ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದಯನೀಯ: ಶೆಟ್ಟರ್
ಹುಬ್ಬಳ್ಳಿ, ನವೆಂಬರ್, 1: ನಮ್ಮ ಅಕ್ಕಪಕ್ಕದ ರಾಜ್ಯಗಳ ಅನ್ಯ ಭಾಷಿಕರ ವಲಸೆಯಿಂದ ಮತ್ತು ನಮ್ಮವರ ಪರಭಾಷಾ ವ್ಯಾಮೋಹದಿಂದ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಅವರು ನಗರದ ಸಿದ್ಧಾರೂಢಮಠದಲ್ಲಿ ಹು-ಧಾ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕಾಗಿದೆ, ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನು ಬಿಡಬೇಕಾಗಿದೆ ಎಂದರು. ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು, ಜಗತ್ತಿನಲ್ಲಿಯೇ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದ ಭಾಷೆಯಾಗಿದೆ ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಉದ್ಯೋಗದ ದೃಷ್ಟಿಯಿಂದ ಬೇರೆ ಬೇರೆ ಭಾಷೆಗಳನ್ನು ಕಲಿತರೆ ತಪ್ಪಲ್ಲವಾದರೂ ಮಾತೃಭಾಷೆಯಿಂದ ಮಾತ್ರ ಪರಿಪೂರ್ಣ ಶಿಕ್ಷಣ ದೊರೆಯಲು ಸಾಧ್ಯ ಎಂದರು.
ಸುದೀರ್ಘ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಬೇಕು ಎಂದು ಹೇಳುವಂತಹ ಮಟ್ಟಕ್ಕೆ ನಾವು ತಲುಪಿದ್ದು ದೊಡ್ಡ ದುರಂತ ಎಂದ ಜೋಶಿ, ಮನೆಯಲ್ಲಿನ ಮಕ್ಕಳಿಗೆ ಮಹಿಳೆಯರು ಅಪ್ಪ, ಅವ್ವ ಎಂದು ಅರ್ಥಗರ್ಭಿತ ಶಬ್ದಗಳನ್ನು ಬಳಸಲು ಹೇಳಿಕೊಡಬೇಕು ಎಂದರು.
ಶಾಸಕರಾದ ಬಸವರಾಜ ಹೊರಟ್ಟಿ, ಪ್ರಸಾದ ಅಬ್ಬಯ್ಯ , ಮೇಯರ್ ಮಂಜುಳಾ ಅಕ್ಕೂರ, ಉಪಮೇಯರ್ ಲಕ್ಷ್ಮೀ ಉಪ್ಪಾರ ಮತ್ತಿತರರು ಉಪಸ್ಥಿತರಿದ್ದರು.