ಭಾರತ್ ಜೋಡೋ ಆಗಬೇಕಿರುವುದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ- ಶೋಭಾ ಕರಂದ್ಲಾಜೆ
ಹಾಸನ, ಅಕ್ಟೋಬರ್ 21: "ರಾಹುಲ್ ಗಾಂಧಿ ಆರೋಗ್ಯದ ಪ್ರದರ್ಶನ ಮಾಡುತ್ತಿದ್ದಾರೆ. ಅದು ಕೇವಲ ದೈಹಿಕ ಆರೋಗ್ಯ ಮಾತ್ರ. ಕಾಂಗ್ರೆಸ್ನವರ ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಲಾಭವಿಲ್ಲ. ಭಾರತ್ ಜೋಡೋ ಆಗಬೇಕಿರುವುದು ಭಾರತದ ಒಳಗೆ ಅಲ್ಲ, ಭಾರತ ಜೋಡೋ ಆಗಬೇಕಿರುವುದು ಪಾಕ್ ವಶಪಡಿಸಿಕೊಂಡಿರುವ ಕಾಶ್ಮೀರದಲ್ಲಿ," ಎಂದು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿರುದ್ಧ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, "ಪಾಕಿಸ್ತಾನಕ್ಕೆ ಅವತ್ತಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಟ್ಟುಕೊಟ್ಟ ಭಾರತದ ಒಂದು ಭಾಗ ಇವತ್ತು ಪಾಕ್ ಆಕ್ರಮಿತ ಕಾಶ್ಮೀರ ಆಗಿದೆ. ದೇಶದ ಬಹುಭಾಗ ಚೀನಾಕ್ಕೆ ಹೋಗಿದೆ, 1992ರಲ್ಲಿ ಧೀಮ್ಥಾನವನ್ನು ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟರು ಇಂತಹ ಜಾಗದಲ್ಲಿ ಭಾರತ್ ಜೋಡೋ ಆಗಬೇಕಿದೆ," ಎಂದರು.
ರಾಯರ ದರ್ಶನ ಪಡೆದ ರಾಹುಲ್ ಗಾಂಧಿ: ಮಂತ್ರಾಲಯಕ್ಕೆ ಭೇಟಿಕೊಟ್ಟ ಮೊದಲ ಗಾಂಧಿ ವಂಶಸ್ಥ
"ದೇಶದಲ್ಲಿ ಭಾರತದ ಗಡಿಭಾಗದಲ್ಲಿ ಭಾರತ ಜೋಡೋ ಕೆಲಸ ಆಗಬೇಕಿದೆ. ಆ ಕೆಲಸವನ್ನು ಆವತ್ತಿನ ಕಾಂಗ್ರೆಸ್ ಮಾಡಿದ್ದರೆ, ಇವತ್ತು ಇವರು ಭಾರತ್ ಜೋಡೋ ಬಗ್ಗೆ ಮಾತನಾಡುವ ಅಗತ್ಯವಿರುತ್ತಿರಲಿಲ್ಲ. ರಾಹುಲ್ ಗಾಂಧಿ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ, ಅವರು ಹೋಗಬೇಕಿರುವುದು ಕಾಶ್ಮೀರ, ಹಿಮಾಲಯ ಜಾಗದಲ್ಲಿ, ಆಗ ಭಾರತ್ ಜೋಡೋ ಆಗುತ್ತದೆ," ಎಂದು ಹೇಳಿದರು.
