ಉಂಡವರೇ ಎಚ್ಚರ:ಹಾವೇರಿಯಲ್ಲಿ ಊರುಮಂದಿಗೆ ಊಟ ಹಾಕಿಸಿದವರಿಗೆ ಕೊವಿಡ್-19
ಹಾವೇರಿ, ಜುಲೈ.07: ಕೊರೊನಾವೈರಸ್ ಸೋಂಕಿತನ ಟ್ರಾವೆಲ್ ಹಿಸ್ಟರಿ ಹಾವೇರಿ ಜಿಲ್ಲೆಯ ಜನರ ಎದೆಯಲ್ಲಿ ನಡುಕವನ್ನು ಹುಟ್ಟಿಸುತ್ತಿದೆ. ರಾಣೆಬೆನ್ನೂರಿನಲ್ಲಿರುವ ಮಾರುತಿ ನಗರದ 55 ವರ್ಷದ ಕೊರೊನಾವೈರಸ್ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪ್ರಯಾಣದ ವಿವರ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಮಂಗಳವಾರ ಮೃತಪಟ್ಟ ವ್ಯಕ್ತಿಯು ಕಳೆದ ವಾರವಷ್ಟೇ ತನ್ನ ಮಗನ ಮದುವೆ ಮಾಡಿದ್ದಾನೆ. ಜ್ವರದ ಲಕ್ಷಣ ಕಾಣಿಸಿಕೊಂಡಿದ್ದರೂ ಒಂದು ವಾರಗಳ ಕಾಲ ಮದುವೆ ಕಾರ್ಯದಲ್ಲೇ ಫುಲ್ ಬ್ಯುಸಿಯಾಗಿ ಓಡಾಡಿದ್ದಾನೆ.
ಕಳೆದ ಜೂನ್.29ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ನಂತರ ಜುಲೈ.03ರಂದು ಮತ್ತೊಮ್ಮೆ ಖಾಸಗಿ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ವೈದ್ಯರು ಅನುಮಾನಗೊಂಡು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಿದ್ದಾರೆ

ವೈದ್ಯರ ಸಲಹೆ ನಿರ್ಲಕ್ಷ್ಯಿಸಿದ ಕೊವಿಡ್-19 ಸೋಂಕಿತ
ಖಾಸಗಿ ಆಸ್ಪತ್ರೆಯ ವೈದ್ಯರು ಜ್ವರದ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳದ ವ್ಯಕ್ತಿ ಜುಲೈ.03ರಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿ ಜನರಿಗೆಲ್ಲ ಊಟ ಹಾಕಿಸಿದ್ದಾರೆ.

ವೈದ್ಯರ ಸಲಹೆ ನೀಡಿ ಮರುದಿನ ಕೊವಿಡ್-19 ಪರೀಕ್ಷೆ
ಜುಲೈ.4ರಂದು ಜ್ವರ ಹೆಚ್ಚಾದ ಹಿನ್ನೆಲೆ ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ತೆರಳಿದ ವ್ಯಕ್ತಿ ಕೊರೊನಾವೈರಸ್ ಸೋಂಕು ತಪಾಸಣೆ ಮಾಡಿಸಿದ್ದಾರೆ. ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ಕೊಟ್ಟು ಬಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವ್ಯಕ್ತಿಯು ಮನೆಯಲ್ಲಿ ಇರದೇ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡು ವಾಪಸ್ಸಾಗಿದ್ದಾರೆ.

ಎರಡು ದಿನದ ಬಳಿಕ ದಾವಣಗೆರೆ ಆಸ್ಪತ್ರೆಗೆ ದಾಖಲು
ಜುಲೈ.04ರಂದು ಕೊವಿಡ್-19 ತಪಾಸಣೆಗೆ ತೆರಳಿದ್ದ ವ್ಯಕ್ತಿಯು ಎರಡು ದಿನಗಳ ಬಳಿಕ ಅಂದರೆ ಜುಲೈ.06ರಂದು ದಾವಣಗೆರೆ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಸಂಜೆ ವೇಳೆಗೆ ವ್ಯಕ್ತಿ ನೀಡಿದ್ದ ಕೊವಿಡ್-19 ತಪಾಸಣೆಯ ವರದಿ ಬಂದಿದ್ದು, ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ.

ಸೋಂಕಿತನಿಗೆ 99 ಜನರೊಂದಿಗೆ ಪ್ರಾಥಮಿಕ ಸಂಪರ್ಕ
ಜುಲೈ.07ರಂದು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಕೊರೊನಾವೈರಸ್ ಸೋಂಕಿತನು ಕನಿಷ್ಠ 99 ಜನರ ಜೊತೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದನು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಈಗಾಗಲೇ 99 ಜನರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಮಗನ ಮದುವೆ ಹಾಗೂ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡ ಎಲ್ಲರ ಎದೆಯಲ್ಲೂ ಇದೀಗ ಢವಢವ ಜೋರಾಗಿದೆ.












Click it and Unblock the Notifications