ಜಯಮೃತ್ಯುಂಜಯರ ವಿರುದ್ಧ ದೂರು ದಾಖಲು, ಗಡೀಪಾರಿಗೆ ಆಗ್ರಹ
ಹುಬ್ಬಳ್ಳಿ, ನವೆಂಬರ್ 6: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಆಗ್ರಹಿಸಿ ನಡೆದಿದ್ದ ಸಮಾವೇಶದಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮಾಜ ಪ್ರತಿಭಟನೆ ನಡೆಸಿತು. ಆ ನಂತರ ಹುಬ್ಬಳ್ಳಿ ಶಹರ ಠಾಣೆಯಲ್ಲಿ ದೂರು ದಾಖಲಿಸಿತು.
ಸ್ವಾಮೀಜಿ ಇಂತಹ ಕೆಟ್ಟ ಪದವನ್ನು ಬಳಸಬಾರದು. ಸ್ವಾಮೀಜಿ ಬಾಯಿಂದ ಇಂತಹ ಕೆಟ್ಟ ಪದಗಳು ಬರುತ್ತವೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಸಂಸ್ಕಾರಹೀನ ವ್ಯಕ್ತಿಗಳು ಮಾತನಾಡುವ ಪದಗಳನ್ನು ಒಬ್ಬ ಪೀಠಾಧಿಪತಿ ಬಳಸಿದ್ದಾರೆ. ಅವರು ಕೂಡಲೇ ಪೀಠ ತ್ಯಾಗ ಮಾಡಬೇಕು. ಅಲ್ಲದೇ, ಅವರನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು ಎಂದು ಪ್ರತಿಭಟಿಸಿದರು.

ಬಸವ ತತ್ವ ಪ್ರತಿಪಾದಿಸುವವರ ಬಾಯಲ್ಲಿ ಇಂತಹ ಅಸಂಬದ್ಧ ಹೇಳಿಕೆ ಬರಬಾರದು. ಬಸವಣ್ಣನವರನ್ನು ನಂಬಿದ ಜನರು ಪೀಠಾಧಿಪತಿಗಳನ್ನು, ಸ್ವಾಮೀಜಿಯನ್ನು ಪೂಜೆ ಮಾಡುತ್ತಾಾರೆ. ಅಂಥವರಲ್ಲಿಯೇ ಬಸವಣ್ಣನವರನ್ನು ಕಾಣುತ್ತಾರೆ. ಆದರೆ ಬಸವಣ್ಣನ ಹೆಸರು ಹೇಳಿಕೊಂಡು ತಿರುಗಾಡುವವರು ಇಂತಹ ಮಾತುಗಳನ್ನು ಆಡಬಾರದು ಎಂದರು.
ವೀರಶೈವ ಲಿಂಗಾಯತ ಧರ್ಮಕ್ಕೆೆ ದೊಡ್ಡ ಇತಿಹಾಸವಿದೆ. ಅಲ್ಲದೇ ಭವ್ಯ ಪರಂಪರೆ ಹೊಂದಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಮತ್ತು ಲಿಂಗಾಯತ ಅಂತ ಬೇರೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಯಿತು. ಪಂಚಗೃಹ ಹೀರೇಮಠ ಸ್ವಾಮೀಜಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications