ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 170 ಪೊಲೀಸ್ ಸಿಬ್ಬಂದಿ ವರ್ಗಾವಣೆ, ಏಕೆ?, ಇಲ್ಲಿದೆ ವಿವರ
ಹುಬ್ಬಳ್ಳಿ, ಜೂನ್, 17: ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ 170 ಪೊಲೀಸ್ ಸಿಬ್ಬಂದಿ ವರ್ಗಾವಣೆ ಮಾಡಿ ಪೊಲೀಸ್ ಕಮೀಷನರೇಟ್ ಆದೇಶ ಹೊರಡಿಸಿದೆ. ಈ ಹೆಚ್ಚು ವರ್ಷ ಇಲ್ಲೇ ನೆಯೂರಿದ್ದವರನ್ನು ಪೊಲೀಸ್ ಆಯುಕ್ತರ ನೇತೃತ್ವದ ತಂಡ ಈಗ ವರ್ಗಾವಣೆ ಮಾಡಿದೆ.
ಹೌದು.. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ 170 ಸಿಬ್ಬಂದಿ ಆಂತರಿಕ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಕಮಿಷನರ್ ರಮಣ್ ಗುಪ್ತಾ, ಡಿಸಿಪಿ ರಾಜೀವ್ ಎಂ. ಮತ್ತು ಗೋಪಾಲ ಬ್ಯಾಕೋಡ ಸಮ್ಮುಖದಲ್ಲಿ ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, 10 ಮಂದಿ ಎಎಸ್ಐ ಸೇರಿ 262 ಸಿಬ್ಬಂದಿ ಹೆಸರನ್ನು ವರ್ಗಾವಣೆ ಪಟ್ಟಿಯಲ್ಲಿ ನಮೂದಿಸಲಾಗಿತ್ತು.

ಏಕ ಕಾಲಕ್ಕೆ ಎಲ್ಲಾ ಸಿಬ್ಬಂದಿಯ ವರ್ಗಾವಣೆ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಲೆಕ್ಕಾಚಾರದ ಹಿನ್ನೆಲೆ ಸದ್ಯಕ್ಕೆ 5 ವರ್ಷ 9 ತಿಂಗಳು ಮಾತ್ರ ಕರ್ತವ್ಯ ನಿರ್ವಹಿದ 170 ಸಿಬ್ಬಂದಿಯನ್ನಷ್ಟೇ ವರ್ಗಾವಣೆ ಮಾಡಲಾಗಿದೆ.
ಇನ್ನು ಧಾರವಾಡದ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಹುಬ್ಬಳ್ಳಿ ಠಾಣೆಗಳಿಗೆ, ಸಂಚಾರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಸಿವಿಲ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಹಿರಿತನದ ಆಧಾರದ ಮೇಲೆ ಕೆಲವೇ ಸಿಬ್ಬಂದಿಗೆ ಅಕ್ಕಪಕ್ಕದ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಲ ಪೊಲೀಸ್ ಸಿಬ್ಬಂದಿಗೆ ಆತಂಕ
ಇತ್ತೀಚೆಗಷ್ಟೆ ತುಂಬಾ ವರ್ಷಗಳಿಂದ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸ್ ಸಿಬ್ಬಂದಿಗೆ ಈಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವರ್ಗಾವಣೆ ಭಾಗ್ಯ ಕೊಟ್ಟಿತ್ತು. ವಿಪರ್ಯಾಸವೆಂದರೆ ಪೊಲೀಸ್ ಕಮೀಷನರ್ ವರ್ಗಾವಣೆ ಮಾಡಲು ಆಯಾ ಠಾಣೆಗೆ ಪತ್ರ ಬರೆದರು ಕೂಡ ಇನ್ನೂ ಮಾಹಿತಿ ಬಂದಿಲ್ಲ. ಇದರಿಂದ ಕೆಲ ಪೊಲೀಸರಲ್ಲಿ ಆತಂಕ ಉಂಟಾಗಿತ್ತು.
