ಪಿಎಸ್ಐ ಹಗರಣ: ಚನ್ನರಾಯಪಟ್ಟಣ ಪುರಸಭೆ ಸದಸ್ಯನ ಬಂಧನ
ಹಾಸನ, ಮೇ 10; ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪುರಸಭೆಯ ಹಾಲಿ ಸದಸ್ಯ ಸಿ. ಎನ್. ಶಶಿಧರ್ ಬಂಧಿಸಲಾಗಿದೆ. ಹಗರಣದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಶಶಿಧರ್ ಬಂಧನದ ಬಳಿಕ ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದ ಬೆಕ್ಕ ಗ್ರಾಮದ ವೆಂಕಟೇಶ್ಗೆ ಕೆಲಸ ಕೊಡಿಸಲು ಡೀಲ್ ಮಾಡಿಸಿದ್ದ ಆರೋಪದ ಮೇಲೆ ಈ ಬಂಧನ ನಡೆದಿದೆ.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಶಶಿ ನಂತರದ ದಿನಗಳಲ್ಲಿ ಬಿಜೆಪಿ ನಾಯಕರ ಜೊತೆಗೆ ಸಖ್ಯ ಬೆಳೆಸಿಕೊಂಡಿದ್ದರು. ಶಶಿ ಸಂಬಂಧಿಯೂ ಆಗಿರುವ ಬೆಕ್ಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೇಶವಮೂರ್ತಿಯನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು.
ಪಿಎಸ್ಐ ಆಗಿ ಆಯ್ಕೆಯಾಗಿದ್ದ ವೆಂಕಟೇಶ್ ಮತ್ತು ಅವರ ತಂದೆ ಚಂದ್ರಶೇಖರ್ ಬಂಧಿಸಲಾಗಿತ್ತು. ಪ್ರಭಾವಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಂಬಂಧ ಹೊಂದುವ ಮೂಲಕ ಡೀಲ್ ಕುದುರಿಸಿರುವ ಆರೋಪದ ಮೇಲೆ ಶಶಿಧರ್ ಬಂಧಿಸಿ ಸಿಐಡಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಪಿಎಸ್ಐ ಹಗರಣ; ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈಗ ಹಗರಣದ ವ್ಯಾಪ್ತಿ ಹಾಸನ ಜಿಲ್ಲೆಗೂ ಹಬ್ಬಿದೆ. ಜಿಲ್ಲೆಯ ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ ತಾಲ್ಲೂಕಿಗೆ ಸೇರಿದ ಒಟ್ಟು ಮೂವರು ಅಭ್ಯರ್ಥಿಗಳನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.
ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೇ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ ಸೇರಿದಂತೆ ಮೂವರು ಸ್ಥಳೀಯ ರಾಜಕಾರಣಿಗಳನ್ನು ಸಹ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Recommended Video