ಮಹದಾಯಿ ಜಲ ವಿವಾದದ ಬಗ್ಗೆ ಹುಬ್ಬಳ್ಳಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?, ಇಲ್ಲಿದೆ ವಿವರ
ಮಹದಾಯಿ ಜಲ ವಿವಾದದ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಕ್ರಿಯೆ ಹೇಗಿತ್ತು ಅನ್ನುವುದನ್ನು ನೀವೆ ನೋಡಿ.
ಹುಬ್ಬಳ್ಳಿ, ಜನವರಿ, 31: ಮಹದಾಯಿ ಯೋಜನೆ ಅನುಷ್ಠಾನ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನಮಗೆ ಗೊತ್ತಿಲ್ಲ. ಈಗಾಗಲೇ ಕಾನೂನಾತ್ಮಕ ಹೋರಾಟವಾಗಿ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಟ್ರಿಮಿನಲ್ ರಚನೆಯಾಗಿ ಅದರ ಪರಿಶೀಲನೆ ಸಹ ಆಗಿದೆ. ಅಲ್ಲದೇ ತೀರ್ಪು ಕೂಡ ನೀಡಿದೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೆಂದ್ರ ಸರ್ಕಾರದಿಂದ 2016ರಲ್ಲಿ ಡಿಪಿಆರ್ ನೀಡಲಾಗಿತ್ತು. ಸದ್ಯ ಡಿಪಿಆರ್ ಸಹ ಅನುನತಿ ನೀಡಿದೆ. ಕಾನೂನು ಹೋರಾಟವಾಗಿಯೇ ಇದೆಲ್ಲ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹದಾಯಿಯ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಅಲ್ಲದೇ ಈಗಾಗಲೇ ಕಾನೂನಾತ್ಮಕ ಹೋರಾಟದ ರೂಪುರೇಷೆಗಳನ್ನು ಪರಿಶೀಲನೆ ಮಾಡಿಯೇ ನಿರ್ಧಾರವನ್ನು ಕೊಟ್ಟಿದೆ ಎಂದರು.
ಧಾರವಾಡದಲ್ಲಿ ಚಿತ್ರಸಂತೆ: ಕಲಾವಿದರಿಗೆ ಅವಳಿ ನಗರದ ಕಲಾಸಕ್ತರ ಶಬ್ಬಾಶ್ ಗಿರಿ
ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲ್ಲ
ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಎಚ್.ವಿಶ್ವನಾಥ್ ಅವರ ಹೇಳಿಕೆಗೆ ನಾನು ಯಾವತ್ತೂ ಪ್ರತಿಕ್ರಿಯಿಸಿಲ್ಲ. ಅವರು ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಇನ್ನು ಸಿಎಂ ಹಾಗೂ ಮಾಜಿ ಸಿಎಂ ಪುಡಿರೌಡಿಗಳಂತೆ ವರ್ತಿಸುತ್ತಾರೆ ಎನ್ನುವ ಎಚ್.ವಿಶ್ವನಾಥ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಿನ ವಿಷಯ ಕೈಗೆತ್ತಿಕೊಂಡರು.
ರಾಜ್ಯ ಪ್ರವಾಸ ಮಾಡಲಿರುವ ಪ್ರಧಾನಿ
ಇನ್ನು ಫೆಬ್ರವರಿ 6 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಸೇರಿದಂತೆ ಬೆಂಗಳೂರಿನ ಹಲವಾರು ಕಾರ್ಯಕ್ರಮಗಳಲ್ಲಿ ಮೋದಿಯವರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನಡೆದರು.
ಸಿದ್ದರಾಮಯ್ಯ, ಡಿ.ಕೆ.ಶಿ ವಿರುದ್ಧ ವಾಗ್ದಾಳಿ
ಇನ್ನು ಕಾಂಗ್ರೆಸ್ ನಾಯಕರು ನಿತ್ಯ ಕಿತ್ತಾಟದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯನನ್ನು ಕಂಡರೇ ಡಿ.ಕೆ. ಶಿವಕುಮಾರ್ಗೆ ಆಗಲ್ಲ, ಡಿ.ಕೆ. ಶಿವಕುಮಾರ್ನನ್ನು ಕಂಡರೇ ಸಿದ್ದರಾಮಯ್ಯಗೆ ಆಗಲ್ಲ. ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರಿಂದ ಜನರಿಗೆ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹುಬ್ಬಳ್ಳಿಯಲ್ಲಿ ಇತ್ತೀಚೆಗಷ್ಟೇ ಹೇಳಿದ್ದರು.
ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ್ದ ಅವರು, ಚುನಾವಣೆ ನಂತರವೂ ಜಗಳ ಮುಂದುವರೆಯಲಿದೆ. ಜಗಳ ಆಡುವವರು ಜನರಿಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವೇ? ಹೀಗಾಗಿ ಬಿಜೆಪಿಯೇ ಒಳ್ಳೆಯ ಆಯ್ಕೆಯಾಗಿದೆ ಎಂದು ಜನರು ನಂಬಿದ್ದಾರೆ. ಕಾಂಗ್ರೆಸ್ ನಾಯಕರು ಫ್ರೇಷ್ಟೇಷನ್ನಲ್ಲಿದ್ದಾರೆ. ಹೀಗಾಗಿ ನಮ್ಮ ನಾಯಕರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆ
ಕಾಂಗ್ರೆಸ್ ಸುಳ್ಳು ಭರವಸೆಗಳ ಗೋಪುರ ಕಟ್ಟಿದೆ. ಸದ್ಯ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಈ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲಾಗುತ್ತಿದೆ. ಅಮಿತ್ ಶಾ ಅವರೂ ಧಾರವಾಡ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಕರ್ನಾಟಕದಲ್ಲಿ 4 ಕೋಟಿ ಜನರಿಗೆ ಪಡಿತರ ಕೊಡುವ ಕಾರ್ಯ ನಡೆದಿದೆ. ಆದರೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳು ಬಿಜೆಪಿಯಿಂದ ನಡೆದಿವೆ. ಕಾಂಗ್ರೆಸ್ ಸುಳ್ಳು ಭರವಸೆಗಳ ಸೌಧ ಕಟ್ಟುತ್ತಿದೆ. ಕರ್ನಾಟಕದ ಜನತೆಯನ್ನು ಭ್ರಮಾ ಲೋಕದಲ್ಲಿ ತೇಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.