ಹಾವೇರಿ: 20 ಕೋಟಿ ರೂಪಾಯಿ ವೆಚ್ಚದ ಮೆಗಾ ಡೇರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ
ಹಾವೇರಿ, ಸೆಪ್ಟೆಂಬರ್, 29: ಇಪ್ಪತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಮೆಗಾ ಡೇರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದ ಬಳಿಯ ಮೆಗಾ ಡೇರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕೃಷಿ ಸಚಿವ ಬಿ.ಸಿ.ಪಾಟೀಲ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದ ಶಿವಕುಮಾರ ಉದಾಸಿ, ನೆಹರು ಓಲೇಕಾರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ನಂತರ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, "ಮೆಗಾ ಡೇರಿ ಅಷ್ಟು ಸುಲಭವಾಗಿ ಸಿಕ್ಕಿಲ್ಲ. ಹಾಲು ಉತ್ಪಾದನೆ ಮಾಡುವ ರೈತ ಬಾಂಧವರಿಗೆ ಧನ್ಯವಾದ ತಿಳಿಸುವೆ. ನಿಮ್ಮ ಪ್ರಭಾವದಿಂದಲೇ ಈ ಹಾಲು ಒಕ್ಕೂಟ, ಮೆಗಾ ಡೇರಿ ಮಾಡಲು ಸಾಧ್ಯವಾಗಿದೆ ಧಾರವಾಡ ಯುನಿಯನ್ನಲ್ಲಿ ಹೆಚ್ಚು ಹಾಲು ಉತ್ಪಾದಕ ಜಿಲ್ಲೆ ಹಾವೇರಿ ಆಗಿದ್ದು, ಹೀಗಾಗಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಿದ್ದೇವೆ. ರೈತರ ಆದಾಯ ದ್ವಿಗುಣ ಆಗಬೇಕು ಅನ್ನುವುದು ಪ್ರಧಾನಿ ಮೋದಿಯವರ ಕನಸಾಗಿದೆ. ಆದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಜಾರಿ ಮಾಡಿದ್ದಾರೆ. ರಾಜ್ಯ ಸರ್ಕಾರ 4000 ರೂಪಾಯಿ ಕೂಡಿಸಿ ಒಟ್ಟು 10,000 ರೂಪಾಯಿ ನೀಡಲಾಗುತ್ತಿದೆ," ಎಂದರು.
ಮೆಗಾ ಡೇರಿಗೆ ಸಿಎಂ ಶಂಕುಸ್ಥಾಪನೆ
ಹಾವೇರಿ ಬಳಿ ಯು.ಎಸ್ ಡಿ ಪ್ಲಾಂಟ್ ಕೂಡ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಪ್ರತಿದಿನ ಕನಿಷ್ಟ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಬೇಕು. ಪಶು ಆಹಾರದ ಉತ್ಪಾದನೆ ಘಟಕವನ್ನು ಕೂಡ ಇಲ್ಲೇ ಮಾಡುತ್ತಿದ್ದು, ಪೇಡಾ, ತುಪ್ಪ, ಬೆಣ್ಣೆ ಉತ್ಪಾದನೆ ಇಲ್ಲಿ ಆಗುತ್ತದೆ. ಇದು ನನ್ನ ಬಹಳ ದಿನಗಳ ಕನಸಾಗಿದ್ದು, ಈಗ ಇದು ನನಸಾಗುತ್ತಿದೆ. ಜಿಲ್ಲೆಯಲ್ಲಿ ಔದ್ಯೋಗೀಕರಣ ಆಗಕಿದ್ದು, ಆದ್ದರಿಂದ ಕೈಗಾರಿಕಾ ಟೌನ್ ಶಿಪ್ ಮಾಡುತ್ತಿದ್ದೇವೆ ಎಂದರು.
14 ಲಕ್ಷ ಜನರಿಗೆ ತಲುಪಿದ ರೈತ ವಿದ್ಯಾನಿಧಿ
ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸುತ್ತಿದ್ದೇವೆ. ಈಗಾಗಲೇ 14 ಲಕ್ಷ ಜನರಿಗೆ ರೈತ ವಿದ್ಯಾನಿಧಿ ತಲುಪಿದ್ದು, ಬೆಳಗಾವಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಪರಿಹಾರದ ಜೊತೆ ನಾವು ಹೆಚ್ಚು ಪರಿಹಾರ ನೀಡಬೇಕು ಎಂದು ನಿರ್ಧಾರ ಮಾಡಿದ್ದೇವೆ.
ಮತ್ತೆ ಯಶಸ್ವಿನಿ ಯೋಜನೆ ಜಾರಿ-ಸಿಎಂ
ರೈತರ ಸಂಕಷ್ಟಕ್ಕೆ ಧಾವಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಯಶಸ್ವಿನಿ ಯೋಜನೆ ನಿಂತು ಹೋಗಿತ್ತು. 300 ಕೋಟಿ ರೂಪಾಯಿ ಹಣ ನೀಡಿ ಮತ್ತೆ ಯಶಸ್ವಿನಿ ಯೋಜನೆ ಶುರು ಮಾಡಿದ್ದೇವೆ. ಇಡೀ ದೇಶದಲ್ಲಿ ಪ್ರಥಮವಾಗಿ ಕರ್ನಾಟಕದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಶೀಘ್ರದಲ್ಲೇ ಪ್ರಾರಂಭ ಆಗಲಿದೆ. ಹಾಲು ಉತ್ಪಾದಕರಿಗಾಗಿಯೇ ಕ್ಷೀರ ಸಮೃದ್ಧಿ ಬ್ಯಾಂಕ್ ಮಾಡುತ್ತಿದ್ದೇವೆ ಎಂದರು.
ಸಾವನ್ನಪಿದ್ದ ಎತ್ತು , ಹಸುಗಳಿಗೆ ಪರಿಹಾರ ಎಷ್ಟು?
ಇನ್ನು ಹಾವೇರಿಯಲ್ಲಿ ಗಂಟು ರೋಗದಿಂದ ಎತ್ತು ಸಾವನ್ನಪ್ಪಿದ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಂಟು ರೋಗದಿಂದ ಎತ್ತು , ಹಸುಗಳು ಸಾವನ್ನಪ್ಪಿವೆ. ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ರೋಗದಿಂದ ಬಳಲುತ್ತಿರುವ ರಾಸುಗಳಿಗೆ ಎಷ್ಟು ಬೇಕು ಅಷ್ಟು ಔಷಧಿ ಕೊಡುತ್ತೇವೆ. ಪರಿಹಾರವನ್ನು ಕೂಡ ಕೊಡುತ್ತೇವೆ ಎಂದು ಹೇಳಿದ್ದೇವೆ. ಗಂಟು ರೋಗದಿಂದ ಸಾವನ್ನಪ್ಪಿದ ಹಸುವಿಗೆ 20,000, ಎತ್ತುಗಳಿಗೆ 30,000 ರೂಪಾಯಿ ಪರಿಹಾರ ನೀಡುತ್ತೇವೆ. ಗಂಟು ರೋಗದಿಂದ ಬಳಲುತ್ತಿರುವ ರಾಸುಗಳಿಗೆ ಸಂಪೂರ್ಣ ವೈದ್ಯಕೀಯ ವೆಚ್ಚ, ಔಷಧಿಯನ್ನು ಸರ್ಕಾರ ಕೊಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.