ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬಂದರೆ ಕಾನೂನು ಕ್ರಮ-ಸಿಎಂ ಬೊಮ್ಮಾಯಿ ಎಚ್ಚರಿಕೆ
ಹುಬ್ಬಳ್ಳಿ, ಡಿಸೆಂಬರ್ 5: ಮಹಾರಾಷ್ಟ್ರ- ಕರ್ನಾಟಕದ ನಡುವೆ ಈಗ ಮತ್ತೆ ಗಡಿ ವಿವಾದ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರುತ್ತೇವೆ ಎಂದು ಹೇಳಿರುವ ಸಂದರ್ಭದಲ್ಲಿ, ನಮ್ಮ ಮುಖ್ಯ ಕಾರ್ಯದರ್ಶಿಗಳು, ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ಪತ್ರವನ್ನು ಬರೆದು, ಇತಂಹ ಸಂದರ್ಭದಲ್ಲಿ ಬರುವುದು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇಲ್ಲಿ ಮತ್ತೆ ಗಡಿ ವಿವಾದ ಆರಂಭವಾಗಿದೆ. ಹೀಗಾಗಿ ಬರುವುದು ಉಚಿತವಲ್ಲ ಎಂದು ಈಗಾಗಲೇ ತಿಳಿಸಲಾಗಿದೆ ಎಂದರು.
ಈ ಸೂಚನೆ ನೀಡಿದ್ದರೂ, ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಅದು ಸರಿಯಾದ ಕ್ರಮ ಅಲ್ಲ. ಮಹಾರಾಷ್ಟ್ರ- ಕರ್ನಾಟಕದ ಜನರ ನಡುವೆ ಸಾಮರಸ್ಯ ಇದೆ. ಜೊತೆಗೆ ಗಡಿ ವಿವಾದ ಕೂಡ ಇದೆ. ಈ ಗಡಿ ವಿವಾದ ನಮ್ಮ ಕರ್ನಾಟಕದ ಪ್ರಕಾರ, ಮುಗಿದು ಹೋಗಿರುವ ಅಧ್ಯಾಯ. ಆದರೆ ಮಹಾರಾಷ್ಟ್ರ ಪದೇ ಪದೇ ಖ್ಯಾತೆ ತೆಗೆದು, ಈಗ ಸುಪ್ರೀಂ ಕೋರ್ಟ್ ಮನವಿ ಹೋಗಿದ್ದಾರೆ. ಇಂತಹ ವೇಳೆಯಲ್ಲಿ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಆಗಮಿಸಿದರೆ ಜನರಲ್ಲಿ ಭಾವನೆಯನ್ನು ಕೆರಳಿಸುವಂತಹ ಕೆಲಸ ಮಾಡಿದಂತಾಗುತ್ತದೆ. ಹೀಗಾಗಿ ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬರಬಾರದು ಎಂದು ನಾವು ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಮತ್ತೊಮ್ಮೆ ನಾನು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇನ್ನು ಒಂದು ವೇಳೆ ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬರುವ ಸಾಹಸ ಮಾಡಿದರೆ, ಈಗಾಗಲೇ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಸರ್ಕಾರ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ
ಬೆಳಗಾವಿ: ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರುವುದನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರರು, ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರಬಾರದೆಂದು ಆಗ್ರಹಿಸಿದರು. ಅಲ್ಲದೇ, ಕನ್ನಡ ಧ್ವಜವನ್ನು ಪ್ರದರ್ಶಿಸಿದ ಕನ್ನಡದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಮರಾಠಿ ವಿದ್ಯಾರ್ಥಿಗಳ ಮೇಲೆ ಕ್ರಮ ತೆಗೆದುಕೊಳ್ಳದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಅಂತರ್ ಕಾಲೇಜು ಉತ್ಸವದಲ್ಲಿ ನಡೆದ ಘರ್ಷಣೆಯು ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿಯಿತು. ಕಳೆದ ಎರಡು ವಾರಗಳಿಂದ ಉಭಯ ರಾಜ್ಯಗಳ ಗಡಿ ವಿವಾದ ಹೆಚ್ಚು ಚರ್ಚೆ ಆಗುತ್ತಿದೆ. ವಿದ್ಯಾರ್ಥಿಯೊಬ್ಬ ಕನ್ನಡ ಅಥವಾ ಕರ್ನಾಟಕದ ಸಾಂಪ್ರದಾಯಿಕ ಧ್ವಜವನ್ನು ಪ್ರದರ್ಶಿಸಿದ ಎಂಬುದಕ್ಕಾಗಿ ಈ ಘರ್ಷಣೆ ಪ್ರಾರಂಭವಾಯಿತು. ಇದರಿಂದ ಕೋಪಗೊಂಡ ಮರಾಠಿ ವಿದ್ಯಾರ್ಥಿಗಳು ಧ್ವಜಾರೋಹಣ ಮಾಡಿದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದರು. ಈ ವೀಡಿಯೊ ಕಳೆದ ಎರಡು ದಿನಗಳಲ್ಲಿ ವೈರಲ್ ಆಗಿದ್ದು, ಇದರಿಂದ ಮತ್ತೆ ಗಡಿ ವಿವಾದ ಹೆಚ್ಚಾಗಿದೆ.












Click it and Unblock the Notifications