ಹುಬ್ಬಳ್ಳಿಯಲ್ಲಿ ಎಪಿಎಂಸಿ ದಾಸ್ತಾನು ಮೇಲೆ CCB ರೇಡ್: 450 ಚೀಲ ಅಕ್ಕಿ, 5 ಲಕ್ಷ ರೂ. ನಗದು ಪತ್ತೆ, ಐವರ ಬಂಧನ
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ 450 ಚೀಲ ಅಕ್ಕಿ, 5 ಲಕ್ಷ ರೂ. ನಗದು ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ, ಮಾರ್ಚ್, 17: ವಾಣಿಜ್ಯ ನಗರಿ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದ 450 ಚೀಲ ಅಕ್ಕಿ, 5 ಲಕ್ಷ ರೂ. ನಗದು ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯನ್ನಾಧರಿಸಿ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸರ್ಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿ ಎಂಬಾತ 10ರಿಂದ 15 ರೂ. ಕೊಟ್ಟು ಖರೀದಿ ಮಾಡುತ್ತಿದ್ದರು. ಬಳಿಕ ಮಂಜುನಾಥ್ ಹರ್ಲಾಪುರ ಎಂಬುವವರಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಎಪಿಎಂಸಿ ದಾಸ್ತಾನು CCB ದಾಳಿ
ಈತ 35ರಿಂದ 40 ರೂಪಾಯಿಗೆ ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ಅಕ್ಕಿಯನ್ನಯ ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಎನ್ನುವ ಸ್ಫೋಟಕ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ರಮೇಶ ಕಾಂಬಳೆ, ಗೋಪಾಲ, ರಾಠೋಡ, ಎಸ್.ಎಚ್. ಸಾಳುಂಕೆ, ಬಿ.ಎನ್. ಲಂಗೋಟಿ ಎನ್.ಓ. ಜಾಧವ, ಎಸ್.ಸಿ.ಜಾಲವಾಡಗಿ, ಉಮೇಶ ದೊಡ್ಡಮನಿ, ಬಿ.ಎಫ್. ಬೆಳಗಾವಿ, ಮಾರುತಿ ಸೇರಿದಂತೆ ಮತ್ತಿತರರು ಇದ್ದರು.
ಕಲ್ಲೇಶ್ವರ ರೈಸ್ ಮಿಲ್ ಮೇಲೆ ಸಿಸಿಬಿ ದಾಳಿ
ಹಾಗೆಯೇ ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ವಲಯಾಧಿಕಾರಿಗಳು ಇತ್ತೀಚೆಗಷ್ಟೇ ದಾಳಿ ನಡೆಸಿದ್ದರು. ಈ ವೇಳೆ ರೈಸ್ ಮಿಲ್ ಬಳಿ ಕಾಡು ಪ್ರಾಣಿಗಳು, ಮೂಳೆಗಳು ಸಿಕ್ಕಿದ್ದವು. ಈ ಹಿನ್ನೆಲೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದ್ದರು.
ಮಿಲ್ ಸೀಜ್ ಮಾಡುವಂತೆ ಒತ್ತಾಯ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಕಲ್ಲೇಶ್ವರ ರೈಸ್ ಮಿಲ್ ಮಲ್ಲಿಕಾರ್ಜುನ್ ಒಡೆತನಕ್ಕೊಳಪಟ್ಟಿದೆ. ಮಿಲ್ ಅನ್ನು ಕೂಡಲೇ ಸೀಜ್ ಮಾಡಬೇಕು. ಈ ಸ್ಥಳದಲ್ಲಿ ಜಿಂಕೆ, ಕೃಷ್ಣಮೃಗ, ಎರಡು ನರಿ, ಕಾಡು ಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಸಿಕ್ಕಿವೆ ಎಂಬುದಾಗಿ ಅರಣ್ಯ ವಲಯಾಧಿಕಾರಿಗಳು ಕರೆ ಮಾಡಿದಾಗ ತಿಳಿಸಿದ್ದರು. ದರ್ಪದಿಂದ ವರ್ತಿಸುವ ಮಲ್ಲಿಕಾರ್ಜುನ್ ಅವರನ್ನು ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿಸಬೇಕು ಎಂದು ಒತ್ತಾಯಿಸಿದ್ದರು.
