ಶಮನವಾಗದ ರಾಣೇಬೆನ್ನೂರು ಬಿಜೆಪಿ ಬಂಡಾಯ
ಹಾವೇರಿ, ನವೆಂಬರ್ 17: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದಲ್ಲಿ ಬಂಡಾಯದ ಬೇಗುದಿ ಮುಂದುವರೆದಿದೆ. ಅನರ್ಹ ಶಾಸಕ ಆರ್.ಶಂಕರ್ ಬದಲಿಗೆ ಅರುಣ್ ಕುಮಾರ್ ಗೆ ಪಕ್ಷದ ಟಕೆಟ್ ಈಗಾಗಲೇ ಘೋಷಿಸಿದ್ದು, ನಾಮಪತ್ರ ಸಲ್ಲಿಕೆಯೊಂದೇ ಬಾಕಿ ಉಳಿದಿದೆ. ಹೀಗಿರುವಾಗಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ 3ನೇ ಸ್ಥಾನ ಪಡೆದಿದ್ದ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಬಂಡಾಯದ ಬಾವುಟ ಹಾರಿಸಿದ್ದಾರೆ.
ಬಸವರಾಜ್ ಕೇಲಗಾರ ಬೆಂಬಲಿಗರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಆಕ್ರೋಶ ಹೊರಹಾಕಿದರು. ಕಳೆದ ಚುನಾವಣೆಯಲ್ಲಿ 49 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಉತ್ತಮ ಪೈಪೋಟಿ ನೀಡಿದ್ದರು, ಹೀಗಾಗಿ ಕೇಲಗಾರ ಅವರಿಗೇ ಟಿಕೆಟ್ ನೀಡಬೇಕೆಂದು ಪ್ರತಿಭಟನೆ ನಡೆಸಿದರು. ಚುನಾವಣೆಯಲ್ಲಿ ನಾವು ಅರುಣ್ ಕುಮಾರ್ ರನ್ನು ಯಾವದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಅವರ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. ಟಿಕೆಟ್ ಕೊಟ್ಟರೂ ಅವರು ಗೆಲ್ಲುವು ಅನುಮಾನ ಎಂದು ಕೇಲಗಾರ ಪರವಾಗಿ ಘೋಷಣೆ ಕೂಗಿದರು.

ಸಿಎಂ ಯಡಿಯೂರಪ್ಪ ಮನವೊಲಿಕೆಗೆ ಎಷ್ಟೇ ಪ್ರಯತ್ನ ಪಟ್ಟರೂ ಅದಕ್ಕೂ ಬಗ್ಗದೇ ಸಿಟ್ಟಿನಿಂದಲೇ ಹೊರನಡೆದರು. ಉಪ ಚುನಾವಣೆ ಡಿಸೆಂಬರ್ 05 ಕ್ಕೆ ಘೋಷಣೆಯಾಗಿದ್ದು, ರಾಣೇಬೆನ್ನೂರು ರಣ ಕಣದಲ್ಲಿ ಕಾಂಗ್ರೆಸ್ ನಿಂದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಬಿಜೆಪಿಯಿಂದ ಅರುಣ್ ಕುಮಾರ್ ಪೂಜಾರ್ ಮತ್ತು ಜೆಡಿಎಸ್ ನಿಂದ ಮಲ್ಲಿಕಾರ್ಜುನ ಹಲಗೇರಿ ಅಭ್ಯರ್ಥಿಗಳಾಗಿದ್ದಾರೆ. ರಾಣೇಬೆನ್ನೂರು ಬಿಜೆಪಿ ಬಂಡಾಯವನ್ನು ಪಕ್ಷದ ವರಿಷ್ಠರು ಹೇಗೆ ಹತ್ತಿಕ್ಕುತ್ತಾರೆ ಎಂದು ಕಾದು ನೋಡಬೇಕು.












Click it and Unblock the Notifications