Explained: ಹಾನಗಲ್ ಉಪ ಚುನಾವಣೆಗೆ ಬಿಜೆಪಿ ಘೋಷಿಸಿದ ಪ್ರಣಾಳಿಕೆಯಲ್ಲಿ ಏನಿದೆ?
ಹಾವೇರಿ, ಅಕ್ಟೋಬರ್ 23: ಕರ್ನಾಟಕದಲ್ಲಿ ಉಪ ಚುನಾವಣಾ ಕದನ ತಾರಕ್ಕೇರಿದೆ. ಮಾಜಿ ಸಚಿವ ಸಿ ಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ತವರು ಜಿಲ್ಲೆಯಲ್ಲಿ ಉಪ ಚುನಾವಣೆ ಗೆಲ್ಲುವುದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸವಾಲಾಗಿದೆ.
"ಹಾನಗಲ್ ಉಪಾಚುನಾವಣೆಗೆ ಇಂದು ನಮ್ಮ ಪಕ್ಷದ ಪ್ರಣಾಳಿಕೆ 'ಕಮಲಪಥ'ವನ್ನು ಬಿಡುಗಡೆ ಮಾಡಲಾಯಿತು. ಹಾನಗಲ್ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ದೂರದೃಷ್ಟಿ, ಬದ್ಧತೆ ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದ್ದು ಕ್ಷೇತ್ರದ ಜನತೆ ನಮ್ಮ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ," ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಹಾನಗಲ್, ಸಿಂಧಗಿ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯರಿಗೆ ಸಿಕ್ಕ ಸುಳಿವಿನ ಸೀಕ್ರೆಟ್!?
ಹಾನಗಲ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ. ಕ್ಷೇತ್ರದ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಯಾವ ರೀತಿಯ ಆಶ್ವಾಸನೆಗಳನ್ನು ನೀಡಿದೆ ಎಂಬುದರ ಕುರಿತು ಒಂದು ವಿಶೇಷ ಇಲ್ಲಿದೆ ನೋಡಿ.
ಹಾನಗಲ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ:
* ಹಾನಗಲ್ ಪಟ್ಟಣದಲ್ಲಿ ಈ ಹಿಂದೆ ನಿರ್ಮಿಸಿ ನಿಷ್ಕ್ರಿಯಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮರಳಿ ಸುಸ್ಥಿತಿಗೆ ತರುವುದರ ಜೊತೆಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹೊಸ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು.
* ಉಚಿತ ನಿವೇಶನ ಯೋಜನೆ ಅಡಿ ಹಾನಗಲ್ ಪಟ್ಟಣದಲ್ಲಿ ವಸತಿ ರಹಿತ ಕುಟುಂಬಗಳಿಗೆ ಕಾಲಮಿತಿಯಲ್ಲಿ ಉಚಿತ ನಿವೇಶನದ ಹಕ್ಕುಪತ್ರಗಳನ್ನು ವಿತರಿಸುವುದು
* ಸರ್ವರಿಗೂ ಸೂರು ಘೋಷಣೆ ಅನ್ವಯ ನಿವೇಶನ ಹೊಂದಿರುವ ಮತ್ತು ಸರ್ಕಾರದಿಂದ ನಿವೇಶನ ಪಡೆದ ಎಲ್ಲರಿಗೂ ಸ್ವಂತ ಮನೆ ಹೊಂದಲು ನೆರವು
* ಹಾನಗಲ್ ಪಟ್ಟಣ ವ್ಯಾಪ್ತಿಯಲ್ಲಿನ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯ ದೇವಸ್ಥಾನಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ವಿಶೇಷ ಯೋಜನೆ ಜಾರಿ
* ಮೃತರ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಪಟ್ಟಣದ ಹೊರವಲಯದಲ್ಲಿ ಸುಸಜ್ಜಿತ ಮೂಲ ಸೌಲಭ್ಯ ಹೊಂದಿರುವ ರುದ್ರಭೂಮಿ ಅಭಿವೃದ್ಧಿಪಡಿಸುವುದು
* ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಸ್ವಂತ ಉದ್ಯಮ ಸ್ಥಾಪಿಸಲು ಮತ್ತು ಇತರೆಡೆ ಉದ್ಯೋಗ ದೊರಕಿಸಲು ನೆರವು ನೀಡಲಾಗುವುದು. ಪ್ರತಿವರ್ಷ ಉದ್ಯೋಗ ಮೇಳಗಳನ್ನು ಆಯೋಜಿಸುವುದು
* ಹಾನಗಲ್ ಪಟ್ಟಣದ ವಿವಿಧೆಡೆ ಸುಂದರ ಉದ್ಯಾನವನಗಳನ್ನು ನಿರ್ಮಿಸಿ ಅದರಲ್ಲಿ ವಾಯುವಿಹಾರ ಪಥ, ಮಕ್ಕಳ ಆಟಕ್ಕಾಗಿ ಹಾಗೂ ಯುವಕರ ವ್ಯಾಯಾಮಕ್ಕಾಗಿ ಉಪಕರಣ ಅಳವಡಿಸುವುದು
