Indira Canteen Restart: ವೇತನವಿಲ್ಲದೇ ಸಂಕಷ್ಟದಲ್ಲಿದ್ದ ಸಿಬ್ಬಂದಿಗಳಲ್ಲಿ ಆಶಾಭಾವನೆ
Indira Canteen: ಹುಬ್ಬಳ್ಳಿ, ಮೇ 25: ಹಸಿವು ಮುಕ್ತ ಕರ್ನಾಟಕದ ಕನಸನ್ನು ಕಂಡಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಆರಂಭ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ವ್ಯವಸ್ಥೆ ಕುಂಟುತ್ತಾ ಸಾಗಿತ್ತು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದಿರಾ ಕ್ಯಾಂಟೀನ್ಗೆ ಮರುಜೀವ ಬಂದಿದೆ. ಆದರೆ ವ್ಯವಸ್ಥೆ ಬದಲಾವಣೆಗೆ ಸಾಕಷ್ಟು ಸಹಾಯದ ಅವಶ್ಯಕತೆ ಇದೆ.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ವಹಿಸಿತ್ತು. ಅಲ್ಲದೆ ಸಿಬ್ಬಂದಿಗೆ ಏಳು ತಿಂಗಳಿಂದ ವೇತನವೇ ಪಾವತಿಯಾಗಿಲ್ಲ. ಇನ್ನೂ ಕಾರ್ಮಿಕ ಇಲಾಖೆಯಿಂದ 3 ಕೋಟಿ, ಪಾಲಿಕೆಯಿಂದ 1.5 ಕೋಟಿ ಬಾಕಿ ಉಳಿಸಿಕೊಂಡಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಕುಂಟುತ್ತಾ ಸಾಗಿದ್ದ ಇಂದಿರಾ ಕ್ಯಾಂಟಿನ್ ಈಗ ಪುನರ್ ಜೀವನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮರುಜೀವ ಬಂದಿದ್ದು, ಕಳೆದ ಏಳು ತಿಂಗಳಿಂದ ವೇತನವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಸಿಬ್ಬಂದಿಗೆ ಇನ್ನಾದರೂ ಸಕಾಲಕ್ಕೆ ವೇತನ ಸಿಗಬಹುದೇ ಎಂಬ ಆಶಾಭಾವನೆ ಸಿಬ್ಬಂದಿಗಳಲ್ಲಿ ಮನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ಇನ್ನಾದರೂ ವ್ಯವಸ್ಥಿತ ರೀತಿಯಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಕಾರ್ಮಿಕ ವರ್ಗದ ಹಾಗೂ ಬಡವರ ಹಸಿವು ನೀಗಿಸುತ್ತದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.
ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದ ಮೇಲೆ ಕ್ಯಾಂಟೀನ್ಗೆ ಒಕ್ಕರಿಸಿಕೊಂಡ ಗ್ರಹಣ ಈಗ ದೂರ ಸರಿಯುವ ಸಾಧ್ಯತೆ ಹೆಚ್ಚಿದೆ. ಕಳೆದ ಐದು ವರ್ಷಗಳಿಂದ ಗೊಂದಲಗಳ ನಡುವೆಯೇ ಕುಂಟುತ್ತಾ ಕಾರ್ಯ ನಿರ್ವಹಣೆ ಮಾಡಿದೆ. ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಒಟ್ಟು 09 ಇಂದಿರಾ ಕ್ಯಾಂಟಿನ್ಗಳು ಕಾರ್ಯ ನಿರ್ವಹಿಸುತ್ತಿವೆ.

ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ: ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯ
ಹುಬ್ಬಳ್ಳಿ: ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಈಗ ಅವರ ಅಧಿಕಾರ ಇದೆ. ರಾಜ್ಯದಲ್ಲಿ ಏನು ಮಾಡುತ್ತಾರೆ ನೋಡೋಣ. ಆದರೆ ಸಾರ್ವತ್ರಿಕವಾಗಿ ಜನ ಸಮುದಾಯಕ್ಕೆ ಅನ್ಯಾಯವಾದರೆ, ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಏನೇ ಅನ್ಯಾಯ ಆದರೂ ನಾವು ಹೋರಾಟ ಮಾಡಲು ಸಿದ್ಧ ಎಂದು ಹೇಳಿದರು.

ಪಠ್ಯ ಪುಸ್ತಕ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಾರೆ. ಸಾರ್ವಜನಿಕರಿಗೆ ಅನ್ಯಾಯವಾದರೇ ಕಾನೂನಾತ್ಮಕವಾಗಿ, ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಧಿಕಾರ ಬಂದಾಗ ಸ್ವೇಚ್ವಾಚಾರವಾಗಿ ಎಲ್ಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರದ ಮಾತು. ಇದು ರಿವರ್ಸ್ ಗೇರ್ ಸರ್ಕಾರ. ಅವರ ಗ್ಯಾರಂಟಿಯಲ್ಲೂ ರಿವರ್ಸ್ ಹೋಗುತ್ತಿದ್ದಾರೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರಿವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಿದೆ. ಇಷ್ಟು ಬೇಗ ಸರ್ಕಾರದಿಂದ ಸೇಡಿನ ಕ್ರಮ ಆಗ್ತಿದೆ. ರಿವರ್ಸ್ ಗೇರ್ ಸರ್ಕಾರ ಅಷ್ಟೇ ಅಲ್ಲ ಇದು ಸೇಡಿನ ಕ್ರಮ ಮಾಡುತ್ತಿದೆ ಎಂದು ಆರೋಪಿಸಿದರು.












Click it and Unblock the Notifications