ಸಚಿವರ ಸಮ್ಮುಖದಲ್ಲೇ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಯಡವಟ್ಟು
ಹುಬ್ಬಳ್ಳಿ, ಅಕ್ಟೋಬರ್ 16 : ಬಡವರ ಪಾಲಿನ ಸಂಜೀವಿನಿ ಎಂದು ಕರೆಸಿಕೊಳ್ಳುವ ಕಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿ ಇರುತ್ತದೆ. ಇವತ್ತು ಸಹ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಭೇಟಿಯ ಸಮಯದಲ್ಲಿಯೇ ಕಿಮ್ಸ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಮ್ಮ ಕರಳ ಕುಡಿಯನ್ನು ಉಳಿಸಿಕೊಳ್ಳಲು ತಂದೆ-ತಾಯಿ ಹರಸಾಹಸ ಪಟ್ಟಿದ್ದಾರೆ.

ಕಿಮ್ಸ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಾರ್ಡ್ ನಲ್ಲಿ ಕಳೆದ 4 ದಿನಗಳಿಂದ ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿಗಳಾದ ನಿಂಗಪ್ಪ ಹಾಗೂ ಸಂಗೀತಾ ಎನ್ನುವ ದಂಪತಿಗಳ ಮಗು ಗೌತಮಿ ಮಗು ಚಿಕಿತ್ಸೆ ಪಡೆಯುತ್ತಿದೆ. ಮೆದುಳು ಜ್ವರದಿಂದ ಬಳುತ್ತಿರುವ, ಗೌತಮಿಗೆ ಇಂದು ಸ್ಕ್ಯಾನಿಂಗ್ ಮಾಡಿಸಬೇಕಿತ್ತು.
ಮಗುವನ್ನು ಸ್ಕ್ಯಾನಿಂಗ್ಗೆ ಕರೆದುಕೊಂಡು ಹೋಗುವಾಗ ಬೃಹತ್ ಆಕಾರದ ಸಿಲಿಂಡರ್ ಅನ್ನು ತಂದೆ ಕಷ್ಟಪಟ್ಟು ತಳ್ಳಿಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ಅಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳು ಯಾವುದೇ ಸಹಾಯ ಮಾಡಿಲ್ಲ. ಮಗಳನ್ನು ಉಳಿಸಿಕೊಳ್ಳುವ ಹಂಬಲದಿಂದ ತಂದೆ-ತಾಯಿ ಆಕ್ಸಿಜನ್ ಸಿಲಿಂಡರ್ ತಳ್ಳಿಕೊಂಡು ಹೋಗಿದ್ದಾರೆ.

ಈ ಘಟನೆ ನಡೆಯುವಾಗ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದರು. ಸಚಿವರು ಆಸ್ಪತ್ರೆಯಲ್ಲಿದ್ದರು ಸಿಬ್ಬಂದಿಗಳು ಮಗುವನ್ನು ಸ್ಕ್ಯಾನ್ ಮಾಡಿಸಿಕೊಳ್ಳಲು ಕರೆದುಕೊಂಡು ಹೋಗಿಲ್ಲ. ಬದಲಾಗಿ ಮಗುವಿನ ತಂದೆ-ತಾಯಿ ಹಾಗೂ ಸಂಬಂಧಿಕರು ಸಿಲಿಂಡರ್ ಸಮೇತ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.












Click it and Unblock the Notifications