ಸ್ಥಳಾಂತರಿಸಿದರೂ ತಪ್ಪದ ಕಾಟ: ನೂರಾರು ಮೈಲಿ ಸಾಗಿ ಬಂದು ಮನೆ ಮೇಲೆ ಕಾಡಾನೆ ದಾಳಿ
ಹಾಸನ, ನವೆಂಬರ್ 24: ಕಾಡಾನೆಯೊಂದು ಒಂದು ಕುಟುಂಬವನ್ನು ಬೆನ್ನುಬಿಡದೇ ಕಾಟ ಕೊಡುತ್ತಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ. ಕೆಸಗುಲಿ ಗ್ರಾಮದ ಗಿರೀಶ್ ಕುಟುಂಬ ಕಾಡಾನೆ ದಾಳಿಯಿಂದ ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಕಾಟ ಮಿತಿಮೀರುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಒಂದೆಡೆ ಕಾಡಾನೆಗಳು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದರೆ, ಇನ್ನೊಂದೆಡೆ ಅನೇಕು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಅದೇ ರೀತಿ ಕೆಸಗುಲಿ ಗ್ರಾಮದಲ್ಲೂ ಕಾಡಾನೆ ಹಾವಳಿ ಇದ್ದು, ಗಿರೀಶ್ ಕುಟುಂಬಕ್ಕೆ ಕಾಡಾನೆ ಕೊಡುತ್ತಿರುವ ಕಾಟ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.
ಆನೆ ದಾಳಿಗೆ ಯುವಕ ಬಲಿ: ಪ್ರತಿಭಟನಾ ಸ್ಥಳಕ್ಕೆ ಸಚಿವರ ದೌಡು
ಕೆಸಗುಲಿ ಗ್ರಾಮದಲ್ಲಿರುವ ಗಿರೀಶ್ ಮನೆ ಮೇಲೆ ಕಾಡಾನೆಯೊಂದು ಪದೇ ಪದೇ ದಾಳಿ ನಡೆಸುತ್ತಿತ್ತು. ಕಾಡಾನೆ ದಾಳಿಯಿಂದ ತತ್ತರಿಸಿದ ಕುಟುಂಬ ಅರಣ್ಯಾಧಿಕಾರಿಗಳ ಮೊರೆ ಹೋಗಿದ್ದರು. ಅರಣ್ಯಾಧಿಕಾರಿಗಳು ಕೂಡ ಕಾರ್ಯಾಚರಣೆ ನಡೆಸಿ ಕಾಡಾನನೆಯನ್ನು ಸೆರೆ ಹಿಡಿದು ನೂರಾರು ಕಿಲೋಮೀಟರ್ ದೂರದ ಮಲೆಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತಿಸಿದ್ದರು. ಕಾಡಾನೆ ಕಾಟ ತಪ್ಪಿತಲ್ಲ ಎಂದು ಗಿರೀಶ್ ಕುಟುಂಬ ನಿಟ್ಟುಸಿರು ಬಿಡುವ ಮೊದಲೇ, ಮತ್ತದೇ ಸಮಸ್ಯೆ ಎದುರಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಾಂತರ ಮಾಡಿದ್ದ ಕಾಡಾನೆ, ಕೇವಲ ಮೂರು ತಿಂಗಳ ಅಂತರದಲ್ಲಿ ನೂರಾರು ಕಿಲೋಮೀಟರ್ ದೂರದಿಂದ ಹಳೆ ಜಾಗ ಹುಡುಕಿ ಬಂದಿದೆ. ಗುರುವಾರ ಮುಂಜಾನೆ ಎರಡು ಗಂಟೆ ಸುಮಾರಿಗೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿದೆ. ಗಿರೀಶ್ ಕುಟುಂಬದವರು ನಿದ್ರೆಯಲ್ಲಿರುವ ಒಂಟಿ ಸಲಗ ದಾಳಿ ಮಾಡಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಾಂತರ ಮಾಡಿದ ಬಳಿಕ ಯಾವುದೇ ಮನೆ ಮೇಲೆ ದಾಳಿ ಮಾಡದೆ ಯಾರ ಕಣ್ಣಿಗೂ ಬೀಳದೆ ಓಡಾಡಿಕೊಂಡಿದ್ದ ಈ ಒಂಟಿ ಸಲಗ ಮತ್ತೆ ತನ್ನ ಹಳೆಯ ಜಾಗಕ್ಕೆ ಬಂದು ದಾಂಧಲೆ ನಡೆಸಿದೆ. ಇದರಿಂದ ಗಿರೀಶ್ ಅವರ ಕುಟುಂಬ ಸೇರಿದಂತೆ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಇನ್ನು ಇತ್ತೀಚಿಗಷ್ಟೆ, ಕಾಡಾನೆ ದಾಳಿಯಿಂದ ಯುವಕ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಹಬ್ಬನಹಳ್ಳಿಯಲ್ಲಿ ನಡೆದಿತ್ತು. ಯುವಕ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ಸಾಗುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಈ ಬಗ್ಗೆ ಅನೇಕ ಪ್ರತಿಭಟನೆಗಳು ಸಹ ನಡೆದಿದ್ದವು.