ಹಾವೇರಿ: 2833 ಕೃಷಿ ಹೊಂಡ, 36.26 ಕೋಟಿ ವೆಚ್ಚದ ಹನಿ ನೀರಾವರಿ
ಹಾವೇರಿ, ಡಿಸೆಂಬರ್ 23: ಹಾವೇರಿಯಲ್ಲಿ ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿರುವ ಸಿದ್ದರಾಮಯ್ಯ ಅವರು ಇಂದು ಕೋಟ್ಯಾಂತರ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ.
ಮೊದಲಿಗೆ ಹಾವೇರಿ ನಗರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿರುವ ಮುಖ್ಯಮಂತ್ರಿಗಳು, ಮಧ್ಯಾಹ್ನ ಬ್ಯಾಡಗಿ ನಗರದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.
ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ನೀಡಿದ ಕೊಡುಗೆಗಳು
ಸಮಾವೇಶದಲ್ಲಿ ಕರ್ನಾಟಕ ಸರ್ಕಾರವು ಹಾವೇರಿ ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರಮುಖವಾಗಿ ಗಮನ ಸೆಳೆಯಲಿರುವ ಮುಖ್ಯಮಂತ್ರಿಗಳು, ಕೃಷಿ ಸೌಲಭ್ಯ, ಉದ್ಯೋಗ ಸೌಲಭ್ಯ, ಮಹಿಳೆಯರ ಪ್ರಗತಿಗೆ ಕೈಗೊಂಡ ಕಾರ್ಯಕ್ರಮಗಳನ್ನು ಜನರ ಗಮನಕ್ಕೆ ತರಲಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಶಾಸಕರು, ಇರಲಿದ್ದಾರೆ. ಹಾವೇರಿ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ.
36.26 ಕೋಟಿ ವೆಚ್ಚದಲ್ಲಿ ಹನಿ ನಿರಾವರಿ
ಜಿಲ್ಲೆಯಲ್ಲಿ ಒಟ್ಟು 2833 ಕೃಷಿ ಹೊಂಡ ನಿರ್ಮಿಸಲಾಗಿದೆ, 116 ಪಾಲಿ ಹೌಸ್ ನಿರ್ಮಾಣ ಮಾಡಲಾಗಿದೆ, 36.26 ಕೋಟಿ ವೆಚ್ಚದಲ್ಲಿ ಜಿಲ್ಲೆಯ ರೈತರಿಗೆ ಹನಿ ನೀರಾವರಿ ಕಲ್ಪಿಸಲಾಗಿದೆ. ಸಾಲಮನ್ನಾ ಯೋಜನೆಯಡಿ 35,106 ರೈತರ 10 ಕೋಟಿಗೂ ಅಧಿಕ ಸಾಲ ಮನ್ನಾ ಮಾಡಲಾಗಿದೆ.
39,771 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ಹಾವೇರಿ ಜಿಲ್ಲೆಯ 1,00,864 ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ, 15 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆರಂಭ, 482 ಶಾಲಾ ಕೊಠಡಿಗಳ ನಿರ್ಮಾಣ, ರೂ 341 ಲಕ್ಷ ವೆಚ್ಚದಲ್ಲಿ 39,771 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗಿದೆ.
62 ಕಿ.ಮೀ ನಾಲಾ ಅಭಿವೃದ್ಧಿ
ತುಂಗಾ ಮೇಲ್ದಂಡೆ ಯೋಜನೆಯಡಿ ಹಾವೇರಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 197 ಗ್ರಾಮಗಳ 80,494 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 1991-92ರ ಸಾಲಿನಲ್ಲಿ ರೂ.2562 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
ಧರ್ಮಾ ಜಲಾಶಯ ಯೋಜನೆಯಡಿ ಒಟ್ಟು 62 ಕಿ.ಮೀ. ನಾಲಾ ಆಧುನೀಕರಣ ಕಾಮಗಾರಿಗಳನ್ನು ರೂ.23.73 ಕೋಟಿ ಮತ್ತು 22.37 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು, ಈವರೆಗೆ ಶೇ.80 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ.
33,219 ಮನೆ ನಿರ್ಮಾಣ
ರೂ.347 ಲಕ್ಷ ವೆಚ್ಚದಲ್ಲಿ ಹಾವೇರಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ. ರೂ.2.69ಕೋಟಿ ವೆಚ್ಚದಲ್ಲಿ ಹಾವೇರಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಟ್ಟಡ ನಿರ್ಮಾಣ. ರೂ.150 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೆಂದ್ರ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಬಡವರಿಗಾಗಿ ಇರುವ ವಿವಿಧ ವಸತಿ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 36,258 ವಸತಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು 33,219 ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ 15,739 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು. ಉಳಿದ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ.
21447.17 ಲಕ್ಷ ಕುಡಿಯುವ ನೀರಿನ ಕಾಮಗಾರಿ
ಋಣಮುಕ್ತ ಯೋಜನೆಯಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಸಾಲ ಪಡೆದ 889 ಜನರ ಸಾಲ ಮನ್ನಾ ಮಾಡಿದ್ದು ಇದಕ್ಕಾಗಿ, 591 ಲಕ್ಷ ರೂ. ಅನುದಾನ ನೀಡಲಾಗಿದೆ.
ಗ್ರಾಮೀಣ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯಾದ್ಯಂತ ಶುದ್ಧ ನೀರಿನ ಘಟಕ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಕಳೆದ ನಾಲ್ಕು ವರ್ಷದಲ್ಲಿ 21447.17 ಲಕ್ಷ ರೂ.ವೆಚ್ಚ ಮಾಡಲಾಗಿದೆ. 3494 ವಿವಿಧ ನೀರು ಪೂರೈಕೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.