ಶಿಗ್ಗಾಂವ ತಾಲೂಕು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ: CM
ಬೆಂಗಳೂರು, ಡಿಸೆಂಬರ್ 04: ಶಿಗ್ಗಾಂವ ತಾಲ್ಲೂಕು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಈ ತಾಲ್ಲೂಕು ಕೃಷಿಯಿಂದ ಕೂಡಿದ್ದು ಪ್ರಾಮಾಣಿಕವಾಗಿ ಬದುಕುವ ರೈತಾಪಿ ವರ್ಗ ಇಲ್ಲಿದೆ. ದಿ.ಹನುಮಮಂತಗೌಡ್ರು 50 ವರ್ಷದ ಹಿಂದೆಯೇ ಪ್ರಗತಿಪರ ಕೃಷಿಯನ್ನು ಪರಿಚಯಿಸಿದ್ದರು. ಕಾರ್ಖಾನೆಗಳಂತೆ ಅವರು ಒಕ್ಕಲುತನದಲ್ಲಿ ಹಾಜರಿ ಪುಸ್ತಕ ಇಟ್ಟಿದ್ದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಶಿಗ್ಗಾಂವ ಹೊಸ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣವಾದ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯಲ್ಲಿ ಲಾಭದಾಯಕ ಬೆಳೆಯನ್ನು ಹೇಗೆ ಬೆಳಯಬೇಕೆಂಬುದನ್ನು ಹನುಮಂತಗೌಡರು ತೋರಿಸಿಕೊಟ್ಟಿದ್ದರು ಎಂದರು.
ಶಿಗ್ಗಾಂವ ತಾಲ್ಲೂಕಿನ ಪ್ರಗತಿ ಪರ ರೈತರು ಹೆಚ್ಚಿದ್ದಾರೆ. ಪಾಟೀಲರ ಜನ ಅವರನ್ನು ಗೌರವ ಮತ್ತು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ಅವರ ಸ್ಮರಣಾರ್ಥ ತಾಲೂಕಿನಲ್ಲಿ ಭವ್ಯ ಕಲ್ಯಾಣಮಂಟಪ ನಿರ್ಮಾಣ ಮಾಡಲಾಗಿದೆ. ಇದರಿಂದ ಅನೇಕ ಪ್ರಯೋಜನವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು.

ಶಿಗ್ಗಾಂವ ಶೀಘ್ರದಲ್ಲೇ ವಾಣಿಜ್ಯ ಕೇಂದ್ರವಾಗಲಿದೆ
ಶಿಗ್ಗಾಂವ ತಾಲ್ಲೂಕು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಮುಂದಿನ ದಿನಗಳಲ್ಲಿ ಇದು ಪ್ರಮುಖ ವಾಣಿಜ್ಯ ಕೇಂದ್ರ ಆಗಲಿದೆ. ಸಾಕಷ್ಟು ಯೋಜನೆಗಳನ್ನು ತಾಲೂಕಿಗೆ ತರುತ್ತಿದ್ದೇವೆ. ಈಗಾಗಲೇ ಟೆಕ್ಸಟೈಲ್ ಪಾಕ್ ಜಾರಿಯಾಗಿದೆ. ಬೃಹತ್ ಕಾರ್ಖಾನೆ ಬರಲು ಹಲವರಿಗೆ ಆಹ್ವಾನ ಕೊಡಲಾಗಿದೆ. ವಿದ್ಯಾ ಸಂಸ್ಥೆಗಳೂ ಇಲ್ಲಿ ತಲೆಎತ್ತಲಿವೆ. ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಶಿಗ್ಗಾಂವ ತಾಲ್ಲೂಕಿಗೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ವೈಜ್ಞಾನಿಕವಾಗಿ ವ್ಯವಸಾಯ
ಶಾಲೆಯಲ್ಲಿ, ಫ್ಯಾಕ್ಟರಿ, ಕಾರ್ಖಾನೆಗಳಲ್ಲಿ ಹಾಜರಿ ಪುಸ್ತಕವನ್ನು ನೋಡಿದ್ದೇವೆ. ಆದರೆ ದಿ. ಹನುಮಂತೇಗೌಡರು ಒಕ್ಕಲುತನದಲ್ಲಿ ಹಾಜರಿ ಪುಸ್ತಕ ಇಟ್ಟಿದ್ದರು. ಅದನ್ನು ಸುಮಾರು 50 ವರ್ಷ ನಿರ್ವಹಣೆ ಮಾಡಿದ್ದರು. ಗೊಬ್ಬರ ಎಷ್ಟು ಬಳಕೆ ಮಾಡಬೇಕು, ಯಾವ ಬೀಜ ತರಬೇಕು, ಎತ್ತುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅರಿತಿದ್ದ ಅವರು ವೈಜ್ಞಾನಿಕವಾಗಿ ಕೃಷಿ ಮಾಡುತ್ತಿದ್ದರು. ಎಸ್.ಆರ್. ಬೊಮ್ಮಾಯಿ ಅವರಿಗೆ ಮತ್ತು ಹನುಮಂತಗೌಡ್ರಿಗೆ ಅತ್ಯಂತ ಪ್ರೀತಿ ವಿಶ್ವಾಸ ಇತ್ತು. ಜನರಿಗೆ ಸದಾಪರೋಪಕಾರಿ ಕೆಲಸಗಳನ್ನು ಮಾಡುತ್ತಿದ್ದ ಮನೆತನ ಇವರದ್ದಾಗಿತ್ತು ಎಂದು ಬೊಮ್ಮಾಯಿ ಹೇಳಿದರು.