ಜಿಂಕೆಯ ಮೂಳೆಗಳನ್ನು ಕೋರ್ಟ್ನ ಆದೇಶದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಕಲ್ಲೇಶ್ವರ ರೈಸ್ ಮಿಲ್ನಲ್ಲಿ ಅನಧಿಕೃತವಾಗಿ ಪ್ರಾಣಿಗಳನ್ನು ಇರಿಸಿಕೊಂಡಿರುವುದಲ್ಲದೇ ಅವುಗಳ ಮೂಳೆ ಸಿಕ್ಕಿರುವುದನ್ನು ಬಿಜೆಪಿ ಖಂಡಿಸುತ್ತದೆ. ಆದ್ದರಿಂದ ಕೂಡಲೇ ಈ ಮಿಲ್ನ ಮಾಲೀಕ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ವಲಯ ಅರಣ್ಯ ಅಧಿಕಾರಿ ಮತ್ತು ಸಿಸಿಬಿ ಪೊಲೀಸರ ವಿರುದ್ಧವೂ ದಾವಣಗೆರೆಯಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಹಾಗೆಯೇ ಬಿಜೆಪಿಯವರ ತಲೆಯಲ್ಲಿ ಮೆದುಳಿಲ್ಲ ಎಂಬ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹಾಗೂ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ , ಕಲ್ಲೇಶ್ವರ ರೈಸ್ ಮಿಲ್ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಎಸ್.ಎಸ್.ಮಲ್ಲಿಕಾರ್ಜುನ್ ತಪ್ಪು ಮಾಡದಿದ್ದರೆ ಜಾಮೀನು ಪಡೆದಿದ್ಯಾಕೆ ಎಂದು ಪ್ರಶ್ನಿಸಿದ್ದರು.
ಯಶವಂತರಾವ್ ಜಾಧವ್ ಮಾತನಾಡಿ, ಬಿಜೆಪಿಯವರು ಗುಟ್ಕಾ, ಕಳ್ಳಬಟ್ಟಿ, ಹೆಂಡ ಮಾರುತ್ತಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಅಕ್ರಮಗಳ ಪಿತಾಮಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆ ಸ್ಯಾಮ್ ಸನ್ ಡಿಸ್ಲರಿ ತೆಗೆದು ಸೆಕೆಂಡ್ಸ್ ಬ್ರಾಂಡಿ ತಯಾರು ಮಾಡಿ ಕೂಲಿ ಕಾರ್ಮಿಕ ಅದನ್ನು ಕುಡಿದು ಸಾವನ್ನಪ್ಪಿದ್ದನ್ನು ಶಾಮನೂರು ಶಿವಶಂಕರಪ್ಪರು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ದೇಶದ ಇತಿಹಾಸದಲ್ಲಿ ಕುರಿ ಮತ್ತು ಆಕಳು ಸಾಕಿದ ವ್ಯಕ್ತಿಯ ಮೇಲೆ ಕೇಸ್ ಹಾಕಲಾಗಿಲ್ಲ. ವನ್ಯಜೀವಿಗಳು ಸಿಕ್ಕ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿಲ್ಲ ಎಂದಾದರೆ ಜಾಮೀನು ಪಡೆದಿದ್ದು ಯಾಕೆ ಎಂದು ಪ್ರಶ್ನಿಸಿದ್ದರು.
ಮಹಾಭಾರತದ ಕಾಲದಲ್ಲಿ ಧೃತರಾಷ್ಟ್ರ ತನ್ನ ಮಗನ ಮೇಲಿನ ಕುರುಡು ಪ್ರೇಮದಿಂದ ಕುರು ವಂಶ ನಾಶವಾಗಿದ್ದನ್ನು ಓದಿ ತಿಳಿದುಕೊಂಡಿದ್ದೇವೆ ಎಂದಿದ್ದರು. ಶಾಮನೂರು ಶಿವಶಂಕರಪ್ಪರು ಕುರುಡು ಪ್ರೇಮ ಬಿಟ್ಟು ಮಗ ನಾಶ ಆಗುವುದನ್ನು ತಡೆಯಲಿ. ಶಿವಶಂಕರಪ್ಪ ಅವರು ಹಿರಿಯರು. ಅವರಿಗೆ ಗೌರವ ನೀಡುತ್ತೇವೆ. ಆದರೆ ಅವರು ಆಡುವ ಮಾತುಗಳಿಗೆ ಗೌರವ ಕೊಡುವುದಿಲ್ಲ. ಸತ್ಯ ಹೇಳಿ ಎಂದು ಹೇಳಿದ್ದರು.











Click it and Unblock the Notifications