. 46ಸಾವಿರಕ್ಕೂ ಅಧಿಕ ಜನ ನಕಲಿ ಮತದಾರರು, ಒಂದೇ ಬಗೆಯ ಫೋಟೋ ಇದ್ದ ಎರಡು ಮೂರು ಎಪಿಕ್ ಕಾರ್ಡ್ ಹೊಂದಿರುವವರು ಹೀಗೆ 1,46,316 ಜನರನ್ನು ಡಿಲಿಟ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಚುನಾವಣಾ ಆಯೋಗ ಗಮನ ಹರಿಸುವಂತೆ ಕಾಂಗ್ರೆಸ್ ಆಗ್ರಹ
ಇನ್ನು ಮತದಾರರ ಪಟ್ಟಿಯಿಂದ ಹೆಸರನ್ನು ಡಿಲೀಟ್ ಮಾಡುವುದರ ಜೊತೆಗೆ 1 ಲಕ್ಷಕ್ಕೂ ಅಧಿಕ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ, ಹೀಗಾಗಿ 14.67 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಮತದಾರರ ಪಟ್ಟಿ ವಿವರಣೆ ರಾಜಕೀಯ ಪಕ್ಷಗಳಿಗೆ ಆಗಾಗ ನೀಡಲಾಗುತ್ತಿದೆ. ಅಂತಿಮ ಪಟ್ಟಿ ಬಂದಾಗ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸುತ್ತಿದೆ. ಆದರೆ ಪ್ರತಿ ಕ್ಷೇತ್ರದಿಂದ 10 ರಿಂದ 20 ಸಾವಿರ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತಿದೆ. ಅರ್ಹ ಮತದಾರರ ಹೆಸರು ಡಿಲೀಟ್ ಆಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ಚುನಾವಣಾ ಆಯೋಗ ಹೆಚ್ಚಿನ ಗಮನ ಹರಿಸಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತಿದೆ.
ನಿವೃತ್ತ ಆಯುಕ್ತರ ಹೆಸರು ಮತದಾರರ ಪಟ್ಟಿಯಿಂದ ಮಾಯ
ಇನ್ನು ಈ ಹಿಂದೆ ಜೀವಂತವಾಗಿರುವವರನ್ನೇ ನಿಧನರಾಗಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಪ್ರಕರಣ ಕೂಡ ಧಾರವಾಡದಲ್ಲಿ ಬೆಳಕಿಗೆ ಬಂದಿತ್ತು. ಬಳ್ಳಾರಿ ಮಹಾನಗರ ಪಾಲಿಕೆಯ ನಿವೃತ್ತ ಆಯುಕ್ತ ಡಾ.ಚೆನ್ನಬಸವರಾಜ ಶಿರಗುಪ್ಪಿ ಎನ್ನುವವರ ಹೆಸರು ಮತದಾರ ಪಟ್ಟಿಯಲ್ಲಿ ಡಿಲೀಟ್ ಆಗಿತ್ತು. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಹೋದ ಶಿರಗುಪ್ಪಿ ಅವರಿಗೆ, ಮಹಾನಗರ ಪಾಲಿಕೆ ಸಿಬ್ಬಂದಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರೇ ಇಲ್ಲ ಎಂದು ತಿಳಿಸಿದ್ದು, ಸರ್ವೇ ಮಾಡಲು ಬಂದಾಗ 'ಶಿರಗುಪ್ಪಿ ಅವರು ಇಲ್ಲ ಎಂದು ಹೇಳಿದ' ಒಂದೇ ಒಂದು ಕಾರಣಕ್ಕೆ ಅವರ ಹೆಸರನ್ನೇ ಮತದಾರ ಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.