ಕಿಸಾನ್ ಸಮೃದ್ದಿ ಕೇಂದ್ರಗಳು ಉಪಯೋಗಕ್ಕೆ ಬರುತ್ತದೆ
ಕೇಂದ್ರ ಸರ್ಕಾರ ರೈತರಿಗೆ ತಂದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, "ರೈತರಿಗೆ ಈಗ ಆರು ಸಾವಿರ ಕೊಡುತ್ತಿದ್ದೇವೆ. ಅದೇ ರೀತಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮೃದ್ಧಿ ಯೋಜನೆಯನ್ನು ಉದ್ಘಾಟನೆ ಮಾಡಿದ್ದಾರೆ. ದೇಶದ 600 ಭಾಗಗಳಲ್ಲಿ ಆರಂಭಿಕವಾಗಿ ಉದ್ಘಾಟನೆ ಆಗಿದೆ. ಇನ್ನು ಮುಂದೆ ರೈತರಿಗೆ ಭಾರತ್ ಯೂರಿಯ, ಭಾರತ್ ಪೊಟ್ಯಾಶ್, ಭಾರತ್ ಎಂಪಿಕೆ ಎನ್ನುವ ಭಾರತದ ಹೆಸರಿನಲ್ಲಿ ರಸಗೊಬ್ಬರಗಳು ಸಿಗುತ್ತದೆ. ರಸಗೊಬ್ಬರಗಳು, ಬೀಜಗಳು, ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಕೊಡುವುದಕ್ಕೆ, ಸಾವಯವ ಗೊಬ್ಬರ ಪಡೆಯಲು ಕಿಸಾನ್ ಸಮೃದ್ದಿ ಕೇಂದ್ರಗಳು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತೆ," ಎಂದರು.
ನಮ್ಮ ಸಾಧನೆ ನೋಡಿ ಅಂಕ ನೀಡಿ; ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಮನವಿ
ಇ-ನಾಮ್ಗೆ ಇನ್ನಷ್ಟು ಮಾರುಕಟ್ಟೆಗಳು ಜೋಡಣೆ ಆಗಬೇಕು
"ಈಗ ಹೇಗೆ ಆಪ್ಕಾಮ್ಸ್ ಇದೆ, ಅದೇ ರೀತಿ ಇಡೀ ರೈತರಿಗೆ ಸಿಗಬೇಕಾದ ಎಲ್ಲವೂ ಒಂದೇ ಕಡೆ ಸಿಗುತ್ತದೆ. ಆಂಧ್ರ ಪ್ರದೇಶದದಲ್ಲಿ ರೈತ ಬಂಧು ಯೋಜನೆ ಇದೆ. ಆ ರೈತ ಬಂಧು ಯೋಜನೆಯಲ್ಲಿ ಅಲ್ಲೇ ರಸಗೊಬ್ಬರ, ಬೀಜ ಸಿಗುತ್ತೆ, ಅಲ್ಲೇ ಖರೀದಿ ಕೇಂದ್ರ ಇದೆ, ಅಲ್ಲೇ ತರಕಾರಿ ಕೊಡಬಹುದು ಕೊಳ್ಳಬಹುದು. ಆ ರೀತಿಯ ಯೋಜನೆ ಇದೆ. ಆ ಮಾದರಿಯಲ್ಲಿ ಇಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ಮಾಡಿದೆ, ಇದರಿಂದ ರೈತರಿಗೆ ಅನುಕೂಲ ಆಗಬೇಕು. ಕೃಷಿ ಮಾರುಕಟ್ಟೆ ಇವತ್ತು ಇ-ನಾಮ್ ಹೆಸರಿನಲ್ಲಿ ಇಡೀ ದೇಶದಲ್ಲಿ ಕೆಲಸ ಮಾಡುತ್ತಿದೆ. ಇ-ನಾಮ್ಗೆ ಇನ್ನಷ್ಟು ಮಾರುಕಟ್ಟೆಗಳು ಜೋಡಣೆ ಆಗಬೇಕಿದೆ" ಎಂದು ಹೇಳಿದರು.
