ಸಿಂಗಪುರಕ್ಕೆ ಹಾರಿದ ಹುಬ್ಬಳ್ಳಿ-ಧಾರವಾಡ ಪಾಲಿಕೆಯ 6 ಪೌರಕಾರ್ಮಿಕರು
ಹುಬ್ಬಳ್ಳಿ, ಜುಲೈ 04 : ಸಿಂಗಪುರಕ್ಕೆ ಪ್ರಯಾಣ ಬೆಳೆಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆರು ಪೌರಕಾರ್ಮಿಕರನ್ನು ನಗರ ಪಾಲಿಕೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಟ್ಟರು.
ಸಿಂಗಪುರಕ್ಕೆ ಹೊರಟ ಮೊದಲ ಪೌರ ಕಾರ್ಮಿಕ ತಂಡ
ವೆಂಕಟೇಶ ಟಗರಗುಂಟಿ, ದೊಡ್ಡಪ್ಪ ಗಬ್ಬೂರ, ಕೊಂಡಯ್ಯ ಆಲಮೂರು, ಪರಶುರಾಮ ಬಂಡಮಿಂದಪಲ್ಲಿ, ನಲ್ಲಪ್ಪ ನೀಲಗಿರಿ, ಕರಬಸಪ್ಪ ಮಾದರ ಅವರು ಮೊದಲ ಹಂತದಲ್ಲಿ ವಿದೇಶಕ್ಕೆ ಮಂಗಳವಾರ ಬೆಂಗಳೂರಿನಿಂದ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದರು
ಅಲ್ಲಿನ ಸ್ವಚ್ಛತಾ ಪ್ರಕ್ರಿಯೆ, ಕಸ ವಿಲೇವಾರಿ ವ್ಯವಸ್ಥೆ, ಒಳಚರಂಡಿ ಸ್ವಚ್ಛತಾ ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಪೌರಕಾರ್ಮಿಕರು ಸಿಂಗಪುರಕ್ಕೆ ಹೊರಟರು. ವಿಮಾನ ಪ್ರಯಾಣದ ವೆಚ್ಚ ಹಾಗೂ ಕಾರ್ಮಿಕರ ಸಂಪೂರ್ಣ ಖರ್ಚು ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
ಜುಲೈ 4ರಂದು ಬೆಂಗಳೂರಿನಿಂದ ವಿಮಾನದ ಮೂಲಕ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದು, ಜುಲೈ 8ಕ್ಕೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
ರಾಜ್ಯದಾದ್ಯಂತ 1 ಸಾವಿರ ಪೌರಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ 40 ಜನರ ತಂಡದ ಪೈಕಿ 3 ಮಹಿಳಾ ಕಾರ್ಮಿಕರು ತಂಡದಲ್ಲಿದ್ದಾರೆ.
'ನಾವ್ಯಾರೂ ವಿಮಾನದಲ್ಲಿ ಪ್ರಯಾಣಿಸುವುದಿರಲಿ ಅದರ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿರಲಿಲ್ಲ. ನಮ್ಮ ತಂದೆ-ತಾಯಿ ಮಾಡಿದ ಪುಣ್ಯದಿಂದ ನನಗೆ ವಿಮಾನದಲ್ಲಿ ಪ್ರಯಾಣಿಸುವ ಅದೃಷ್ಟ ಬಂದಿದೆ. ಸಿಂಗಪುರದಲ್ಲಿನ ಕಾರ್ಮಿಕರ ಬಗ್ಗೆ ತಿಳಿದುಕೊಂಡು ಬರುತ್ತೇನೆ'ಎಂದು ಕರಬಸಪ್ಪ ಮಾದರ ಹರ್ಷ ವ್ಯಕ್ತಪಡಿಸಿದರು.