ಹಲವು ವರ್ಷಗಳಿಂದ ಒಂದೇ ಪೊಲೀಸ್ ಠಾಣೆಯಲ್ಲಿ ಮಹಾನಗರದಲ್ಲಿಯೇ ಮೊಕ್ಕಾಂ ಹೂಡಿರುವ ಸಿಬ್ಬಂದಿ ಮಾಹಿತಿ ಕೇಳಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಎಸಿಪಿಗಳಿಗೆ ಮತ್ತು ಇನನ್ಸ್ಪೆಕ್ಟರ್ಗಳಿಗೆ ಮೇ 31 ರಂದು ಪತ್ರ ಬರೆದಿದ್ದರು. ಅಲ್ಲದೆ ಸಿಬ್ಬಂದಿಯ ಸೇವಾ ಅವಧಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ್ದರು. ಅಲ್ಲದೇ ಜೂನ್ 3ರ ಒಳಗಾಗಿ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದರು.
ಆದರೆ ಅಂತಿಮ ಪಟ್ಟಿ ಆಯುಕ್ತರ ಕಚೇರಿ ಸೇರದಿರುವುದೇ ಅಚ್ಚರಿಯನ್ನು ಉಂಟು ಮಾಡಿತ್ತು. ಇನ್ನು ಅವಳಿ ನಗರದಲ್ಲಿನ 19 ಪೊಲೀಸ್ ಠಾಣೆಗಳು, 4 ಸಂಚಾರಿ ಠಾಣೆಗಳಲ್ಲಿ ಸಾಕಷ್ಟು ಸಿಬ್ಬಂದಿ 5 ವರ್ಷಗಳಿಗಿಂತಲೂ ಹೆಚ್ಚು ಕಾಲ ಠಿಕಾಣಿ ಹೂಡಿದ್ದರು. ಅಲ್ಲಿಂದಲೇ ವೃತ್ತಿ ಬದುಕು ಆರಂಭಿಸಿರುವ ಅವರು, ಅಲ್ಲಿಯೇ ಹವಾಲ್ದಾರ್, ಎಎಸ್ಐ, ಎಸ್ಐ ಆಗಿ ಪದೋನ್ನತಿ ಹೊಂದಿದ್ದರು. ಒಂದೊಂದು ಪೊಲೀಸ್ ಠಾಣೆಯಲ್ಲಿ 5 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ 8 ರಿಂದ 10 ಸಿಬ್ಬಂದಿಗಳಿದ್ದಾರೆ ಎನ್ನಲಾಗಿದೆ.
ಒಂದೇ ಠಾಣೆಯಲ್ಲಿ ಬಹಳ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಳೀಯವಾಗಿ ಹಿಡಿತ ಸಾಧಿಸಿರುವುದರಿಂದ, ಇದು ಕಾನೂನು ಬಾಹಿರ ಚಟುವಟಿಕೆ ಆಗಿದೆ. ಮಾಮೂಲಿ, ಹಫ್ತಾ ವಸೂಲಿಯಂತಹ ಆರೋಪಗಳು ಒಂದಲ್ಲ ಒಂದು ಮೂಲಗಳಿಂದ ಪೊಲೀಸ್ ಆಯುಕ್ತರ ಗಮನಕ್ಕೆ ಹೋಗಿವೆ. ಸಿಬ್ಬಂದಿಗಳ ವರ್ತನೆಗೆ ಬೇಸತ್ತು ಹೋಗಿರುವ ಆಯುಕ್ತರು ಸಾಮೂಹಿಕ ವರ್ಗಾವಣೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಹತ್ತಾರು ವರ್ಷಗಳಿಂದ ಪ್ರಭಾವ ಬಳಸಿಕೊಂಡು ಜಿಲ್ಲೆಯಿಂದಲೇ ಹೊರ ಹೋಗದ ಪೊಲೀಸರನ್ನು ಹೊರ ಜಿಲ್ಲೆಗೆ ವರ್ಗಾಯಿಸುವಂತೆ ಸಾರ್ವಜನಿಕರ ಒತ್ತಾಯವಾಗಿತ್ತು.












Click it and Unblock the Notifications