ತಾವೇ ವಕೀಲರಾಗಿ ವಾದಿಸಿ ಗೆದ್ದವರು
ತಾಲ್ಲೂಕಿನ ಅಭಿವೃದ್ಧಿ ದಿ.ಹನುಮಂತಗೌಡರ ಕುಟುಂಬ ಸದಾ ಕಾಳಜಿ ವಹಿಸುತ್ತದೆ. 1978ರಲ್ಲಿ ಚುನಾವಣೆ ಸಂದರ್ಭದಲ್ಲಿ ಹನುಮಂತ ಗೌಡ್ರಿಗೆ ಚುನಾವಣೆ ಕಣಕ್ಕಿಳಿಸಲು ತಾಲ್ಲೂಕಿನ ಜನ ಒತ್ತಾಯ ಮಾಡಿದರೂ ಅವರು ರಾಜಕಾರಣಕ್ಕೆ ಬರಲಿಲ್ಲ. ಭೂ ವ್ಯಾಜ್ಯ ಒಂದರ ವಿಚಾರದಲ್ಲಿ ತಮ್ಮ ವಕೀಲರು ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಸ್ವತಃ ತಾವೇ ಕಾನೂನು ಪದವಿ ಪಡೆದು ತಮ್ಮ ಪ್ರಕರಣವನ್ನು ತಾವೇ ವಾದಿಸಿ ಗೆದ್ದು ತೋರಿಸಿದರು. ಅಂತಹ ಗಟ್ಟಿ ಸ್ವಭಾವ ಇತರರಿಗೆ ಪ್ರೇರಣೆ ಎಂದರು.

ದಿವಂಗತರನ್ನು ನೆನೆದು ಭಾವುಕರಾದ ಸಿಎಂ
ಶಂಕರಗೌಡರ ಮನೆತನಕ್ಕೆ ನಾನು ಸದಾ ಚಿರಋಣಿ. ಅವರು ತೋರಿಸಿರುವ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೇ ಅವರು ತಾಲ್ಲೂಕಿನ ಹಿತಕ್ಕಾಗಿ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದರು. ಇನ್ನೂ ಹಲವು ದಶಕಗಳ ಕಾಲ ಅವರು ಇರಬೇಕಿತ್ತು. ಅವರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ ಎಂದು ಮುಖ್ಯಮಂತ್ರಿಕ್ಷಣಕಾಲ ಭಾವುಕರಾದರು.
ಕಾರ್ಯಕ್ರಮದಲ್ಲಿ ಶಿಗ್ಗಾಂವ ವಿರಕ್ತಮಠದ ಸಂಗಮೇಶ್ವರ ಮಹಾಸ್ವಾಮಿಗಳು, ದಿ.ಶಂಕರಗೌಡರ ಧರ್ಮಪತ್ನಿ ಸುಶೀಲಮ್ಮ ಪಾಟೀಲ, ಉದ್ಯಮಿ ವಿಜಯ ಸಂಕೇಶ್ವರ್, ಶಿವನಗೌಡ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications