ಶ್ರವಣಬೆಳಗೊಳದಲ್ಲಿ ಸಾಂಗವಾಗಿ ನೆರವೇರಿದ ಸಪ್ತಮಿ ಪೂಜಾ ಮಹೋತ್ಸವ
ಶ್ರವಣಬೆಳಗೊಳ, ಜುಲೈ 30 : ಹಾಸನ ಜಿಲ್ಲೆ ಶ್ರವಣಬೆಳಗೊಳ ಪಟ್ಟಣದ ಜೈನ ಮಠದ ಮೇಲ್ಭಾಗದಲ್ಲಿರುವ ತ್ರಿಭುವನ ತಿಲಕ ಜಿನ ಚೈತ್ಯಾಲಯದ ವಾರ್ಷಿಕ ಮುಕುಟ ಸಪ್ತಮಿ ಪೂಜಾ ಮಹೋತ್ಸವವು ಜುಲೈ 30 ರಂದು ಅದ್ಧೂರಿಯಾಗಿ ನೆರವೇರಿತು. ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೆರವೇರಿದ ಸಪ್ತಮಿ ಪೂಜಾ ಮಹೋತ್ಸವವನ್ನು ನೂರಾರು ಭಕ್ತರು ಕಣ್ತುಂಬಿಸಿಕೊಂಡರು.
ಬೆಳಗ್ಗೆ 7 ಗಂಟೆಗೆ ನವಕಳಸ ಸಹಿತ ಪಂಚಾಮೃತ ಅಭಿಷೇಕ, 8 ಗಂಟೆಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ 23ನೇ ತೀರ್ಥಂಕರರಾದ ಶ್ರೀ ಪಾರ್ಶ್ವನಾಥ ಸ್ವಾಮಿಯ ಭವ್ಯ ಮೆರವಣಿಗೆ, 10:30ಕ್ಕೆ ಚಾವುಂಡರಾಯ ಸಭಾ ಮಂಟಪದಲ್ಲಿ 108 ಕಲಶಗಳಿಂದ ಮಹಾಭಿಷೇಕ ಸಹಿತ ಅಷ್ಟವಿಧಾರ್ಚನೆ, ಶಾಂತಿಧಾರ ಆರತಿ ಮತ್ತು ಪ್ರಸಾದ ವಿನಿಯೋಗ, ಮಧ್ಯಾಹ್ನ 2 ಗಂಟೆಗೆ ಪಂಚಪರಮೇಷ್ಟಿ ಆರಾಧನೆ, ಸಂಜೆ ಆರತಿ ಕಾರ್ಯಕ್ರಮ ನೆರವೇರಿತು.
ಶ್ರಿ ವರ್ಧಮಾನಸಾಗರ ಮಹಾರಾಜರು, ಶ್ರಿ ವಾಸುಪೂಜ್ಯಸಾಗರ ಮಹಾರಾಜರು, ಶ್ರೀ ಪಂಚಕಲ್ಯಾಣಕಸಾಗರ ಮಹಾರಾಜರು, ಶ್ರೀ ಚಂದ್ರಪ್ರಭಸಾಗರ ಮಹಾರಾಜರು ಮತ್ತು ಮುನಿ ವೃಂದದವರು ಹಾಗೂ ಸಂಘಸ್ಥ ತ್ಯಾಗಿಗಳು ಪಾವನ ಸಾನ್ನಿಧ್ಯವಹಿಸಿದ್ದರು. ಪೂಜಾ ವ್ಯವಸ್ಥೆಯನ್ನು ವ್ಯವಸ್ಥಾಪಕರಾದ ಜಂಬಿಗೆ ಕುಲದ ಗೌಡರ ಪದ್ಮಯ್ಯ ಶ್ರೇಷ್ಟಿ ಧರಣಯ್ಯ ಕುಟುಂಬ ವರ್ಗದವರು ನಡೆಸಿಕೊಟ್ಟರು.

ಚಾತುರ್ಮಾಸ
2018 ರ ಫೆಬ್ರವರಿಯಲ್ಲಿ ನೆರವೇರಲಿರುವ ಭಗಾವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿರುವ 80ಕ್ಕೂ ಹೆಚ್ಚು ತ್ಯಾಗಿಗಳು ಈ ಬಾರಿ ಶ್ರೀಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದಾರೆ.

ದಾನ ನೀಡಿದ ಭಕ್ತರು
ಅವರ ಆಹಾರದ ವ್ಯವಸ್ಥೆಗಾಗಿ ಮಂಡ್ಯದ ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜದವರು ಆಹಾರ ಧಾನ್ಯಗಳನ್ನು ಶ್ರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮುಖಾಂತರ ಸಮರ್ಪಿಸಿದರು.

ದಾನ ನೀಡಿದವರಿಗೆ ಗೌರವ
ಆಹಾರ ಧಾನ್ಯಗಳನ್ನು ನೀಡಿದ ಮಂಡ್ಯ ಜೈನ ಸಮಾಜದ ಅಧ್ಯಕ್ಷರಾದ ಬಿ.ಎಸ್.ಪದ್ಮನಾಭ್, ಕಾರ್ಯದರ್ಶಿ ಶ್ರೀಧರ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇದಕ್ಕೂ ಮುನ್ನ ಆಹಾರ ಧಾನ್ಯಗಳಿದ್ದ ವಾಹನವನ್ನು ಮಂಗಳ ವಾದ್ಯದೊಂದಿಗೆ ಬರಮಾಡಿಕೊಂಡು ಪ್ರತಿಷ್ಠಾಚಾರ್ಯರಾದ ಎಸ್.ಡಿ.ನಂದಕುಮಾರ್ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜೈನ ಸಮಾಜದ ಅಧ್ಯಕ್ಶರಾದ ಜಿ.ಪಿ.ಪದ್ಮಕುಮಾರ್ ಮತ್ತು ಮಹಿಳಾ ಸಮಾಜದ ಅಧ್ಯಕ್ಷರಾದ ಪೂರ್ಣಿಮಾ ಅನಂತಪದ್ಮನಾಭ್ ಇನ್ನಿತರರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಚರ್ಮರೋಗ ಉಚಿತ ಚಿಕಿತ್ಸಾ ಶಿಬಿರ
ಮಹಾಮಸ್ತಕಾಭಿಷೇಕ ಮಹೋತ್ಸವ-2018 ನಿಮಿತ್ತ ಶ್ರವಣಬೆಳಗೊಳದ ಶ್ರೀ ಧವಲತೀರ್ಥಂನ ಬಾಹುಬಲಿ ಮಕ್ಕಳ ಆಸ್ಪತ್ರೆಯಲ್ಲಿ ಜನಕಲ್ಯಾಣ ಯೋಜನೆ ವತಿಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಸಹಯೋಗದೊಂದಿಗೆ ಚರ್ಮರೋಗ ಉಚಿತ ಚಿಕಿತ್ಸಾ ಶಿಬಿರನ್ನು ಆಯೋಜಿಸಲಾಗಿತ್ತು.












Click it and Unblock the Notifications