ಭೀಕರ ಮಳೆಗೆ ತತ್ತರಿಸಿದ ಹುಬ್ಬಳ್ಳಿ, 58 ಮನೆಗಳು ನೆಲಸಮ
ಹುಬ್ಬಳ್ಳಿ, ಅಕ್ಟೋಬರ್ 13: ಹುಬ್ಬಳ್ಳಿ - ಧಾರವಾಡ ನಗರ ಸೇರಿದಂತೆ ತಾಲೂಕಿನ ಕೆಲವೆಡೆ ನಿನ್ನೆ ಸಂಜೆಯಿಂದ ತಡ ರಾತ್ರಿವರೆಗೆ ಎಡೆ ಬಿಡದೇ ಸುರಿದ ಮಳೆ ಹಲವು ಅವಾಂತರಗಳನ್ನ ಸೃಷ್ಟಿಸಿದೆ. ತಾಲೂಕಿನಲ್ಲಿ 58 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಬಹುತೇಕ ಕಡೆ ಮಳೆಯ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಅಂಗಡಿ ಮಾಲೀಕರು ಪರದಾಡುವಂತಾಯಿತು. ಇನ್ನು ಸ್ಥಳೀಯ ದಾಜೀಬಾನ್ ಪೇಟೆ, ಕೊಪ್ಪಿಕರ್ ರಸ್ತೆ, ಸಿಬಿಟಿ ಸೇರಿದಂತೆ ಹಲವು ಕಡೆ ರಸ್ತೆಗಳಲ್ಲಿ ಮೊಣಕಾಲುವರೆಗೂ ನೀರು ಹರಿದಿತ್ತು.
ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಬೈಕ್ ಗಳು ಅರ್ಧ ಮುಳುಗಿ ಹೋಗಿದ್ದವು. ಇದಲ್ಲದೆ ಮಂಟೂರ ರಸ್ತೆಯಲ್ಲಿ ಕೆಲ ಮನೆಗಳಿಗೆ ನೀರು ನುಗಿದ್ದು ಜನ ಪರದಾಡುವಂತಾಗಿದೆ.
ಹಳೆ ಹುಬ್ಬಳ್ಳಿ ನ್ಯಾಷನಲ್ ಮಾರ್ಕೆಟ್ ಬಳಿ ರಸ್ತೆ ಮೇಲೆ ಮಳೆ ನೀರು ಹರಿದು ಅರ್ಧದಷ್ಠು ವಾಹನಗಳು ಮುಳುಗಿದ್ದವು. ಇನ್ನು ಹೊರವಲಯದ ಬಿಡ್ನಾಳದಲ್ಲೂ ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿದ ನೀರಿಗೆ ಜನಜೀವನ ಅಸ್ಯವ್ಯಸ್ತವಾಗಿತ್ತು.
ಇನ್ನು ಸಂಜೆ ಸುರಿದ ಮಳೆಯಿಂದ ಹುಬ್ಬಳ್ಳಿಯಲ್ಲಿ ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ರಾತ್ರಿಯೆಲ್ಲಾ ಜನ ಕತ್ತಲಲ್ಲಿ ದಿನ ಕಳೆದಿದ್ದರು.
ಅಲ್ಲದೆ ಭಾರೀ ಮಳೆಗೆ ಮಂಟೂರ, ಬಂಡಿವಾಡ, ನಾರಾಯಣಪುರ, ನಲವಡಿ ಹಾಗೂ ಶಿರಗುಪ್ಪಿ ಗ್ರಾಮಗಳಲ್ಲಿ 58 ಕ್ಕೂ ಹೆಚ್ಚಿನ ಮನೆಗಳು ನೆಲಸಮಗೊಂಡಿವೆ. ಇದರಿಂದ ಬಡವರು ಬೀದಿಗೆ ಬಿದ್ದಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಗಂಜಿ ಕೇಂದ್ರದ ಜೊತೆ ತಾತ್ಕಾಲಿಕವಾಗಿ ವಾಸಿಸಲಿಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಆದರೆ ಇದುವರಿಗೆ ಕಂದಾಯ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ. ಇದರಿಂದ ಸಂತ್ರಸ್ತರು ಕಂಗೆಟ್ಟಿದ್ದಾರೆ.