* ಹಾನಗಲ್ ಪಟ್ಟಣದ ಆರ್ಥಿಕ ಚಟುವುಟಿಕೆ ಉತ್ತೇಜಿಸಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಜನೆಗೆ ಅನುಕೂಲವಾಗುವಂತೆ ಕೈಗಾರಿಕೆಗಳನ್ನು ಸ್ಥಾಪಿಸುವುದು. ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರದೇಶ ಕೈಗಾರಿಕೆ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಮೂಲ ಸೌಲಭ್ಯಗಳುಳ್ಳ ಕೈಗಾರಿಕಾ ಬಡಾವಣೆ ಅಭಿವೃದ್ಧಿಪಡಿಸಲಾಗುವುದು
* ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಪಟ್ಟಣದ ವಿವಿಧೆಡೆ ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ನಿರ್ಮಿಸುವುದು
* ಪಟ್ಟಣದಲ್ಲಿ ಉತ್ಪಾದನೆ ಆಗುತ್ತಿರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ಥಾಪಿಸಿರುವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆಧುನೀಕರಣಗೊಳಿಸಲಾಗುವುದು. ಪ್ರತಿ ಮನೆಯಿಂದಲೂ ಒಣ ಮತ್ತು ಹಸಿ ಕಸವನ್ನು ಸಂಗ್ರಹಿಸಲಾಗುವುದು
* ಹಾನಗಲ್ ಪಟ್ಟಣದಲ್ಲಿ ನಿರ್ಮಿಸುವ ಎಲ್ಲ ವಸತಿ, ವಾಣಿಜ್ಯ ಕಟ್ಟಡಗಳಲ್ಲಿ ಜಾರಿಯಲ್ಲಿ ಇರುವ ಕಾನೂನು ಅನ್ವಯ ಮಳೆ ನೀರು ಕೊಯ್ಲು ಅನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಅಂತರ್ಜಲ ಮಟ್ಟ ಸುಧಾರಣೆಗೆ ಒತ್ತು ನೀಡುವುದು
* ಪಟ್ಟಣದ ಆಟದ ಮೈದಾನವನ್ನು ಸುಸಜ್ಜಿನ ಕ್ರೀಡಾಂಗಣವನ್ನಾಗಿ ಪರಿವರ್ತಿಸಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಜೊತೆಗೆ ಒಳಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು
* ಹಾಗನಲ್ ಪಟ್ಟಣದ ಎಲ್ಲಾ ಕುಟುಂಬಗಳಿಗೆ ಆರೋಗ್ಯ ಇಲಾಖೆ ವತಿಯಿಂದ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ದೊರಕಿಸುವ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ತ್ವರಿತವಾಗಿ ವಿತರಿಸಲಾಗುವುದು
* ಪಟ್ಟಣದಲ್ಲಿರುವ ಈಜುಕೊಳವನ್ನು ನವೀಕರಣಗೊಳಿಸಿ ಅತ್ಯಾಧುನಿಕ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು. ಸುಸಜ್ಜಿತ ಈಜುಕೊಳ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿ ನಿರ್ಮಾಣ ಮಾಡಲಾಗುವುದು
* ಹಾನಗಲ್ ಪಟ್ಟಣದ ಹೊರವಲಯದಲ್ಲಿ ಬಸ್ ತಂಗುದಾಣ ಮತ್ತು ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು
* ಪಟ್ಟಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಹಾಗೂ ಸಂಪರ್ಕ ರಸ್ತೆಗಳಲ್ಲಿ ಬಸ್ ಶೆಲ್ಟರ್ ಗಳನ್ನು ನಿರ್ಮಾಣ ಮಾಡಲಾಗುವುದು
* ಜನೌಷಧಿ ಮಳಿಗೆಗಳಲ್ಲಿ ಎಲ್ಲಾ ಬಗೆಯ ಔಶಧಿಗಳ ಲಭ್ಯತೆ ಮತ್ತು ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಬೇಡಿಕೆಗೆ ಅನುಗುಣವಾಗಿ ಹೊಸ ಜನೌಷಧಿ ಮಳಿಗೆಗಳ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು
* ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ರಕ್ಷಣೆ ದೃಷ್ಟಿಯಿಂದ ಪಟ್ಟಣದಾದ್ಯಂತ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ ವಿಶೇಷ ಕಣ್ಗಾವಲು ವ್ಯವಸ್ಥೆ ಮತ್ತು ಪೊಲೀಸ್ ಗಸ್ತು ಸೌಲಭ್ಯ ಜಾರಿಗೊಳಿಸಲಾಗುವುದು
*ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹಾನಗಲ್ ಪಟ್ಟಣದಲ್ಲಿ ಪ್ರಮುಖ ಮತ್ತು ಸಂಚಾರಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪಾದಚಾರಿಗಳಿಗೂ ಅನುಕೂಲವಾಗುವಂತೆ ಅತ್ಯಾಧುನಿಕ ಮಾದರಿಯಲ್ಲಿ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು