ಧಾರವಾಡ: ಕಾಂಗ್ರೆಸ್ಗೆ ನಾಯಕರ ಕೊರತೆ ನೀಗಿಸಿದ ಶೆಟ್ಟರ್, ಲೋಕಸಭಾ ತಯಾರಿಯಲ್ಲಿ ಮಾಜಿ ಸಿಎಂ?
ಹುಬ್ಬಳ್ಳಿ, ಮೇ 23: ವಿಧಾನಸಭೆ ಫಲಿತಾಂಶದ ನಂತರ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂದಿನ ನಡೆ ಏನೆಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಜಗದೀಶ್ ಶೆಟ್ಟರ್ಗೆ ಕಾಂಗ್ರೆಸ್ ಕಲಿಗಳು ಮಹತ್ವದ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರದಂತೆ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆಂಬ ಮಾತುಗಳು ಸದ್ಯ ಕ್ಷೇತ್ರದಲ್ಲಿ ಭಾರೀ ಕೇಳಿ ಬರುತ್ತಿದೆ. ಈ ನಡುವೆ ಜಗದೀಶ್ ಶೆಟ್ಟರ್ಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗುತ್ತದೆಯೋ ಇಲ್ಲವೋ ಎನ್ನುವುದು ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಟಿಕೆಟ್ ನಿರಾಕರಣೆಯಿಂದ ಸ್ವಾಭಿಮಾನಕ್ಕೆ ಪೆಟ್ಟುಬಿದ್ದು ಪಕ್ಷ ತೊರೆದಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕ್ಷೇತ್ರದ ಜನರು ಕೈ ಹಿಡಿಯದ ಕಾರಣ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಎದುರು ಶೆಟ್ಟರ್ ಸೋಲು ಅನುಭವಿಸಬೇಕಾಯಿತು.
ಜಗದೀಶ್ ಶೆಟ್ಟರ್ ಬಿಜೆಪಿ ಮೇಲೆ ತೀವ್ರ ಅಸಮಾಧಾನಗೊಂಡಿದ್ದು, ಟಿಕೆಟ್ ವಂಚಿತರಾಗಲು ಹಾಗೂ ತಮ್ಮ ಸೋಲಿಗೆ ಬಿ.ಎಲ್. ಸಂತೋಷ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಕಾರಣ ಎಂದಿದ್ದಾರೆ. ರಾಜಕೀಯವಾಗಿ ತಮ್ಮನ್ನು ಮೂಲೆಗುಂಪು ಮಾಡಿದವರ ವಿರುದ್ಧ ಜಗದೀಶ್ ಶೆಟ್ಟರ್, ಲೋಕಸಭೆಗೆ ಸ್ಫರ್ಧಿಸಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿವೆ.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮಾರನೇ ದಿನವೇ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಾಯಕರು ಕರೆ ಮಾಡಿ ಧಾರವಾಡದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಜಗದೀಶ್ ಶೆಟ್ಟರ್ ಸೋತರು ಅವರ ಹಿರಿತನಕ್ಕೆ ಗೌರವ ಕೊಟ್ಟು ಕಾಂಗ್ರೆಸ್ ಎಂಎಲ್ಸಿ ಮಾಡುವ ಮೂಲಕ ಮಂತ್ರಿ ಸ್ಥಾನ ನೀಡಬಹುದು ಎಂದುಕೊಂಡಿದ್ದ ಬಹುಜನರಿಗೆ ನಿರಾಸೆಯಾಗಿದೆ.

ಆದರೆ ಕಾಂಗ್ರೆಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮುಂಬರುವ ಲೋಕಸಭೆ ಚುನವಣೆಗೆ ತಯಾರಿ ನಡೆಸುವಂತೆ ಕೈ ನಾಯಕರು ಶೆಟ್ಟರಗೆ ಸೂಚನೆ ನೀಡಿದ್ದಾರೆಂಬ ಮಾತುಗಳು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಅಷ್ಟೇ ಅಲ್ಲ, ರಾಜ್ಯಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಸೋಲನ್ನು ಸಹಜ ಎಂಬಂತೆ ಸ್ವೀಕರಿಸಿರುವ ಜಗದೀಶ್ ಶೆಟ್ಟರ್ ನನಗೀಗ 67, 70ನೇ ವಯಸ್ಸಿಗೆ ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ. ಅಲ್ಲಿಯವರೆಗೆ ರಾಜಕೀಯವಾಗಿ ಮೊದಲಿಗಿಂತಲೂ ಸಕ್ರೀಯನಾಗಿ ಇರುತ್ತೇನೆ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿ ಕೊಳ್ಳುತ್ತೇನೆ ಎಂಬ ಶೆಟ್ಟರ ಮಾತುಗಳೇ ಈ ವಿಷಯಕ್ಕೆ ಪುಷ್ಠಿ ನೀಡುವಂತಿದೆ. ಅಲ್ಲದೇ ವಿಧಾನಸಭೆ ಚುನಾವಣೆ ನನಗೆ ಸೆಮಿಫೈನಲ್. 2024ಕ್ಕೆ ಫೈನಲ್ ಎಂದು ಶೆಟ್ಟರ ಹೇಳಿದ್ದು ಈಗ ಚರ್ಚೆ ಆಗುತ್ತಿದೆ. ಈ ನಡುವೆ ನಾಯಕತ್ವದ ಕೊರತೆಯಿಂದ ಬಳಲುತ್ತಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್ಸಿಗೆ ಜಗದೀಶ್ ಶೆಟ್ಟರ್ ಭೀಮಬಲ ಬಂದಂತಾಗಿದೆ.
2019ರ ಲೋಕಸಭೆ ಚುನವಣೆಯಲ್ಲಿ ಒಲ್ಲದ ಮನಸ್ಸಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ವಿನಯ ಕುಲಕರ್ಣಿ ಸೋತಿದ್ದರು. ನ್ಯಾಯಾಲಯದ ಅಲೆದಾಟದಿಂದ ಹೈರಾಣಾಗಿರುವ ಅವರು ಈಗ ಮತ್ತೆ ಲೋಕಸಭೆಗೆ ಒಪ್ಪುವುದು ಕಷ್ಟ. ಮೇಲಾಗಿ ಧಾರವಾಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಪ್ರಬಲ ಲಿಂಗಾಯತ ನಾಯಕರ ಕೊರತೆಯನ್ನು ಶೆಟ್ಟರ್ ತುಂಬಿದ್ದಾರೆ. ಹಾಗಾಗಿ 2014 ರ ಲೋಕಸಭೆಗೆ ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶೆಟ್ಟರೇ ಎನ್ನುವುದು ಜನರ ವಾದವಾಗಿದೆ.












Click it and Unblock the Notifications