ಹೊರಗಡೆ ಮಾರ್ಕೆಟ್ ಮಾಡುವುದು ನಮ್ಮೆಲ್ಲರ ಜವಾಬ್ದಾರಿ
"ಇ-ನಾಮ್ ಮಾರುಕಟ್ಟೆ ಮೂಲಕ ಭಾರತದ ಆಹಾರ ಪದಾರ್ಥಗಳನ್ನು, ತರಕಾರಿಯನ್ನು, ಹಣ್ಣುಗಳನ್ನು ಹೊರದೇಶಕ್ಕೆ ಮಾರಾಟ ಮಾಡುವಂತಹ ಶಕ್ತಿ ನಮಗೆ ಬರಬೇಕು. ಚಿಕ್ಕಮಗಳೂರಿನ ಕಾಫಿ, ಆನ್ಲೈನ್ ಮೂಲಕ ಬೇರೆ ದೇಶಕ್ಕೆ ಹೋಗುತ್ತದೆ. ಅದೇ ರೀತಿಯ ಒಂದು ವ್ಯವಸ್ಥೆ ಎಲ್ಲಾ ಆಹಾರ ಪದಾರ್ಥಗಳಿಗೆ, ತರಕಾರಿಗಳಿಗೆ, ಹಣ್ಣುಗಳಿಗೆ ಬರಬೇಕಿದೆ. ನಾವು ಇಂದು ಹೆಚ್ಚುವರಿಯಾಗಿ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದೇವೆ. ನಮ್ಮ ದೇಶದ ಜನಕ್ಕೆ ತಿಂದು ಜಾಸ್ತಿ ಆಗುವಷ್ಟು ನಾವು ಬೆಳೆಯುತ್ತಿದ್ದೇವೆ. ಅದನ್ನು ಹೊರಗಡೆ ಮಾರ್ಕೆಟ್ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ಇವತ್ತು ಭಾರತದ ಆಂತರಿಕವಾಗಿ ಇ-ನಾಮ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಲವಾರು ಎಪಿಎಂಸಿಗಳನ್ನು ಜೋಡಿಸಿದೆ," ಎಂದರು.
ಮೋದಿ ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ ಎಂದ ಕೇಂದ್ರ ಸಚಿವೆ
ಹಾಸನಾಂಬ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, "ದೇಶಕ್ಕೆ ಒಳ್ಳೆಯದು ಮಾಡಲಿ, ಸಮೃದ್ಧಿಯಾಗಿರಲಿ, ದೇಶದ ರಕ್ಷಣೆ ಆಗಲಿ, ಎಲ್ಲಾ ಜನರು ಸುಖವಾಗಿರಲಿ ಎಂದು ಪ್ರಾರ್ಥನೆಯನ್ನು ಮಾಡಿದ್ದೇನೆ. ನರೇಂದ್ರ ಮೋದಿ ಅವರು ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಭಾರತಕ್ಕೆ ಹೊರ ದೇಶಕ್ಕೆ ಗೌರವ ಸಿಗುವಂತೆ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ದೇವರು
ಅವರಿಗೆ ಹೆಚ್ಚಿನ ದೀರ್ಘಾಯುಷ್ಯ, ಶಕ್ತಿಯನ್ನು ಕೊಡಬೇಕು. ನಮ್ಮ ಸರ್ಕಾರಕ್ಕೆ ದೇಶದ ಜನರ ರಕ್ಷಣೆ ಮತ್ತು ಅಭಿವೃದ್ಧಿ ಮಾಡಲು ಶಕ್ತಿ ಕೊಡಬೇಕೆಂದು ಪ್ರಾರ್ಥನೆ ಮಾಡಿದ್ದೇನೆ" ಎಂದು ಹೇಳಿದರು.
"ವರ್ಷಕ್ಕೊಮ್ಮೆ ಮಾತ್ರ ರಾಜ್ಯದ, ದೇಶದ ಜನರಿಗೆ ದೇವಿಯ ದರ್ಶನ ಸಿಗುತ್ತದೆ. ಅದಕ್ಕಾಗಿ ಜನರು ಬರುತ್ತಾರೆ. ನಮ್ಮ ಸರ್ಕಾರ ಇದ್ದಾಗ ಹಾಸನಾಂಬೆ ದೇವಾಲಯದ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇವು. ಆ ತಾಯಿಯ ಆಶೀರ್ವಾದದಿಂದ ಬರುವಂತಹ ದಿನಗಳಲ್ಲಿ ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯವನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಮುಖ್ಯವಾಗಿ ದೂರದಿಂದ ಬರುವವರಿಗೆ ವಸತಿ, ಶೌಚಾಲಯದಂತಹ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ," ಎಂದರು.