ಹುಬ್ಬಳ್ಳಿಯಲ್ಲಿ ಧೂಳೋ ಧೂಳು; ರಸ್ತೆ ಕಥೆ ಕೇಳೋರು ಯಾರು?
ಹುಬ್ಬಳ್ಳಿ, ನವೆಂಬರ್ 7: ಮಿತಿ ಮೀರಿದ ಹೊಗೆ ಮತ್ತು ಧೂಳಿನಿಂದಾಗಿ "ವಾಯು ಮಾಲಿನ್ಯ"ಕ್ಕೆ ದೇಶದ ರಾಜಧಾನಿ ದೆಹಲಿ ಸುದ್ದಿಯಾಗುತ್ತಿದೆ. ಹುಬ್ಬಳ್ಳಿಯೂ ಈಗ ಅದೇ ಹಾದಿಯಲ್ಲಿರುವಂತಿದೆ. ರಾಜ್ಯದ ಎರಡನೇ ದೊಡ್ಡ ನಗರ ಎಂದು ಕರೆಸಿಕೊಳ್ಳುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಧೂಳು, ಹೊಗೆ ವಿಪರೀತದ ಮಟ್ಟ ತಲುಪುತ್ತಿದೆ.
ಉತ್ತರ ಕರ್ನಾಟಕ ಹಾಗೂ ಅಖಂಡ ಕರ್ನಾಟದಿಂದ ಪ್ರತಿನಿತ್ಯ ಲಕ್ಷಾಂತರ ಜನರು ವ್ಯಾಪಾರಕ್ಕೆ ಬರುತ್ತಾರೆ. ವ್ಯಾಪಾರದ ಉದ್ದೇಶದಿಂದಲೇ ವಿಮಾನಯಾನ, ಹೆಚ್ಚಿನ ರೈಲು ಸೌಕರ್ಯ ಹಾಗೂ ಸಾರಿಗೆ ಬಸ್ ವ್ಯವಸ್ಥೆ ಕೂಡ ಇದೆ. ಆದರೆ ಈ ನಗರಕ್ಕೆ ಬಂದವರು ಧೂಳಿನ ಸ್ನಾನ ಮಾಡಲೇಬೇಕಿದೆ.

ಇಲ್ಲಿ ಧೂಳಿನ ಸ್ನಾನ ಗ್ಯಾರಂಟಿ
ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್, ಹಳೇ ಬಸ್ ನಿಲ್ದಾಣ, ನಿಲಿಜನ್ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಹೀಗಾಗಿ ಈ ರಸ್ತೆಯಲ್ಲಿ ವಾಹನಗಳು ಹೋದರೆ ಸಾಕು ರಸ್ತೆ ಉದ್ದಕ್ಕೂ ಧೂಳು ತುಂಬಿಕೊಳ್ಳುತ್ತದೆ. ಹೀಗಾಗಿ ಇಲ್ಲಿ ವಾಹನದಲ್ಲಿ ಓಡಾಡುವವರಿಗೂ, ರಸ್ತೆಯಲ್ಲಿ ಓಡಾಡುವವರಿಗೂ ಧೂಳಿನ ಸ್ನಾನ ಗ್ಯಾರಂಟಿ

ಸಮಾಜ ಸೇವಕರಿಂದ ಮಾಸ್ಕ್ ವಿತರಣೆ
ನಗರದ ಸಮಾಜ ಸೇವಕರು, ಆರೋಗ್ಯ ರಕ್ಷಿಸಿಕೊಳ್ಳಲೆಂದು ಜನರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್ ಸೇರಿದಂತೆ ಹಲವು ಕಡೆ ಉಚಿತವಾಗಿ ಮಾಸ್ಕ್ ವಿತರಣೆ ಸಾಗಿದೆ. ಹಲವು ಸಂಘ ಸಂಸ್ಥೆಗಳು ಸಹ ನಗರದಲ್ಲಿ ಮಾಸ್ಕ್ ವಿತರಣೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ

ಸ್ಮಾರ್ಟ್ ಸಿಟಿ ಕಥೆ ಇದೇನಾ?
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿದೆ. ಆದರೆ ಈ ನಗರದಲ್ಲಿ ಏನೂ ಸ್ಮಾರ್ಟ್ ಆಗಿಲ್ಲ. ಸರಿಯಾದ ರಸ್ತೆ ಮಾಡದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಬೇರೆ ಅಭಿವೃದ್ಧಿ ಕೆಲಸ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ ನಗರದ ಜನತೆ. ಪಾಲಿಕೆ ವಿರುದ್ಧ ಸ್ಥಳೀಯ ಸಂಘ ಸಂಸ್ಥೆಗಳು ರಸ್ತೆ ದುರಸ್ತಿ ಮಾಡಿಸುವಂತೆ ಒತ್ತಾಯ ಮಾಡಿದರೂ ಪ್ರಯೋಜನವಾಗಿಲ್ಲ.

ನೋಡಿಯೂ ನೋಡದಂತಿರುವ ಪ್ರತಿನಿಧಿಗಳು
ಮಾಜಿ ಸಿಎಂ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಕರ್ನಾಟಕ ಸರ್ಕಾರದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡಾ ನಗರದಲ್ಲಿ ವಾಸವಾಗಿದ್ದಾರೆ. ಆದರೆ ನಗರ ಇಷ್ಟೊಂದು ದೂಳುಮಯವಾಗಿದ್ದೂ ನೋಡಿಯೂ ನೋಡದ ರೀತಿಯಲ್ಲಿ ಈ ಭಾಗದ ನಾಯಕರು ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಜನರ ಆರೋಪ.












Click it and Unblock the Notifications