ಹುಬ್ಬಳ್ಳಿಗೆ ಕಾಲಿಟ್ಟ ಕೊರೊನಾ ವೈರಸ್: ಟೆಕ್ಕಿ ಆಸ್ಪತ್ರೆಗೆ ದಾಖಲು
Recommended Video
ಹುಬ್ಬಳ್ಳಿ, ಫೆಬ್ರವರಿ 4: ಚೀನಾದಿಂದ ಬಂದ ನಗರದ ವ್ಯಕ್ತಿಯೊಬ್ಬರು ಜ್ವರ-ಕಫದಿಂದ ಬಳಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೂ ಕೊರೊನಾ ವೈರಸ್ ತಗುಲಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಕೇಶ್ವಾಪುರ ನಿವಾಸಿ ಸಂದೀಪ ಕೆಳಸಂಗದ (39) ಕಿಮ್ಸ್ಗೆ ದಾಖಲಾದವರು. ಇವರ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ಪುಣೆಯ ಎಫ್ಎಸ್ಎಲ್ ವಿಭಾಗಕ್ಕೆ ಕಳುಹಿಸಲಾಗಿದೆ.
ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ
ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಸಂದೀಪ್, ಚೀನಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಜ.18ರಂದು ಚೀನಾದಿಂದ ಮುಂಬೈಗೆ ಆಗಮಿಸಿ ನಂತರ ಹುಬ್ಬಳ್ಳಿಗೆ ಬಂದಿದ್ದಾರೆ. ತೀವ್ರ ಜ್ವರ ಹಾಗೂ ತಲೆ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂದೀಪ ಚೀನಾದಿಂದ ಹುಬ್ಬಳ್ಳಿಗೆ ಆಗಮಿಸಿ 15 ದಿನಗಳು ಕಳೆದಿವೆ.
ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವವರ ಆರೋಗ್ಯದ ಬಗ್ಗೆ ನಿಗಾ ಇಡಲಾಗುತ್ತಿದೆ. ವಿದೇಶಗಳಿಂದ ಬರುವವರ ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮುಖಕ್ಕೆ ಮಾಸ್ಕ್ ಧರಿಸಿ ಬರುತ್ತಿದ್ದಾರೆ. ಕೊರೊನಾ ಭೀತಿ ಈಗ ಉತ್ತರ ಕರ್ನಾಟಕದ ಹೆಬ್ಬಾಗಿಲಿಗೆ ಬಂದಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೂ ವೈರಸ್ ಕಾಲಿಟ್ಟಿದೆಯಾ ಅನ್ನೋ ಆತಂಕ ಜನರಲ್ಲಿ ಮನೆಮಾಡಿದೆ. ಆದರೆ ಭಯಪಡುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಕೊರೊನಾ ವೈರಸ್ ಇರುವುದೇ ಆಗಿದ್ದರೆ ಇಷ್ಟರಲ್ಲಿಯೇ ಅವರ ಆರೋಗ್ಯದಲ್ಲಿ ಏನಾದರೂ ಬದಲಾವಣೆ ಕಾಣ ಬಹುದಾಗಿತ್ತು. ಮುಂಜಾಗ್ರತಾ ಕ್ರಮ ವಾಗಿ ಎಲ್ಲ ಬಗೆಯ ತಪಾಸಣೆ ನಡೆಸಿ ತೀವ್ರ ನಿಗಾ ವಹಿಸಿದ್ದೇವೆ.
ಅವರಲ್ಲಿ ಕೊರೊನಾ ವೈರಸ್ ಇರುವ ಸಾಧ್ಯತೆ ಕಡಿಮೆ ಇದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ವರದಿಯ ನಂತರವೇ ಸ್ಪಷ್ಟನೆ ಸಿಗಲಿದೆ. ಮಂಗಳವಾರ ವರದಿ ಬರಲಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಕೊರೊನಾ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜಾಗೃತಿ ಫಲಕ ಅಳವಡಿಸಲಾಗಿದ್ದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಗಾಗಿ ಪ್ರತ್ಯೇಕ ವಾರ್ಡ್ ಕಲ್ಪಿಸಲಾಗಿದೆ.