'ಧರ್ಮದ ಗೊಂದಲ ಹುಟ್ಟುಹಾಕಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ'
ಹುಬ್ಬಳ್ಳಿ, ಜುಲೈ 31: 'ಲಿಂಗಾಯತ ಹಾಗೂ ವೀರಶೈವ ಪ್ರತ್ಯೇಕ ಧರ್ಮದ ಬಗ್ಗೆ ಗೊಂದಲ ಹುಟ್ಟುಹಾಕಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಸಿಎಂ ವಿರುದ್ಧ ಕಿಡಿ ಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ವೈಫಲ್ಯ ಹಾಗೂ ರಾಜ್ಯದ ಸಮಸ್ಯೆಗಳನ್ನು ಮರೆ ಮಾಚಲು ಧರ್ಮದ ಗೊಂದಲ ಸೃಷ್ಟಿ ಮಾಡಿದ್ದಾರೆ. ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಮುಖ್ಯಮಂತ್ರಿ ಕೇವಲ ರಾಜಕಾರಣಕ್ಕಾಗಿ ಒಡಕು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಐದಾರು ತಿಂಗಳಲ್ಲಿ ಚುನಾವಣೆ ಬರಲಿದೆ. ಹೀಗಾಗಿ ಸಮಾಜ ಒಡೆಯುವ ಕೆಲಸಕ್ಕೆ ಮುಖ್ಯಮಂತ್ರಿ ಕೈಹಾಕಿದ್ದು, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಹಿರಿಯರು- ಸ್ವಾಮೀಜಿಗಳು ಸಮಸ್ಯೆ ಬಗೆಹರಿಸಲಿ
ಪ್ರತ್ಯೇಕ ಧರ್ಮದ ಬೇಡಿಕೆಯೊಂದಿಗೆ ಬೀದಿಯಲ್ಲಿ ನಿಂತು ಪರಸ್ಪರ ದೋಷಾರೋಪ ಮಾಡುವುದು ಸರಿಯಲ್ಲ. ಲಿಂಗಾಯತ ಅಥವಾ ವೀರಶೈವ ಸ್ವತಂತ್ರ ಧರ್ಮದ ಬಗ್ಗೆ ಸಮಾಜದ ಹಿರಿಯರು ಹಾಗೂ ಸ್ವಾಮೀಜಿಗಳು ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸಬೇಕು ಎಂದರು.
ಎಲ್ಲ ಸ್ವಾಮೀಜಿ ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಅಭಿಪ್ರಾಯ ಹಾಗೂ ಭಿನ್ನಾಭಿಪ್ರಾಯ ಕುರಿತು ಚರ್ಚೆ ಮಾಡಬೇಕು ಎಂದೂ ಜಗದೀಶ ಶೆಟ್ಟರ್ ಮನವಿ ಮಾಡಿದರು.
ಬಿ.ಬಿ. ಶಿವಪ್ಪ ನಿಧನಕ್ಕೆ ಸಂತಾಪ
ಬಿಜೆಪಿ ಹಿರಿಯ ನಾಯಕ ಬಿ.ಬಿ.ಶಿವಪ್ಪ ನಿಧನಕ್ಕೆ ಜಗದೀಶ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ. ವಿಧಾನಪರಿಷತ್ ನಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸುತ್ತಿದ್ದ ಶಿವಪ್ಪ ಅವರ ಸಾವು ರಾಜ್ಯಕ್ಕೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟ ಎಂದು ಶೆಟ್ಟರ್ ಹೇಳಿದರು.











Click it and Unblock the Notifications