ಹೆಸ್ಕಾಂನಲ್ಲಿ 86 ಕೋಟಿ ರೂ. ಭ್ರಷ್ಟಾಚಾರ; 20 ಸಿಬ್ಬಂದಿ ಅಮಾನತು ಮಾಡಿದ ಇಂಧನ ಸಚಿವ
ಹುಬ್ಬಳ್ಳಿ, ಜನವರಿ 27: 86 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ನ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಒಟ್ಟು 20 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಏಳು ಮಂದಿಯನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ವಿಭಾಗದ ಹೆಸ್ಕಾಂ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು 2021ರ ಆಗಸ್ಟ್ನಲ್ಲಿ ಖಾಸಗಿ ದೂರು ದಾಖಲಾಗಿದ್ದು, ದೂರಿನ ಪ್ರಕಾರ ಕಾಂಪ್ಲೆಕ್ಸ್ ನಿರ್ಮಾಣ, ಗಂಗಾ ಕಲ್ಯಾಣ, ನೀರು ಸರಬರಾಜು, ಓಟಿಎಂ, ಪ್ರಧಾನಮಂತ್ರಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ವಿಭಾಗದಲ್ಲಿ ಅನುಷ್ಠಾನಗೊಂಡಿಲ್ಲದೇ, ಬಿಲ್ಗಳನ್ನು ತೆರವುಗೊಳಿಸಿ ಹಣ ಲೂಟಿ ಮಾಡಲಾಗಿದೆ.
ಅಕ್ರಮಗಳ ಬಗ್ಗೆ ದೂರು ಸ್ವೀಕರಿಸಿದ ತಕ್ಷಣ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಡಿ., ಪ್ರಕರಣದ ಪರಿಶೀಲನೆಗಾಗಿ ಮುಖ್ಯ ಲೆಕ್ಕಪರಿಶೋಧಕರು, ಲೆಕ್ಕಪರಿಶೋಧಕರು, ಎಂಜಿನಿಯರ್ಗಳು ಮತ್ತು ಇತರ ಉನ್ನತ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದರು.

"ಆಗಸ್ಟ್ 2018ರಿಂದ ಆಗಸ್ಟ್ 2021ರವರೆಗೆ ಪರಿಶೀಲನೆ ಮತ್ತು ಲೆಕ್ಕಪರಿಶೋಧನೆ ಮಾಡಲು ನಾನು ತಂಡಕ್ಕೆ ನಿರ್ದೇಶನ ನೀಡಿದ್ದೇನೆ. ಲೆಕ್ಕಪರಿಶೋಧನೆಯ ಸಮಯದಲ್ಲಿ 86 ಕೋಟಿ ರೂಪಾಯಿಗಳನ್ನು ಪೂರ್ಣಗೊಳಿಸದ ಮತ್ತು ಕಾಮಗಾರಿಗಳನ್ನು ತೆಗೆದುಕೊಳ್ಳದೇ ಬಿಲ್ ಮಾಡಲಾಗಿದೆ ಎಂದು ಕಂಡುಬಂದಿದೆ,'' ಎಂದು ಭಾರತಿ ಡಿ. ಹೇಳಿದರು.
ತನಿಖಾ ತಂಡವು ಹೆಸ್ಕಾಂ ಕಚೇರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಅದೇ ವರದಿಯನ್ನು ಇತ್ತೀಚೆಗೆ ಇಂಧನ ಇಲಾಖೆಗೆ ಕಳುಹಿಸಲಾಗಿದೆ. ಒಬ್ಬ ಪ್ರಭಾರಿ ಕಾರ್ಯಪಾಲಕ ಇಂಜಿನಿಯರ್, ನಾಲ್ವರು ಸಹಾಯಕ ಕಾರ್ಯಪಾಲಕ ಅಭಿಯಂತರರು, 12 ಸೆಕ್ಷನ್ ಅಧಿಕಾರಿಗಳು, ಲೆಕ್ಕಾಧಿಕಾರಿಗಳು ಸೇರಿ ಕೆಲವು ಸಿಬ್ಬಂದಿ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಏಳು ಮಂದಿ ಸಿಬ್ಬಂದಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವರದಿಯನ್ನು ಇಂಧನ ಸಚಿವಾಲಯಕ್ಕೆ ಕಳುಹಿಸುತ್ತಿದ್ದಂತೆ, ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ಎಲ್ಲಾ 20 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ ಮತ್ತು ಇತರ ಏಳು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ಕಾಮಗಾರಿ ತೆಗೆದುಕೊಳ್ಳದೇ 29 ಕೋಟಿ ರೂ., ಅರ್ಧಕ್ಕೆ ನಿಂತ ಕಾಮಗಾರಿ, ಡಬಲ್ ಕಾಮಗಾರಿ ಹಾಗೂ ಇತರೆ ರೀತಿಯ ಅಕ್ರಮಗಳಲ್ಲಿ 57 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ತಿಳಿದುಬಂದಿದೆ.
ಸಚಿವ ಸುನೀಲ್ ಕುಮಾರ್ ಮಾತನಾಡಿ, ಇಂಧನ ಸಚಿವಾಲಯವು ಎಲ್ಲಿಯೂ ಇಂತಹ ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಇಲಾಖೆಯಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸುತ್ತಿದ್ದು, ಉತ್ತಮ ಸಿಬ್ಬಂದಿ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ನೆರವಿನಿಂದ ಭ್ರಷ್ಟಾಚಾರಕ್ಕೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.












Click it and Unblock the Notifications