ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ರೈಲ್ವೆ ಮಾರ್ಗ ದುರಸ್ತಿ ಯಶಸ್ವಿ
ಹಾಸನ, ಆಗಸ್ಟ್ 22 : ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಹಾಸನದ ಸಕಲೇಶಪುರ ಮತ್ತು ಕುಕ್ಕೆ ಸುಬ್ರಮಣ್ಯ ಸಂಪರ್ಕಿಸುವ ರೈಲು ಮಾರ್ಗಕ್ಕೆ ಹಾನಿಯಾಗಿತ್ತು. ಮಾರ್ಗದ ದುರಸ್ತಿ ಕಾರ್ಯವನ್ನು ಇಲಾಖೆ ಪೂರ್ಣಗೊಳಿಸಿದೆ.
ರೈಲು ಮಾರ್ಗಕ್ಕೆ ಹಾನಿಯಾಗಿದ್ದರಿಂದ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಈಗ ಹಳಿಗಳ ದುರಸ್ತಿಯನ್ನು ಮಾಡಿ, ರೈಲ್ವೆಯ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ.

ಹಳಿಗಳ ಮೇಲೆ ಗುಡ್ಡದ ಮಣ್ಣು ಕುಸಿದು ಬಿದ್ದಿತ್ತು, ಹಳಿಗಳ ಅಡಿ ಇರುವ ಮಣ್ಣು ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಇಲಾಖೆಯ ಸಿಬ್ಬಂದಿ ಹಳಿಗಳ ದುರಸ್ತಿ ಕಾರ್ಯವನ್ನು ನಡೆಸಿದ್ದಾರೆ.
ಸಕಲೇಶಪುರ-ಸುಬ್ರಮಣ್ಯ ನಡುವಿನ ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಬಂಡೆ ಉರುಳುವ ಹಂತದಲ್ಲಿತ್ತು. ಬಂಡೆಯನ್ನು ಸ್ಫೋಟಿಸಿ, ಜೆಸಿಬಿ ಸಹಾಯದಿಂದ ಅವುಗಳನ್ನು ತೆರವುಗೊಳಿಸಲಾಗಿದೆ. ಈ ಕಾಮಗಾರಿ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು.
ರೈಲ್ವೆ ಹಳಿಗಳಿಗೆ ಯಾವುದೇ ಅಪಾಯವಾಗಿಲ್ಲ. ಹಳಿಯ ಮೇಲೆ ಮಣ್ಣು ಕುಸಿದಿತ್ತು, ಅವುಗಳನ್ನು ತೆರವುಗೊಳಿಸಿ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications